ಮೂಡುಬಿದಿರೆ ಕ್ಷೇತ್ರ: ಮೂಲ್ಕಿಗೆ ಬಸ್‌ ನಿಲ್ದಾಣ, ಒಳಚರಂಡಿ ಕೊರತೆ

Published : May 25, 2023, 04:44 AM IST
ಮೂಡುಬಿದಿರೆ ಕ್ಷೇತ್ರ: ಮೂಲ್ಕಿಗೆ ಬಸ್‌ ನಿಲ್ದಾಣ, ಒಳಚರಂಡಿ ಕೊರತೆ

ಸಾರಾಂಶ

ಎರಡು ತಾಲೂಕುಗಳನ್ನು ಹೊಂದಿರುವ ಎರಡು ಕ್ಷೇತ್ರಗಳಲ್ಲಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವೂ ಒಂದು. ಮೂಲ್ಕಿ-ಮೂಡುಬಿದಿರೆ ತಾಲೂಕುಗಳು ಸೇರಿರುವ ಕ್ಷೇತ್ರದಲ್ಲಿ ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ಶಾಸಕರ ಮುಂದಿರುವ ಪ್ರಮುಖ ಸವಾಲುಗಳು.

ಪ್ರಕಾಶ್‌ ಎಂ.ಸುವರ್ಣ

ಮೂಲ್ಕಿ (ಮೇ.25) : ಎರಡು ತಾಲೂಕುಗಳನ್ನು ಹೊಂದಿರುವ ಎರಡು ಕ್ಷೇತ್ರಗಳಲ್ಲಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವೂ ಒಂದು. ಮೂಲ್ಕಿ-ಮೂಡುಬಿದಿರೆ ತಾಲೂಕುಗಳು ಸೇರಿರುವ ಕ್ಷೇತ್ರದಲ್ಲಿ ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ಶಾಸಕರ ಮುಂದಿರುವ ಪ್ರಮುಖ ಸವಾಲುಗಳು.

ಅಭಿವೃದ್ಧಿ ಹೊಂದುತ್ತಿರುವ ಮೂಲ್ಕಿ(mulki), ಕಿನ್ನಿಗೋಳಿಗೆ ಸುಸಜ್ಜಿತ ಬಸ್‌ ನಿಲ್ದಾಣ ಅಗತ್ಯವಿದೆ. ಮೂಲ್ಕಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್‌ ಅಭಿವೃದ್ಧಿಯಾದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆಯುವುದು ಖಚಿತ.

ಸವಾಲಿನ ಹಾದಿ: ಹಿಂದುಳಿದ ತಾಲೂಕು ಕೂಡ್ಲಿಗಿ ಇನ್ನಾದರೂ ಪ್ರಗತಿಯ ಹಾದಿ ಹಿಡಿದಿತೇ?

ಬಜ್ಪೆ ಪ್ರದೇಶದಲ್ಲಿ ಎಂಆರ್‌ಪಿಎಲ್‌ ಉದ್ಯಮ ಕಾರ್ಯಾಚರಿಸುತ್ತಿದ್ದು, ಇಲ್ಲಿನ ನಿರ್ವರಿಸತರು ನಿರುದ್ಯೋಗಿಗಳಾಗಿದ್ದು ಇದಕ್ಕೆ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಬಳ್ಕುಂಜೆ ಕೈಗಾರಿಕಾ ಕಾರಿಡಾರ್‌, ಮೂಲ್ಕಿ ತಾಲೂಕಿನಲ್ಲಿರುವ ಕಟೀಲು ಮತ್ತು ಬಪ್ಪನಾಡು ಕ್ಷೇತ್ರ ಅಭಿವೃದ್ಧಿ ಪ್ರವಾಸೋದ್ಯಮಕ್ಕೆ ಪೂರಕ.

