
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದ ಸಮೀಪದ ಹುಣಸೇಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಸಾಕಾನೆ ಮಿಸ್ಸಿಂಗ್ ಆದ ಘಟನೆ ಆತಂಕ ಸೃಷ್ಟಿಸಿತು.
ಐದು ದಿನಗಳ ಹಿಂದೆ ಕಾರ್ಮಿಕನನ್ನು ತುಳಿದು ಕೊಂದ ಮದವೇರಿದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು. ಫೆಬ್ರವರಿ 19ರಿಂದ ಆರಂಭಗೊಂಡಿದ್ದ ಈ ಕಾರ್ಯಾಚರಣೆಯಲ್ಲಿ ಇಂದು ಜೂನಿಯರ್ ಅರ್ಜುನ್ ನೇತೃತ್ವದಲ್ಲಿ ತಂಡ ಕಾಡಿಗೆ ತೆರಳಿತ್ತು. ಕಾರ್ಯಾಚರಣೆಗೆ ಒಟ್ಟು 7 ಕುಮ್ಕಿ ಆನೆಗಳನ್ನು ಬಳಸಲಾಗಿತ್ತು. ಈ ವೇಳೆ ಮದವೇರಿದ ಕಾಡಾನೆಯ ಜೊತೆ ಕಾದಾಟದ ಸಂದರ್ಭ ಜ್ಯೂನಿಯರ್ ಅರ್ಜುನ್ ದಾರಿ ತಪ್ಪಿ ಕಾಡಿನೊಳಗೆ ಓಡಿಹೋಗಿದ್ದು, ಕೆಲಕಾಲ ನಾಪತ್ತೆಯಾಗಿದ್ದಾನೆ. ಒಂದೆಡೆ ಆಕ್ರೋಶಗೊಂಡ ಕಾಡಾನೆ, ಮತ್ತೊಂದೆಡೆ ಸಾಕಾನೆಯೇ ಮಿಸ್ಸಿಂಗ್ ಆದ ಪರಿಸ್ಥಿತಿಯಿಂದ ಅರಣ್ಯಾಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿಗಳು ಗಾಬರಿಗೊಂಡರು.
ಸುಮಾರು ಒಂದು ಗಂಟೆಗಳ ಕಾಲ ಹುಡುಕಾಟ ನಡೆಸಿದ ಅಧಿಕಾರಿಗಳು ಕೊನೆಗೂ ಸಾಕಾನೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಬಳಿಕ ಆನೆಯನ್ನು ನಿಯಂತ್ರಣಕ್ಕೆ ಪಡೆದು ಕಟ್ಟಿ ಹಾಕಲಾಗಿದ್ದು, ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮದವೇರಿದ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮುಂದಿನ ಕ್ರಮಗಳ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ..