ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೆಎಸ್‌ಆರ್‌ಟಿಸಿ ನೌಕರರ ಧರಣಿ ಸತ್ಯಾಗ್ರಹ

By Suvarna NewsFirst Published Jan 24, 2023, 1:26 PM IST
Highlights

ಮೂಲ ವೇತನಕ್ಕೆ ಬಿಡಿಎ ಸಮ್ಮಿಳಿತಗೊಳಿಸಿ ಪರಿಷ್ಕೃತ ವೇತನ ಹೆಚ್ಚಳ ಮಾಡಿ ವೇತನ ಶ್ರೇಣಿ ಸಿದ್ದಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಡಿಯಲ್ಲಿ ಕೆಎಸ್ ಆರ್ ಟಿಸಿ ನೌಕರರು ದಾವಣಗೆರೆಯಲ್ಲಿ  ಸತ್ಯಾಗ್ರಹ ನಡೆಸಿದ್ದಾರೆ.

ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜ.24): ಮೂಲ ವೇತನಕ್ಕೆ ಬಿಡಿಎ ಸಮ್ಮಿಳಿತಗೊಳಿಸಿ ಪರಿಷ್ಕೃತ ವೇತನ ಹೆಚ್ಚಳ ಮಾಡಿ ವೇತನ ಶ್ರೇಣಿ ಸಿದ್ದಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಡಿಯಲ್ಲಿ ಕೆಎಸ್ ಆರ್ ಟಿಸಿ ನೌಕರರು ತಾಲ್ಲೂಕು ಕಚೇರಿ ಎದುರಿನ ಕೆಎಸ್ಆರ್ಟಿಸಿ ನೂತನ ಕಟ್ಟಡದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.

ಮೂಲ ವೇತನಕ್ಕೆ ಬಿ.ಡಿ.ಎ ಸಮ್ಮಿಳಿತಗೊಳಿಸಿ ಪರಿಷ್ಕೃತ ಮೂಲ ವೇತನದ ಶೇ. 25 ರವನ್ನು ಹೆಚ್ಚಳ ಮಾಡಿ, ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು. ಇನ್ಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ.3 ಇರಬೇಕು. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ಒಮ್ಮೆ ನೀಡಬೇಕು ಎಂದು ಆಗ್ರಹಿಸಿದರು.

ಚಾಲಕ, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳಿಗೂ ಮತ್ತು ಇತರ ಎಲ್ಲಾ ನೌಕರರಿಗೂ, ಹಾಲಿ ಇರುವ ಬಾಟಾ, ಮಾಸಿಕ, ದೈನಂದಿನ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಷೂ, ಜೆರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲಾ ನಿರ್ವಾಹಕರಿಗೆ ಕ್ಯಾಷಿಯರ್ ಗಳಿಗೆ ಸಮಾನವಾದ ಕ್ಯಾಷ್ ಆಲೋವೆನ್ಸ್  ನೀಡಬೇಕು ಎಂದು ಒತ್ತಾಯಿಸಿದರು.

ಮುಷ್ಕರ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ, ಮರು ನೇಮಕ ಮಾಡಬೇಕು. ಲೋಕ ಅದಾಲತ್ ನಲ್ಲಿ ಷರತ್ತುಗಳನ್ನು ಒಪ್ಪಿ ಸೇವೆಗೆ ಮರು ನೇಮಕಗೊಂಡಿರುವ ನೌಕರರಿಗೆ ಹಿಂದಿನ ದಿನಾಂಕದಿಂದ ಅನ್ವಯವಾಗುವಂತೆ ಷರತ್ತುಗಳನ್ನು ರದ್ದು ಪಡಿಸಬೇಕು. ಮುಷ್ಕರದ ಸಂದರ್ಭದಲ್ಲಿ ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮಾತೃ ಮೂಲ ಘಟಕಕ್ಕೆ ವಾಪಸ್‌ ತರಬೇಕು. 

ಆಡಳಿತ ವರ್ಗ ಏಕಪಕ್ಷೀಯ ನಿರ್ಧಾರಗಳ ಮೂಲಕ ಕಾರ್ಮಿಕರ ಸೇವಾ ಪರಿಸ್ಥಿತಿಗಳ ಸೇವಾ ಪರಿಸ್ಥಿತಿಗಳ ಬದಲಾವಣೆ ಜಾರಿಗೊಳಿಸುವುದನ್ನು ನಿಲ್ಲಿಸಬೇಕು. ಯಾವುದೇ ಸೇವಾ ಬದಲಾವಣೆಯನ್ನು ಕಾರ್ಮಿಕ ಸಂಘಗಳ ಜೊತೆ ಚರ್ಚಿಸಿ, ಉಭಯ ಪಕ್ಷಗಳಿಗೂ ಸಮ್ಮತವಾದ ಅಂಶಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಎಲ್ಲಾ ನೌಕರರಿಗೂ ಪಾಳಿ ವ್ಯವಸ್ಥೆ ಜಾರಿ ಮಾಡಬೇಕು.

ಮಹಿಳಾ ನೌಕರರಿಗೆ ಘಟಕ, ಬಸ್ ನಿಲ್ದಾಣಗಳಲ್ಲಿ, ಟರ್ಮಿನಲ್‌ಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ಹಾಗೂ ಘಟಕಗಳಲ್ಲಿ ಶಿಶುಪಾಲನಾ ಕೇಂದ್ರ ವ್ಯವಸ್ಥೆ ಮಾಡಿಕೊಡಬೇಕು. ಮಹಿಳಾ ನೌಕರರಿಗೆ ಅವರ ಆಯ್ಕೆಯ ಪ್ರಕಾರ ಉತ್ತಮ ಗುಣಮಟ್ಟದ ಸಮವಸ್ತ್ರ ಕೊಡತಕ್ಕದ್ದು, ಮಹಿಳಾ ನೌಕರರಿಗೆ ಯಾವುದೇ ಸಂದರ್ಭದಲ್ಲಿ 8 ಗಂಟೆಗಿಂತ ಅಧಿಕ ಕೆಲಸದಲ್ಲಿ ಕರ್ತವ್ಯ ನಿಯೋಜಿಸಬಾರದು.ಈ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಕೈಗಾರಿಕಾ ವಿವಾದ ಕಾಯ್ದೆ 1947ರ ಅನ್ವಯ ಜಂಟಿ ಕ್ರಿಯಾ ಸಮಿತಿಯ ಜೊತೆ ಕೈಗಾರಿಕಾ ಒಪ್ಪಂದ ಮಾಡಬೇಕು ಎಂದು ಒತ್ತಾಯಿಸಿದರು.

Davanagere: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ  ಪ್ರತಿಭಟನೆ

ಇ.ಎಸ್‌.ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನದ ಶೇ. 35 ಹಾಗೂ ಕಾರ್ಮಿಕರಿಂದ ಶೇ. 0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಆ ಮೂಲಕ ಸಾರಿಗೆ ನೌಕರರಿಗೆ ಮಲ್ಟಿಪಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕು. ಈ ಸೌಲಭ್ಯವನ್ನು ನಿವೃತ್ತ ಕಾರ್ಮಿಕರಿಗೆ ಮತ್ತು ಅವರ ಪತಿ ಅಥವಾ ಪತ್ನಿಗೂ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ಉತ್ತರ ಭಾರತದಲ್ಲಿರುವಂತೆಯೇ ಕರ್ನಾಟಕದಲ್ಲಿಯೂ ಕೇದಾರನಾಥ!

ಧರಣಿ ಮುಷ್ಕರದಲ್ಲಿ ದಾವಣಗೆರೆ ವಿಭಾಗದ ಅಧ್ಯಕ್ಷರಾದ ಹೆಚ್.ಜಿ.ಉಮೇಶ್, ಪ್ರಧಾನ ಕಾರ್ಯದರ್ಶಿ ಮಿರ್ಜಾ ರೆಹಮತ್ ಉಲ್ಲಾ, ಪ್ರಕಾಶ್, ಹೆಚ್.ಹನುಮಂತಪ್ಪ, ಉಮೇದ್ ಉಲ್ಲಾ, ಕರಿಗೌಡಪ್ಪ, ಆನಂದ ನಾಯ್ಕ, ಎಂ.ಎನ್.ಲೋಕಪ್ಪ, ವಸಂತ್, ರಾಜೇಶ್ವರಿ ಇತರರು ಇದ್ದರು.

click me!