ನೀರಿನ ಸಮಸ್ಯೆ: ಮೂಲ್ಕಿ ನ.ಪಂ., ಕಿನ್ನಿಗೋಳಿ ಪ.ಪಂ. ಅತಿಕಾರಿಬೆಟ್ಟು, ಕಿಲ್ಪಾಡಿ, ಬಳ್ಕುಂಜೆ, ಐಕಳ, ಪಡುಪಣಂಬೂರು, ಹಳೆಯಂಗಡಿ ಹಾಗೂ ಕೆಮ್ರಾಲ್‌ ಗ್ರಾ.ಪಂ. ಒಳಗೊಂಡ 7 ಗ್ರಾ.ಪಂ.ಗಳಿಗೆ ಬಳ್ಕುಂಜೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದೆ. ಈ ಮೂಲಕ ಬಳ್ಕುಂಜೆ ಗ್ರಾ.ಪಂ.ನ ಕೊಲ್ಲೂರುಪದವು ಮೂಲಕ ನೀರು ಸರಬರಾಜು ಆಗುತ್ತಿದ್ದು ಸ್ವಲ್ಪ ಮಟ್ಟಿನ ನೀರಿನ ಸಮಸ್ಯೆಯಿದೆ. ಕಟೀಲು, ಮೆನ್ನಬೆಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ ಅಧಿಕವಿದೆ. ಸುಮಾರು 10 ಸಾವಿರ ನಿವಾಸಿಗಳಿರುವ ಉ.ಕ. ವಲಸೆ ಕಾರ್ಮಿಕರನ್ನು ಹೊಂದಿರುವ ಲಿಂಗಪ್ಪಯ್ಯ ಕಾಡಿನಲ್ಲಿ ನೀರಿನ ಸಮಸ್ಯೆ ಅತಿಯಾಗಿದ್ದು ನಾಲ್ಕು ದಿನಕ್ಕೊಮ್ಮೆ ನೀರು ನೀಡಲಾಗುತ್ತಿದೆ.

ಮೂಲ್ಕಿ ಅಳಿವೆ ಬಳಿ ಶಾಂಭವಿ ನದಿಗೆ ಅಣೆಕಟ್ಟು ನಿರ್ಮಿಸಿದರೆ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ.

ಒಳ ಚರಂಡಿ ಸಮಸ್ಯೆ: ಮೂಲ್ಕಿ ನಗರ ಹಾಗೂ ಕಿನ್ನಿಗೋಳಿ ಪಟ್ಟಣದಲ್ಲಿ ಅತಿ ಹೆಚ್ಚು ವಸತಿ ಸಂಕೀರ್ಣಗಳಿದ್ದು ಈವರೆಗೆ ಒಳ ಚರಂಡಿ ವ್ಯವಸ್ಥೆಯಿಲ್ಲ. ಸಂಜೆಯ ಬಳಿಕ ಹೊಟೇಲ್‌, ವಸತಿ ಸಂಕೀರ್ಣದವರು ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿದ್ದು ಕೆಲವು ಕಡೆಗಳಲ್ಲಿ ದುರ್ನಾತ ಬೀರುತ್ತಿದೆ.

ಬಸ್‌ ನಿಲ್ದಾಣ: ಕೇರಳ-ಗೋವಾ-ಮಹಾರಾಷ್ಟ್ರ ಸಂಪರ್ಕದ ರಾಷ್ತಿ್ರೕಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಹಾದು ಹೋಗುತ್ತಿರುವ ಮೂಲ್ಕಿ ಪೇಟೆಯಲ್ಲಿ ಇವರೆಗೆ ಸುಸಜ್ಜಿತ ಬಸ್ಸು ನಿಲ್ದಾಣವಿಲ್ಲ. ಶೌಚಾಲಯ ಸೇರಿದಂತೆ ಮೂಲ ಭೂತ ಸೌಕರ್ಯಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ರಿಕ್ಷಾ, ಕಾರು ಪಾರ್ಕಿಂಗ್‌ಗೆ ಸೂಕ್ತ ಜಾಗವಿಲ್ಲದೆ ವಾಹನಗಳು ಸಿಕ್ಕಿದಲ್ಲಿ ನಿಲುಗಡೆ ಹೊಂದಿ ಪ್ರತಿದಿನ ಟ್ರಾಫಿಕ್‌ ಜಾಮ್‌ ಸಮಸ್ಯೆ ಆಗುತ್ತಿದೆ.

ಮುಂಡಾ ಬೀಚ್‌ ಅಭಿವೃದ್ಧಿ:

