
ಬೆಂಗಳೂರು: ನಗರದ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತಂದೆ–ತಾಯಿ ಭೀಕರ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಒಂದೊಂದೇ ವಿಚಾರಗಳು ಹೊರಬರುತ್ತಿದೆ. ನಿವೃತ್ತ ನೇವಿ ಕ್ಯಾಪ್ಟನ್ ಹಾಗೂ ಅವರ ಪತ್ನಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಮಗ ರೋಹನ್ ಚಂದ್ರ ಭಟ್ ಮನೆಯಲ್ಲಿ ಇದೀಗ ಕಾಂಡೋಮ್ ಪತ್ತೆಯಾಗಿದೆ. ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಹಿನ್ನೆಲೆ, ಆರೋಪಿಯ ಅನೈತಿಕ ಸಂಬಂಧ ಹಾಗೂ ಅದಕ್ಕೆ ಸಂಬಂಧಿಸಿದ ಹಣಕಾಸು ಒತ್ತಡವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆಯಲ್ಲೀ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಮಾಹಿತಿಯಂತೆ, ಆರೋಪಿ ರೋಹನ್ ಚಂದ್ರ ಭಟ್ ಪೋಷಕರಿಂದ ಪ್ರತ್ಯೇಕವಾಗಿ ವಾಸವಿದ್ದ. ಆತನ ನಿವಾಸ ಪರಿಶೀಲನೆ ನಡೆಸಿದ ವೇಳೆ ಕಾಂಡೋಮ್ ಪತ್ತೆಯಾಗಿದ್ದು, ಇದು ಅನೈತಿಕ ಸಂಬಂಧದ ಬಗ್ಗೆ ಅನುಮಾನ ಹುಟ್ಟುಹಾಕಿದೆ. ಪ್ರಾಥಮಿಕ ವಿಚಾರಣೆಯಲ್ಲಿ, ಅನೈತಿಕ ಸಂಬಂಧಕ್ಕಾಗಿ ಹಣಕಾಸಿನ ಅಗತ್ಯವಿದ್ದು, ಅದಕ್ಕಾಗಿ ಪೋಷಕರ ಮೇಲೆ ಹಣದ ಒತ್ತಡ ಹಾಕುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಈ ಭೀಕರ ಘಟನೆ ನಗರದ ವಿಜ್ಞಾನ ನಗರದಲ್ಲಿರುವ ಆದರ್ಶ ವಿಸ್ತಾ ಅಪಾರ್ಟಮೆಂಟ್ನಲ್ಲಿ ನಡೆದಿತ್ತು. ಮೃತರು ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಹಾಗೂ ಅವರ ಪತ್ನಿ, ದಂತ ವೈದ್ಯೆಯಾಗಿದ್ದ ಡಾಕ್ಟರ್ ಶ್ಯಾಮಲಾ ಭಟ್. ಸ್ವಂತ ಮಗನಿಂದಲೇ ತಂದೆ–ತಾಯಿ ಕೊಲೆಯಾದ ಪ್ರಕರಣ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಫೆಬ್ರವರಿ 11ರಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ರೋಹನ್ ಚಂದ್ರ ಭಟ್ ಹಣಕಾಸಿನ ವಿಚಾರವಾಗಿ ತಂದೆ–ತಾಯಿಯೊಂದಿಗೆ ಜಗಳ ನಡೆಸಿದ್ದು, ಬಳಿಕ ಚಾಕುವಿನಿಂದ ಇರಿದು ಕ್ರೂರವಾಗಿ ಹಲ್ಲೆ ನಡೆಸಿದ್ದ, ತೀವ್ರವಾಗಿ ಗಾಯಗೊಂಡ ದಂಪತಿಯನ್ನು ತಕ್ಷಣವೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಳಿಗ್ಗೆ 8.15ರ ವೇಳೆಗೆ ಇಬ್ಬರೂ ಮೃತಪಟ್ಟಿದ್ದರು. ಮೃತ ಶ್ಯಾಮಲಾ ಭಟ್ ಅವರಿಗೆ 55 ವರ್ಷ ಹಾಗೂ ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಅವರಿಗೆ 60 ವರ್ಷ ವಯಸ್ಸಾಗಿತ್ತು.
ಘಟನೆ ಕುರಿತು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಡಾಕ್ಟರ್ ಮಾಧವಿ ನಾಯರ್ ನೀಡಿದ ದೂರಿನ ಆಧಾರದಲ್ಲಿ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಮಗ ರೋಹನ್ ಚಂದ್ರ ಭಟ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಹಣಕಾಸಿನ ವಿಚಾರವೇ ಕೊಲೆಗೆ ಕಾರಣವೆಂದು ಬೆಳಕಿಗೆ ಬಂದಿತ್ತು.
ಇದಾದ ಬಳಿಕ ವೈಯಕ್ತಿಕ ಕಾರಣಗಳಿಂದ ಹೆತ್ತವರನ್ನು ಹತ್ಯೆ ಮಾಡಿದ ಮಗನೇ ಶನಿವಾರ ತಂದೆ–ತಾಯಿಯ ಅಂತ್ಯಕ್ರಿಯೆ ನಡೆಸಿದ್ದ, ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಮೃತರ ವಿಧಿವಿಧಾನಗಳನ್ನು ನೆರವೇರಿಸಲಾಯ್ತು. ಅಮೆರಿಕಾದಲ್ಲಿ ನೆಲೆಸಿದ್ದ ಮೃತರ ಮಗಳು ರಶ್ಮಿ ಬೆಂಗಳೂರಿಗೆ ಆಗಮಿಸಿದ ಬಳಿಕ ನ್ಯಾಯಾಲಯದಲ್ಲಿ ಏಕೈಕ ಪುತ್ರನಿರುವುದರಿಂದ ಅವನಿಂದಲೇ ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು, ಹೆಚ್ಎಎಲ್ ಠಾಣೆ ಪೊಲೀಸರು ಆರೋಪಿಯನ್ನು ಅಂತ್ಯಕ್ರಿಯೆಗೆ ಕರೆದುಕೊಂಡು ಬಂದಿದ್ದರು. ರೋಹನ್ಗೆ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ಆತನ ಸಹೋದರಿ ರಶ್ಮಿ ಹಾಗೂ ಸಂಬಂಧಿಕರು ಅನುಮತಿ ನೀಡಿದರು.
ಆರೋಪಿ ರೋಹನ್ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ ಉದ್ಯೋಗವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ನಿರ್ದೇಶನದಂತೆ ಆತನನ್ನು NIMHANS ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅನೈತಿಕ ಸಂಬಂಧ, ಹಣಕಾಸಿನ ಒತ್ತಡ ಮತ್ತು ಮಾನಸಿಕ ಸ್ಥಿತಿ ಸೇರಿದಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಲಾಗುತ್ತಿದೆ.