Valmiki Jayanti: ರಾಷ್ಟ್ರಪತಿಗೆ ಆಹ್ವಾನ ನೀಡಲು ಸಿದ್ಧತೆ

By Suvarna NewsFirst Published Jan 24, 2023, 12:44 PM IST
Highlights

ಎಸ್ಟಿ ಗೆ ಮೀಸಲಾತಿ ಘೋಷಣೆಯ ಬೆನ್ನಲ್ಲೆ  ಈ ಬಾರಿಯ ವಾಲ್ಮೀಕಿ ಜಾತ್ರೆಯನ್ನು  ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹರಿಹರದ ರಾಜನಹಳ್ಳಿ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರನ್ನು ಕರೆತರಲು ಸಮಿತಿ ನಿರ್ಧಾರ ಮಾಡಿದೆ.

ದಾವಣಗೆರೆ (ಜ.24): ಎಸ್ಟಿ ಗೆ ಮೀಸಲಾತಿ ಘೋಷಣೆಯ ಬೆನ್ನಲ್ಲೆ  ಈ ಬಾರಿಯ ವಾಲ್ಮೀಕಿ ಜಾತ್ರೆಯನ್ನು  ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಚುನಾವಣಾ ವರ್ಷ ಆಗಿರುವುದರಿಂದ ಬಿಜೆಪಿ ಸರ್ಕಾರ ಅದರ ಲಾಭ ಪಡೆಯಲು ಸಂಪೂರ್ಣ ಸಜ್ಜಾಗಿದೆ. ಹರಿಹರದ ರಾಜನಹಳ್ಳಿ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರನ್ನು ಕರೆತರಲು ಸಮಿತಿ ನಿರ್ಧಾರ ಮಾಡಿದೆ. ಎಸ್ಟಿ ಎಸ್ಟಿ ಮೀಸಲಾತಿ ಹೆಚ್ಚಳದ ಲಾಭ ಪಡೆಯಲು ಬಿಜೆಪಿ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಒಂದು ಕಡೆ ಕಾಂಗ್ರೆಸ್ ಮೀಸಲಾತಿ ಮೂಗಿಗೆ  ತುಪ್ಪ ಸವರುವ ಕೆಲಸ ಎಂದು ಅಪಪ್ರಚಾರದಲ್ಲಿ ತೊಡಗಿದ್ದರೇ ಮೀಸಲಾತಿ ಕೊಟ್ಟಿದ್ದು ನಮ್ಮ ಸರ್ಕಾರ ಎಂದು ಬಿಜೆಪಿ ಸರ್ಕಾರ ಎದೆಯುಬ್ಬಿಸಿ ಹೇಳುತ್ತಿದೆ. ಈ ಬಾರಿ ಎಸ್ಟಿ ಪಂಗಡದ ಓಟುಗಳು ಬಿಜೆಪಿ ಕೈತಪ್ಪದಂತೆ  ಕ್ರೋಢಿಕೃತ ಲಾಭ ಪಡೆಯಲು ಬಿಜೆಪಿ ತೆರೆಮರೆ ಕಸರತ್ತು ನಡೆಸಿದೆ. ಪ್ರತಿವರ್ಷ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಬಿಜೆಪಿ ಸಚಿವರು ಶಾಸಕರು ರಾಜನಹಳ್ಳಿ ಪ್ರಸನ್ನಾನಂದ  ಸ್ವಾಮೀಜಿ  ನೇತೃತ್ವದಲ್ಲಿ ಸಭೆ ನಡೆಸಿ ರಾಷ್ಟ್ರದ ಪ್ರಥಮ ಪ್ರಜೆ ಕರೆತರಲು ಚಿಂತನೆ ನಡೆಸಿದ್ದಾರೆ. ಬುಡಕಟ್ಟು ಸಮುದಾಯದ  ರಾಷ್ಟ್ರಪತಿಯವರನ್ನು ಕರೆತಂದ್ರೆ ಕಾರ್ಯಕ್ರಮಕ್ಕೆ ಒಂದು ಮೆರಗು ಎಂದು ನಿರ್ಧರಿಸಿ ರಾಜ್ಯ ಸರ್ಕಾರದ ಮೂಲಕ ಪ್ರಯತ್ನ ನಡೆಸಿದ್ದಾರೆ. 

SC ST Reservation ಹೆಚ್ಚಳಕ್ಕೆ ಗವರ್ನರ್ ಅಂಕಿತ, ಅಹೋರಾತ್ರಿ ಧರಣಿ ಅಂತ್ಯಗೊಳಿಸಿದ ಸ್ವಾಮೀಜಿ

ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಜಾತ್ರಾ ಸಮಿತಿ ಅಧ್ಯಕ್ಷರಾಗಿದ್ದು ಈ ಭಾರಿ ಎಸ್ಟಿ ಸಮುದಾಯದ  ಹೆಚ್ಚು ಜನರನ್ನು  ಸೇರಿಸಲು ಪ್ಲಾನ್ ಸಿದ್ಧಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ , ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ , ಶ್ರೀರಾಮುಲು ಸೇರಿದಂತೆ 13 ಜನ ಎಸ್ಟಿ ಸಮುದಾಯದ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಎರಡು ವರ್ಷ ಎಸ್ಟಿ ಮೀಸಲಾತಿ ಘೋಷಣೆಯಾಗಿಲ್ಲ ಎಂಬುದು ವಾಲ್ಮೀಕಿ ಜಾತ್ರೆಯ ಪ್ರಮುಖ ವಿಷಯವಾಗಿತ್ತು. ಈ ಭಾರಿ ಎಸ್ಟಿ ಮೀಸಲಾತಿ 3 ರಿಂದ ಶೇ 7 ಕ್ಕೆ ಹೆಚ್ಚಳವಾಗಿದ್ದು ಬಿಜೆಪಿ ಇದರ ಲಾಭ ಪಡೆಯಲು ಸಂಪೂರ್ಣ ಸನ್ನದ್ಧವಾಗಿದೆ.

ಇದು 'ನಮೋ' ರಣತಂತ್ರ: ಒಕ್ಕಲಿಗ, ವಾಲ್ಮೀಕಿ ಹಾಗೂ ಕುರುಬರ ಮತಬೇಟೆ?

 ಕಾಂಗ್ರೆಸ್ ಮುಖಂಡರು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರದ ಕಣ್ಣೋರೆಸುವ ತಂತ್ರ ಅದಕ್ಕೆ ಸಂವಿಧಾನದ ಮಾನ್ಯತೇ ಸಿಗುವುದು ಅನುಮಾನ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ ಮಾನ್ಯತೆ ದೊರಕಿಸಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ಬದ್ಧವಾಗಿದೆ. ಇದು ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಆಗುತ್ತದೆ ಎಂದು ಬಿಜೆಪಿ ಶಾಸಕರು ವಿಶ್ವಾಸದಲ್ಲಿದ್ದಾರೆ. ಒಟ್ಟಾರೆ ಮೀಸಲಾತಿ ವಿಚಾರ ಎರಡು ರಾಷ್ಟ್ರೀಯ ಪಕ್ಷಗಳ ಜಂಗೀ ಕುಸ್ತಿಗೆ ಕಾರಣವಾಗಿರುವವುದಂತು ಸತ್ಯ.

click me!