ರೈತರ ಅನುಕೂಲಕ್ಕಾಗಿ ಭೂಮಿ ಶಾಖೆ: ಬಾಲಚಂದ್ರ ಜಾರಕಿಹೊಳಿ

By Kannadaprabha NewsFirst Published Jun 19, 2022, 1:00 AM IST
Highlights

*  ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಲು ಅಗತ್ಯವಿರುವ ಭೂಮಿ ಶಾಖೆ ಮೂಡಲಗಿಯಲ್ಲಿಯೇ ಆರಂಭ
*  ರಾಜ್ಯದಲ್ಲಿಯೇ ಮೂಡಲಗಿ ತಾಲೂಕು ಭೂಮಿ ಶಾಖೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ
*  ಇನ್ನೊಂದು ವಾರದೊಳಗೆ ಮೂಡಲಗಿ ತಾಲೂಕಿನ ಬಹುನಿರೀಕ್ಷಿತ ಉಪನೋಂದಣಿ ಕಚೇರಿ ಕಾರ್ಯಾರಂಭ 

ಮೂಡಲಗಿ(ಜೂ.19):  ಮೂಡಲಗಿ ತಾಲೂಕಿನ ರೈತರ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಮೂಡಲಗಿಯಲ್ಲಿ ಹೊಸದಾಗಿ ಭೂಮಿ ಶಾಖೆಯನ್ನು ಆರಂಭಿಸಲಾಗಿದೆ ಎಂದು ಕೆಎಮ್‌ಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ನೂತನವಾಗಿ ಮೂಡಲಗಿ ತಾಲೂಕಿನ ಭೂಮಿ ಶಾಖೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಗೋಕಾಕ ತಾಲೂಕಿನಲ್ಲಿದ್ದ ಭೂಮಿ ಶಾಖೆಯನ್ನು ಬೇರ್ಪಡಿಸಿ ಮೂಡಲಗಿ ಹೊಸ ತಾಲೂಕಿಗೆ ಭೂಮಿ ಶಾಖೆಯನ್ನು ತೆರೆದಿದ್ದು, ಮೂಡಲಗಿ ತಾಲೂಕಿನ ಎಲ್ಲ ರೈತ ಭಾಂಧವರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮೂಡಲಗಿ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷ ಪೂರೈಸಿದ್ದರೂ ಇಲ್ಲಿಯತನಕ ಭೂಮಿ ಪಹಣಿ ಪತ್ರಕ್ಕೆ ಮೂಡಲಗಿ ತಾಲೂಕಿನ ನಾಗರಿಕರು ಗೋಕಾಕ ನಗರಕ್ಕೆ ಹೋಗಬೇಕಿತ್ತು, ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಲು ಅಗತ್ಯವಿರುವ ಭೂಮಿ ಶಾಖೆಯನ್ನು ಮೂಡಲಗಿಯಲ್ಲಿಯೇ ಆರಂಭಿಸಲಾಗಿದೆ. ರಾಜ್ಯದಲ್ಲಿಯೇ ಮೂಡಲಗಿ ತಾಲೂಕು ಭೂಮಿ ಶಾಖೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ ಎಂದು ತಿಳಿಸಿದರು.

Latest Videos

ಬೆಳಗಾವಿಗೂ ಕಾಲಿಟ್ಟ 'ಅಗ್ನಿಪಥ್' ಜ್ವಾಲೆ: ಜೂ.20ರಂದು ಗಡಿ ಜಿಲ್ಲೆ ಬಂದ್ ಆಗುತ್ತಾ?

ಮೂಡಲಗಿ ತಾಲೂಕಿನ ಸರ್ವಾಂಗಿಣ ಪ್ರಗತಿಗಾಗಿ ಸಾಕಷ್ಟುಪ್ರಗತಿಪರ ಕಾಮಗಾರಿಗಳನ್ನು ಮಾಡಲಾಗುತ್ತಿದೆ, ತಾಲೂಕು ಮಟ್ಟದ ಹೊಸ ಸರ್ಕಾರಿ ಕಚೇರಿಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ, ಡಿಸೆಂಬರ ತಿಂಗಳ ಅಂತ್ಯದೊಳಗೆ ಬಹುತೇಕ ತಾಲೂಕಾ ಮಟ್ಟದ ಕಚೇರಿಗಳನ್ನು ಆರಂಭಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ, ಇನ್ನೊಂದು ವಾರದೊಳಗೆ ಮೂಡಲಗಿ ತಾಲೂಕಿನ ಬಹುನಿರೀಕ್ಷಿತ ಉಪನೋಂದಣಿ ಕಛೇರಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

ಕರ್ನಾಟಕದ ಗಡಿಯೊಳಗೆ ಮಹಾರಾಷ್ಟ್ರ ಸರ್ಕಾರ ನಾಮಫಲಕ: ಕನ್ನಡಿಗರ ಆಕ್ರೋಶ..!

ಮೂಡಲಗಿ ಪಟ್ಟಣದ ಮುಖ್ಯ ಮತ್ತು ಒಳ ರಸ್ತೆಗಳು ಸೇರಿದಂತೆ ಅರಭಾವಿ ಮತಕೇತ್ರದ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗುತ್ತಿದೆ, ಎಲ್ಲ ರಸ್ತೆ ಕಾಮಗಾರಿಗಳು ಸಹ ಪ್ರಗತಿಯಲ್ಲಿವೆ, ಕೋವಿಡ್‌-19 ಕಾರಣದಿಂದ ಸರ್ಕಾರದಿಂದ ಅನುದಾನ ಕೊರತೆ ಎದುರಾಗಿದ್ದರಿಂದ ಕೆಲ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಡೆತಡೆಗಳಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಅವರಿಗೆ ಪಹಣಿ ಪತ್ರ ವಿತರಿಸುವ ಮೂಲಕ ಭೂಮಿ ಶಾಖೆಗೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬೈಲಹೊಂಗಲ ಉಪವಿಭಾಧಿಕಾರಿ ಶಶಿಧರ ಬಗಲಿ, ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್‌, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ಪಟ್ಟಣದ ಹಲವು ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

click me!