ಜೈನ ಬಸದಿಯಲ್ಲಿ ನಡೀತು ಹೈಡ್ರಾಮಾ: ಗರ್ಭಗುಡಿಯಿಂದ ಆವರಣಕ್ಕೆ ಬಂತು ದೇವರ ಮೂರ್ತಿ..!

By Girish GoudarFirst Published Apr 3, 2022, 7:46 PM IST
Highlights

*  ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದ ಘಟನೆ
*  ಜೈನ ಬಸದಿ ಜೀರ್ಣೋದ್ಧಾರ ವಿಚಾರಕ್ಕೆ ಗಲಾಟೆ 
*  'ಕಿಂದರಜೋಗಿ' ಚಲನಚಿತ್ರದ ಮಾದರಿಯ ಘಟನೆ 
 

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಏ.03): ತಾವೆಲ್ಲಾ ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandra) ನಟಿಸಿ ನಿರ್ದೇಶಿಸಿರುವ ಕಿಂದರಜೋಗಿ ಚಲನಚಿತ್ರ ನೋಡಿದ್ರೆ ಆ ಚಿತ್ರದ ಒಂದು ಸೀನ್ ಪಕ್ಕಾ ನೆ‌ನಪಿರುತ್ತೆ. ಕಿಂದರಜೋಗಿ ಚಿತ್ರದಲ್ಲಿ ಹನುಮಂತನ ದೇವಸ್ಥಾನದ(Hanuman Temple) ವಿಚಾರಕ್ಕೆ ಗ್ರಾಮಸ್ಥರ ಮಧ್ಯೆ ಗಲಾಟೆ ನಡೆದು ಗರ್ಭಗುಡಿಯಲ್ಲಿದ್ದ ಹನುಮಂತನ ಮೂರ್ತಿಯನ್ನು ಬೀದಿಗೆ ತಂದು ನಿಲ್ಲಿಸಿರ್ತಾರೆ. ಇದಕ್ಕೆ ಹೋಲುವಂತಹ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ(Belagavi) ತಾಲೂಕಿನ ಮಚ್ಛೆ ಗ್ರಾಮದಲ್ಲಿ ಪುರಾತನ ಕಾಲದ ಜೈನ ಮಂದಿರವಿದೆ(Jain Temple). ಜೈನ ಮಂದಿರದ ಜೀರ್ಣೋದ್ಧಾರ ವಿಚಾರಕ್ಕೆ ಜೈನ ಸಮುದಾಯದ(Jain Community) ಎರಡು ಪಂಗಡಗಳ ಮಧ್ಯೆ ಗಲಾಟೆ ಉಂಟಾಗಿದೆ. ಜೈನ ಮಂದಿರದಲ್ಲಿರುವ ಜಿನಬಿಂಬ ಉತ್ತಾಪನೆ ಮಾಡುವ ವೇಳೆ ಎರಡು ಪಂಗಡಗಳ ಸದಸ್ಯರ ಮಧ್ಯೆ ಘರ್ಷಣೆ ನಡೆದಿದ್ದು ಮಂದಿರದಲ್ಲಿದ್ದ ಮೂರ್ತಿ ಆವರಣಕ್ಕೆ ಬಂದಿದೆ. ಮಚ್ಛೆ ಗ್ರಾಮದ 1008 ಭಗವಾನ್ ಮಹಾವೀರ ದಿಗಂಬರ ಜೈನ ಮಂದಿರ ಜೀರ್ಣೊದ್ಧಾರ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ‌. 

Belagavi Crime: ಕುಂದಾನಗರಿಯಲ್ಲಿ ಯುವಕನ ಬರ್ಬರ ಹತ್ಯೆ: ಸರಣಿ ಕೊಲೆಗಳಿಂದ‌ ಬೆಚ್ಚಿ ಬಿದ್ದ ಜನ..!

