ಕೊಡಗು: ತುಂಬಿದ ಹಾರಂಗಿ ಡ್ಯಾಂಗೆ ಶಾಸಕ ಮಂತರ್ ಗೌಡ ಬಾಗಿನ ಅರ್ಪಣೆ

By Girish GoudarFirst Published Oct 18, 2024, 9:30 PM IST
Highlights

ನಿನ್ನೆಯಷ್ಟೇ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದ್ದು ಆ ತೀರ್ಥವನ್ನು ತಂದು ಹಾರಂಗಿ ಜಲಾಶಯದ ಅಣೆಕಟ್ಟೆ ಮುಂಭಾಗದಲ್ಲಿ ಇರುವ ಕಾವೇರಿ ಪ್ರತಿಮೆಗೆ ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ಜನರೊಂದಿಗೆ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳ ವಾದ್ಯಗಳೊಂದಿಗೆ ಹಾರಂಗಿ ಜಲಾಶಯಕ್ಕೆ ಮೆರವಣಿಗೆ ತೆರಳಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಯಿತು. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಅ.18):   ಕೊಡಗಿನ ಏಕೈಕ ಜಲಾಶಯ ಹಾರಂಗಿ ಸಂಪೂರ್ಣ ಭರ್ತಿಯಾಗಿದ್ದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಇಂದು(ಶುಕ್ರವಾರ) ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ತಮ್ಮ ತಂದೆಯಾಗಿರುವ ಅರಕಲಗೂಡು ಶಾಸಕ ಎ. ಮಂಜು ಅವರೊಂದಿಗೆ ಬಾಗಿನ ಅರ್ಪಿಸಿದರು. 

Latest Videos

ನಿನ್ನೆಯಷ್ಟೇ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದ್ದು ಆ ತೀರ್ಥವನ್ನು ತಂದು ಹಾರಂಗಿ ಜಲಾಶಯದ ಅಣೆಕಟ್ಟೆ ಮುಂಭಾಗದಲ್ಲಿ ಇರುವ ಕಾವೇರಿ ಪ್ರತಿಮೆಗೆ ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು, ರೈತ ಮುಖಂಡರು ಹಾಗೂ ನೀರು ಬಳಕೆದಾರರ ಸಂಘದ ಮುಖಂಡರನ್ನು ಒಳಗೊಂಡು ನೂರಾರು ಜನರೊಂದಿಗೆ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳ ವಾದ್ಯಗಳೊಂದಿಗೆ ಹಾರಂಗಿ ಜಲಾಶಯಕ್ಕೆ ಮೆರವಣಿಗೆ ತೆರಳಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಯಿತು. 

ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್‌ಗೆ ಟಿಕೆಟ್ ಕೊಟ್ಟರೆ ಯೋಗೇಶ್ವರ್ ಬಂಡಾಯ ಸಾರಲ್ಲ, ಎ.ಮಂಜು

ಈ ಸಂದರ್ಭ ಮಾತನಾಡಿದ ಮಡಿಕೇರಿ ಶಾಸಕ ಮಂತರ್ ಗೌಡ ಅವರು, ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಅದರಲ್ಲೂ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಮಳೆಯಾಗಿದೆ. ವಾಡಿಕೆಗಿಂತ ಶೇ.60 ಕ್ಕಿಂತಲೂ ಹೆಚ್ಚು ಮಳೆಯಾಗಿದೆ. ಇದರಿಂದ ಹಾರಂಗಿ ಜಲಾಶಯದಲ್ಲಿ ಇಂದಿಗೂ ಪೂರ್ಣ ಪ್ರಮಾಣದಲ್ಲಿ ನೀರಿದೆ. ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿರುವ ಹಾರಂಗಿ ಅಚ್ಚುಕಟ್ಟು ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಈಗಲೂ ಕಾಲುವೆಗಳಲ್ಲಿ ಸಾಕಷ್ಟು ನೀರು ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲೂ ನೀರು ಹರಿಸಲಾಗುವುದು. ಮಳೆಗಾಲದಲ್ಲಿ ಸಾಕಷ್ಟು ಮಳೆ ಸುರಿದಿದ್ದ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬಂದಿತು. ಆದರೆ ಯಾವುದೇ ತೊಂದರೆ ಆಗದಂತೆ ಹಾರಂಗಿ ಇಲಾಖೆ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ನೀರಿನ ನಿರ್ವಹಣೆ ಮಾಡಿದ್ದಾರೆ. ಇದರಿಂದಾಗಿ ಯಾವುದೇ ಸಮಸ್ಯೆ ಆಗಲಿಲ್ಲ ಎಂದಿದ್ದಾರೆ. 

ಜಲಾಶಯದಲ್ಲಿ ಸಾಕಷ್ಟು ಹೂಳು ತುಂಬಿದ್ದು, ನೀರು ಕಡಿಮೆಯಾಗುತ್ತಿದ್ದಂತೆ ಹೂಳೆತ್ತಲು ಕ್ರಮ ವಹಿಸಲಾಗುವುದು. ಈಗಾಗಲೇ ಹಾರಂಗಿ ಜಲಾಶಯಕ್ಕೆ ನೀರು ಹರಿದು ಬರುವ ನದಿಗಳಲ್ಲೂ ಹೂಳು ತೆಗೆದು ತಡೆಗೋಡೆಗಳನ್ನು ನಿರ್ಮಿಸುವ ಕೆಲಸವೂ ನಡೆಯುತ್ತಿದೆ ಎಂದಿದ್ದಾರೆ. 

ತಲಕಾವೇರಿ: ನಿಮಿಷ ತಡವಾಗಿ ತೀರ್ಥರೂಪಿಣಿಯಾದ ಕಾವೇರಿ ಮಾತೆ!

ಇನ್ನು 6 ರಿಂದ 14 ನೇ ಕಿಲೋ ಮೀಟರ್ ದೂರದವರೆಗಿನ ಮುಖ್ಯ ಕಾಲುವೆ ದುರಸ್ಥಿಗೆ ಸರ್ಕಾರದಿಂದ 72 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಈಗಾಗಲೇ ಟೆಂಡರ್ ಕೂಡ ಆಗಿದ್ದು ತಾಂತ್ರಿಕ ಒಪ್ಪಿಗೆ ಕೂಡ ದೊರೆತ್ತಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದಿದ್ದಾರೆ. 

ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಬಳಿಕ ರೈತ ಮುಖಂಡರು, ಹಾರಂಗಿ ನೀರು ಬಳಕೆದಾರರ ಸಂಘದ ಮುಖಂಡರು ಸೇರಿದಂತೆ ಪ್ರಮುಖರಿಗೆ ಸನ್ಮಾನವನ್ನೂ ಮಾಡಲಾಯಿತು.  ಇನ್ನು ಹಾರಂಗಿ ಜಲಾಶಯದ ಬಳಿಗೆ ಆಗಮಿಸಿದ್ದ ನೂರಾರು ರೈತರಿಗೆ ಶಾಸಕ ಮಂತರ್ ಗೌಡ ಒಬ್ಬಟ್ಟು ತುಪ್ಪ ಸೇರಿದಂತೆ ಭೂರಿ ಭೋಜನ ಮಾಡಿದರು. ಇಂತಹ ಸಂಪ್ರದಾಯ ಇದೇ ಮೊದಲ ಬಾರಿಗೆ ಮಾಡಿರುವುದು ನಮಗೆಲ್ಲಾ ಸಾಕಷ್ಟು ಸಂತಸ ತಂದಿದೆ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. 

click me!