ಗಾಯದ ಮೇಲೆ ಬರೆ : ಕೊರೋನಾತಂಕದಲ್ಲೇ ರಸಗೊಬ್ಬರ ಬೆಲೆ ಏರಿಕೆ

By Kannadaprabha NewsFirst Published May 14, 2021, 11:19 AM IST
Highlights
  • ರಸಗೊಬ್ಬರ ಬೆಲೆ ಏರಿಕೆ, ರೈತರ ಕೊರೋನಾ ಗಾಯದ ಮೇಲೆ ಬರೆ 
  • ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಕಿಡಿ
  • ರಸಗೊಬ್ಬರ ಬೆಲೆ ಏರಿಕೆ ಕೇಂದ್ರ ರಾಜ್ಯ ಸರ್ಕಾರಗಳ ಗೋಮುಖ ವ್ಯಾಘ್ರ ನಡವಳಿಕೆ ಎಂದು ಅಕ್ರೋಶ

 ಮೈಸೂರು (ಮೇ.14):  ರಸಗೊಬ್ಬರ ಬೆಲೆ ಏರಿಕೆ, ರೈತರ ಕೊರೋನಾ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಕಿಡಿಕಾರಿದ್ದಾರೆ.

ರಸಗೊಬ್ಬರ ಬೆಲೆ ಏರಿಕೆ ಕೇಂದ್ರ ರಾಜ್ಯ ಸರ್ಕಾರಗಳ ಗೋಮುಖ ವ್ಯಾಘ್ರ ನಡವಳಿಕೆ ಯಾವುದೇ ಕಾರಣಕ್ಕೂ ರಸಗೊಬ್ಬರ ಬೆಲೆ ಏರಿಕೆ ಮಾಡುವುದಿಲ್ಲ. ಹಳೆಯ ದರದಲ್ಲಿಯೇ ರಸಗೊಬ್ಬರಗಳು ಮಾರಾಟವಾಗುತ್ತದೆ. ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಹಾಗೂ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳುತ್ತಲೆ ಬೆಲೆ ಏರಿಕೆ ಮಾಡಿ ರೈತರನ್ನು ಮೋಸಗೊಳಿಸಿದೆ. ಹೊಸ ದರ ನಿಗದಿಯಾಗಿದೆ ಡಿಎಪಿ ಪ್ರತಿ ಚೀಲಕ್ಕೆ 1200 ರಿಂದ ಏರಿಕೆ ಮಾಡಿ 1900 ಹೊಸ ದರ ನಿಗದಿ ಮಾಡಿ ರಸಗೊಬ್ಬರ ಕಂಪನಿಗಳು ಆದೇಶ ಹೊರಡಿಸಿವೆ ಎಂದು ಅವರು ಆರೋಪಿಸಿದರು.

ಹೊಸದರದಲ್ಲಿ ರಸಗೊಬ್ಬರ ಮಾರಿದರೆ ಕ್ರಿಮಿನಲ್‌ ಕೇಸ್‌

ಕೊರೋನಾ ಲಾಕ್‌ಡೌನ್‌ ಸಂಕಷ್ಟದಿಂದ ರೈತರು ಬೆಳೆದ ಉತ್ಪನ್ನಗಳ ಬೆಲೆ ಕುಸಿದು ಹಣ್ಣು- ತರಕಾರಿಗಳನ್ನು ಬೀದಿ ಬೀದಿಯಲ್ಲಿ ಸುರಿಯುತ್ತಿದ್ದಾರೆ. ಖರೀದಿದಾರರು ಇಲ್ಲದ ಕಾರಣ ಕೆಲವು ರೈತರು ಕಟಾವು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದಾರೆ. ಸಾಲ ಮಾಡಿದ ರೈತ ಅಂಗೈಯಲ್ಲಿ ಆಕಾಶ ನೋಡುವಂತಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬೇಕಾದ ರಸಗೊಬ್ಬರ ಬೆಲೆ ಏರಿಕೆ ಮಾಡಲು ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿಯನ್ನು 1.30 ಲಕ್ಷ ಕೋಟಿಯಿಂದ 54 ಸಾವಿರ ಕೋಟಿಗೆ ಇಳಿಕೆ ಮಾಡಿದ ಕಾರಣ ಬೆಲೆ ಏರಿಕೆಯಾಗಿದೆ ಎಂದು ಅವರು ದೂರಿದರು.

ರೈತ ತಲೆ ಮೇಲೆ ಚಪ್ಪಡಿ ಎಳೆದಿದ್ದಾರೆ. ಕೂಡಲೇ ಬೆಲೆ ಇಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಚಿವರು ಸುಳ್ಳು ಹೇಳುವ ಮೂಲಕ ರೈತರನ್ನ ದಾರಿ ತಪ್ಪಿಸುತ್ತಿದ್ದಾರೆ ರೈತರು ಎಚ್ಚೆತ್ತುಕೊಂಡು ಸುಳ್ಳು ಹೇಳುವ ಮಂತ್ರಿಗಳಿಗೆ ಮುಖಕ್ಕೆ ಮಂಗಳಾರತಿ ಮಾಡಿ ಸರಿಯಾದ ಪಾಠ ಕಲಿಸಬೇಕು. ಇನ್ನಾದರೂ ರೈತರು ಎಚ್ಚೆತ್ತುಕೊಂಡು ರಸಗೊಬ್ಬರ ಖರೀದಿ ನಿಲ್ಲಿಸಿ, ತಮ್ಮ ತಮ್ಮ ಮನೆಗಳಿಗೆ ಬೇಕಾದ ಆಹಾರವನ್ನು ಮಾತ್ರ ಬೆಳೆದುಕೊಂಡರೆ ಆಗ ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!