ಜೈನ ಮಂದಿರದಲ್ಲಿ ಎರಡು ಕಮೀಟಿಗಳಾಗಿವೆ. ಶ್ರೀ 1008 ಮಹಾವೀರ ದಿಗಂಬರ ಜೈನ ಬಸದಿ ವ್ಯವಸ್ಥಾಪಕ ಸಂಘ ಹಾಗೂ ಶ್ರೀ ಮಹಾವೀರ ಚೈತ್ರಾಲಯ ಟ್ರಸ್ಟ್ ಕಮೀಟಿ ಮಧ್ಯೆ ಹಲವು ವರ್ಷಗಳಿಂದ ಜಗಳವಿದ್ದು ಹೈಕೋರ್ಟ್‌ನಲ್ಲಿ ಕೇಸ್ ದಾಖಲಾಗಿ ಮಾ.31ರಂದು ವಿಚಾರಣೆ ಮುಕ್ತಾಯವಾಗಿದ್ದು ತೀರ್ಪು ಸಹ ಬಂದಿದೆ. ಹೈಕೋರ್ಟ್‌ನಲ್ಲಿ(High Court) ತೀರ್ಪು ತಮ್ಮಂತೆ ಬಂದಿದ್ದು ಅದರಂತೆ ನಾವು ಜೀರ್ಣೋದ್ಧಾರ ಕಾರ್ಯ ನಡೆಸುತ್ತಿದ್ವಿ ಆದ್ರೆ ಇದಕ್ಕೆ ಬೋಗಸ್ ಕಮಿಟಿಯವರು ವಿರೋಧಿಸುತ್ತಿದ್ದಾರೆ ಎಂಬುದು 1008 ಮಹಾವೀರ ದಿಗಂಬರ ಜೈನ ಬಸದಿ ವ್ಯವಸ್ಥಾಪಕ‌ ಸಂಘದ ವಾದ. ಆದ್ರೆ ಮತ್ತೊಂದು ಕಮಿಟಿ ಆದಂತಗ ಶ್ರೀ ಮಹಾವೀರ ಜೈನ್ ಚೈತ್ರಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷರು ಹೇಳುವ ಪ್ರಕಾರ 'ತಮ್ಮದೇ ಮೂಲ ಕಮಿಟಿ ಇದ್ದು 1956ರಲ್ಲಿ ರಜಿಸ್ಟ್ರೇಷನ್ ಆಗಿದೆ. 

2013ರಲ್ಲಿ ಗೌಡರು ಮತ್ತು ರೈತರು ಅಂತಾ ಎರಡು ಪಂಗಡಗಳು ಆದವು. ಅವರು ಸೊಸೈಟಿ ರಜಿಸ್ಟ್ರೇಷನ್ ಮಾಡಿಕೊಂಡು ಬಸದಿ ನಮ್ಮದೇ ಅಂತಾ ಹೇಳಲು ಶುರು ಮಾಡಿದ್ರು. ಟ್ರಸ್ಟಿ ಮೊಮ್ಮಗನ ಜತೆ ಸೇರಿ ನಾವು ಕಮಿಟಿ ಮಾಡಿದ್ವಿ. ಅದಕ್ಕೆ ಅವರು ವಿರೋಧ ಮಾಡಿ ಕೋರ್ಟ್‌ನಿಂದ ತಡೆಯಾಜ್ಞೆ ತಂದ್ರು. ಮಾ. 31ರಂದು ಹೈಕೋರ್ಟ್‌ನಲ್ಲಿ ಇದ್ದ ಕೇಸ್ ಮುಗಿದಿದ್ದು ಹೈಕೋರ್ಟ್ ಏನು ತೀರ್ಪು ನೀಡಿದೆ ಗೊತ್ತಿಲ್ಲ. ಆದ್ರೆ ತೀರ್ಪಿನ ಪ್ರತಿ ಸಿಗುವ ಮುನ್ನವೇ ನಿನ್ನೆ ರಾತ್ರಿ ಯಾರಿಗೂ ಗೊತ್ತಾಗದ ರೀತಿ ಮೂರ್ತಿ ಹೊರಗೆ ತಗೆದಿದ್ದಾರೆ‌. ಮೂರ್ತಿ ಬೇರೆಡೆ ತಗೆದುಕೊಂಡು ಹೋಗಲು ಯತ್ನಿಸಿದ್ರು. ಅದಕ್ಕೆ ನಾವು ತಡೆ ಹಿಡಿದಿದ್ದು ಈಗ ಮೂರ್ತಿ ಆವರಣದಲ್ಲಿ ಇದೆ. ಸಮಾಜ ಸಣ್ಣದಿದ್ದು ಎಲ್ಲರೂ ಸೇರಿ ಬಸದಿ ಕಟ್ಟೋಣ ಅಂದ್ರೆ ನಿಮ್ಮನ್ನ ನಾವು ಸೇರಿಸಲ್ಲ ಅಂತಿದ್ದಾರೆ. ಮಚ್ಛೆ ಊರಲ್ಲೇ ಇರುವ 50 ಗುಂಟೆ ಜಮೀನನ್ನು ಗೌಡರು ತಮ್ಮ ಹೆಸರಿಗೆ ಮಾಡಿಕೊಂಡಿದ್ದು ಆ ಜಮೀನು(Land) ವಶಕ್ಕೆ ಪಡೆಯಲು ಇಲ್ಲಿ ಎಂಟ್ರಿ ಹೊಡಿತಿದ್ದಾರೆ. 