ಸಿದ್ದರಾಮಯ್ಯ(Siddaramaiah) ಸರ್ಕಾರದ ಅವಧಿಯಲ್ಲಿ 2017ರಲ್ಲಿ ಮೂಲ್ಕಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್‌(Munda beach)ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಬಳಿಕ ಮುಂಡಾ ಬೀಚ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಶಾಂಭವಿ ಮತ್ತು ನಂದಿನಿ ನದಿಯು ಸಮುದ್ರಕ್ಕೆ ಸೇರುವ ಮೂಲ್ಕಿ ಅಳಿವೆಯ ತಟದ ಮುಂಡಾ ಬೀಚ್‌ ತೀರದ ಮೂಲ್ಕಿಯ ಕೊಳಚಿಕಂಬಳದಲ್ಲಿ ವಿದೇಶಿಯರಾದ ಸರ್ಫಿಂಗ್‌ ಸ್ವಾಮಿ ಮೂಲಕ ಮಂತ್ರ ಸರ್ಫಿಂಗ್‌ ಆರಂಭಗೊಂಡು ಸ್ಥಳೀಯ ಪ್ರತಿಭೆಗಳಿಗೆ ಸರ್ಫೀಂಗ್‌ ಕಲಿಸಿ ಅಂತರಾಷ್ತಿ್ರೕಯ ಮಟ್ಡದ ಪಟುಗಳನ್ನಾಗಿ ಮಾಡಲಾಗಿತ್ತು. ಬಳಿಕ ಮುಂಡಾ ಬೀಚ್‌ ಬಗ್ಗೆ ಗಮನ ಹರಿಸದಿದ್ದು ಹಾಗೂ ಸಮೀಪದ ಹೆಜಮಾಡಿ ಬಳಿ ಕಿರು ಬಂದರು ಆಗುತ್ತಿದ್ದು ಇದರಿಂದ ಮುಂಡಾ ಬೀಚ್‌ನ ಹೆಚ್ಚಿನ ಪ್ರದೇಶ ಸಮುದ್ರ ಪಾಲಾಗಿದೆ.

ಸಸಿಹಿತ್ಲಿನಿಂದ ಸಮುದ್ರ ತೀರದಲ್ಲಿ ರಸ್ತೆ ನಿರ್ಮಿಸಿದಲ್ಲಿ ಮೂಲ್ಕಿ ಅಳಿವೆ ಹಾಗೂ ಹೆಜಮಾಡಿ ವರೆಗೆ ಸಮುದ್ರ ತೀರದಲ್ಲಿ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ.

ಸಮುದ್ರ, ನದಿ ತೀರ ಹಾಗೂ ಕಟೀಲು ಮತ್ತು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳವನ್ನು ಹೊಂದಿರುವ ಮೂಲ್ಕಿ ತಾಲೂಕನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಉತ್ತಮ ಅವಕಾಶವಿದ್ದು ಕಟೀಲು ಕ್ಷೇತ್ರದಲ್ಲಿ ಭಕ್ತರಿಗೆ ಉಳಕೊಳ್ಳಲು ವಸತಿಗೃಹ, ರಥಬೀದಿ ಎದುರು ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆಗೆ ಬೈಪಾಸ್‌ ರಸ್ತೆ ರಚನೆ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಇವೆ.

 

ಉತ್ತರ ಕನ್ನಡ: ಯಲ್ಲಾಪುರ ಕ್ಷೇತ್ರ ಅಭಿವೃದ್ಧಿ ಕಾರ್ಯವೇ ಒಂದು ಸವಾಲು !

ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು ಮುಂಡಾ ಬೀಚ್‌ ಸೇರಿದಂತೆ ಸಮುದ್ರ ತೀರವನ್ನು ಹೊಂದಿರುವ ಮೂಲ್ಕಿ ತಾಲೂಕನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಪ್ರಯತ್ನಿಸುತ್ತೇನೆ. ನೀರು, ಒಳಚರಂಡಿ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ. ಮೂಲ್ಕಿಯಲ್ಲಿ ಕೂಡ ಮೂಲ್ಕಿ ತಾಲೂಕಿನ ಆಡಳಿತ ಸೌಧದ ಕಾಮಗಾರಿ ನಡೆಯುತ್ತಿದೆ.

-ಉಮಾನಾಥ ಕೋಟ್ಯಾನ್‌, ಮೂಡುಬಿದಿರೆ ಶಾಸಕ.

ಚಿತ್ರ:22ಮೂಲ್ಕಿ ಸ್ತೋರಿ.22 ಕಟೀಲು

PREV
click me!

Recommended Stories

Karnataka Budget 2026: ಇದಪ್ಪಾ ಬಜೆಟ್ ಅಂದ್ರೆ, 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ!
Karnataka Budget 2026: ಪೊಲೀಸ್ ಇಲಖೆಗೆ ಸೇರಲು ಸಿದ್ಧತೆ ನಡೆಸ್ತಿರೋರಿಗೆ ಗುಡ್‌ನ್ಯೂಸ್ ಕೊಟ್ಟ ಸಿಎಂ!