ಮುಸ್ಲಿಂ(Muslim) ಸಮುದಾಯದ ಓರ್ವ ವ್ಯಕ್ತಿ ಹಲವು ವರ್ಷಗಳ ಹಿಂದೆ ಬಸದಿಗೆ ಜಮೀನು ನೀಡಿದ್ದರು. ಯಾರೂ ಬಸದಿ ಪೂಜೆ ಮಾಡುತ್ತಾರೋ ಆ ಜಮೀನಿನಲ್ಲಿ ಕೃಷಿ ಮಾಡಿ ಜೀವನ ಸಾಗಿಸಬೇಕೆಂದು ಮಾತಾಗಿತ್ತು. ಆ ಜಮೀನು ತಮ್ಮಂತೆ ಮಾಡಿಕೊಳ್ಳಲು ಈ ಕುತಂತ್ರ ನಡೆಸಿದ್ದಾರೆ. ಹೈಕೋರ್ಟ್ ತೀರ್ಪು ಅವರಂತ ಇದ್ರೆ ನಾವು ಬಿಟ್ಟು ಹೋಗ್ತೀವಿ ಅಂದ್ರೂ ಕೇಳ್ತಿಲ್ಲ. ಅವರು ನಮಗೆ ಹೈಕೋರ್ಟ್ ತೀರ್ಪಿನ ಪ್ರತಿ ತೋರಿಸಲಿ ಅಂತಾ ಚೈತ್ರಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹಾವೀರ ಪಾಟೀಲ್ ತಿಳಿಸಿದ್ದಾರೆ.

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ 1008 ಮಹಾವೀರ ದಿಗಂಬರ ಜೈನ ಬಸದಿ ವ್ಯವಸ್ಥಾಪಕ‌ ಸಂಘದ ಅಧ್ಯಕ್ಷ ಡಾ.ಪದ್ಮರಾಜ ಪಾಟೀಲ್, ಸುಮಾರು ನೂರು ವರ್ಷದಿಂದ ಈ ಬಸದಿ ಇದೆ. ಈ ಗ್ರಾಮದ ಪಾಟೀಲ ಬಂಧುಗಳು ಈ ಬಸದಿ ಕಟ್ಟಿದ್ದಾರೆ‌. ನಾವೇ ಈ ಬಸದಿ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಬಸದಿ ಜೀರ್ಣೋದ್ಧಾರ ಮಾಡಲು ನಾವು ಮುಂದಾಗಿದ್ದೇವೆ. ಆದ್ರೆ ಕೆಲ ದುಷ್ಕರ್ಮಿಗಳು ನಮ್ಮ ಹೆಸರು ಬಳಸಿ ಬೋಗಸ್ ಕಮಿಟಿ ಮಾಡಿದ್ರು. ಅದರ ವಿರುದ್ಧ ನಾವು ಧಾರವಾಡ ಹೈಕೋರ್ಟ್ ಪೀಠದಲ್ಲಿ ಮನವಿ ಮಾಡಿದ್ವಿ. ನಮ್ಮ ಮನವಿಗೆ ಹೈಕೋರ್ಟ್ ಸ್ಪಂದಿಸಿ ನಮ್ಮಂತೆ ತೀರ್ಪು ನೀಡಿದೆ. ಈ ಬಸದಿಯ ಮೂಲ ಮಾಲೀಕರು ನಾವು. ಎಲ್ಲಾ ದಾಖಲೆ ನಮ್ಮ ಬಳಿ ಇದೆ. ಹೀಗಾಗಿ ಯುಗಾದಿ ಮಾರನೇಯ ದಿನ ಅಮೃತಿಸಿದ್ಧಿಯೋಗ ಒಳ್ಳೆಯ ದಿವಸ ಅಂತಾ ಜೀರ್ಣೊದ್ಧಾರ ಕಾರ್ಯ ಆರಂಭಿಸಿದ್ದೀವಿ. ಇಂಡಿಯಿಂದ ಚಂದ್ರಕಾಂತ ಪಂಡಿತರನ್ನು ಕರೆಯಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸುವ ವೇಳೆ ಹಲ್ಲೆ ಮಾಡಿದ್ದಾರೆ.

Belagavi: ಹಲಾಲ್-ಜಟ್ಕಾ ಮಧ್ಯೆ ಭಾವೈಕ್ಯತೆಯ ಸಂದೇಶ: ಮುಸ್ಲಿಮರಿಂದಲೂ ಕೃಷ್ಣಾ ಪುಣ್ಯ ಸ್ನಾನ

ಈ ಕುರಿತು ಗ್ರಾಮೀಣ ಠಾಣೆಗೆ ದೂರು ನೀಡಿದ್ದೇವೆ. ನ್ಯಾಯಾಲಯ ತೀರ್ಪು ನಮ್ಮಂತಿದೆ. ಅವರಿಗೂ ಬಸದಿಗೂ ಏನೂ ಸಂಬಂಧ ಇಲ್ಲ. ನಾಳೆ ಹೈಕೋರ್ಟ್ ತೀರ್ಪಿನ ಪ್ರತಿ ಸಿಗುತ್ತೆ. ಅದನ್ನ ಪಡೆದು ನಾವು ನಾಳೆ ಮತ್ತೆ ಬರ್ತೀವಿ. ಬೋಗಸ್ ಕಮಿಟಿ ಮಾಡಿದ್ದು ಇವರ್ಯಾರು ಬಸದಿಗೆ ಸಂಬಂಧ ಇಲ್ಲ. ಐವತ್ತು ಗುಂಟೆ ಜಮೀನು ನಮ್ಮ ಹಿರಿಯರದ್ದು ನಮ್ಮ ಹೆಸರಲ್ಲೇ ಇದೆ. ನಾಳೆ ಅಥವಾ ನಾಡಿದ್ದು ಹೈಕೋರ್ಟ್ ತೀರ್ಪಿನ ಪ್ರತಿ ನಮ್ಮ ಕೈ ಸೇರುತ್ತೆ. ಇದು ನಮ್ಮದೇ ಬಸದಿ‌. ನಾವು ಇದರ ಜೀರ್ಣೊದ್ಧಾರ ಮಾಡೇ ಮಾಡ್ತೀವಿ ಅಂತಾ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಒಂದೇ ಸಮುದಾಯದ ಎರಡು ಪಂಗಡಗಳ ಮಧ್ಯದ ಗಲಾಟೆಯಲ್ಲಿ ದೇವರ ಮೂರ್ತಿ ಗರ್ಭಗುಡಿಯಿಂದ ಆವರಣದ ಹೊರಗೆ ಬರುವಂತಾಗಿದೆ. ಏನೇ ಸಮಸ್ಯೆ ಇದ್ದರೂ ಪರಸ್ಪರ ಮಾತಾಡಿಕೊಂಡು ಬಗೆಹರಿಸಿಕೊಳ್ಳಬಹುದಿತ್ತು. ಈ ಮಟ್ಟಿಗೆ ಹೈಡ್ರಾಮಾ ಸೃಷ್ಟಿಸೋದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.
 

click me!