ದೇಶದ್ರೋಹಿಗಳಿಗೆ ಈಗ ತೋರಿಸುತ್ತಿರುವುದು ಸ್ಯಾಂಪಲ್‌ ಮಾತ್ರ: ಈಶ್ವರಪ್ಪ

By Kannadaprabha NewsFirst Published Sep 28, 2022, 3:55 AM IST
Highlights

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಹಿನ್ನಲೆಯಲ್ಲಿ ದೇಶದ ಸುಮಾರು 16 ರಾಜ್ಯದಲ್ಲಿ 170 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದು ಕೇಂದ್ರ ಸರ್ಕಾರದ ಸಾಧನೆ: ಈಶ್ವರಪ್ಪ 

ಶಿವಮೊಗ್ಗ(ಸೆ. 28):  ರಾಷ್ಟ್ರದ್ರೋಹ ಚಟುವಟಿಕೆ ನಡೆಸದಂತೆ ಎಷ್ಟುಹೇಳಿದರೂ ಕೆಲವರು ಕೇಳದ ಕಾರಣ ಕೇಂದ್ರ ಸರ್ಕಾರ ಇದೀಗ ದೇಶದ್ರೋಹಿಗಳನ್ನು ಮಟ್ಟಹಾಕುವ ಉದ್ದೇಶದಿಂದ ಸ್ಯಾಂಪಲ್‌ ತೋರಿಸಿದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಇಲ್ಲಿನ ವಿನೋಬ ನಗರದಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಮಂಗಳವಾರ ಬಿಜೆಪಿ ಹಿಂದುಳಿದ ವರ್ಗಗಳ ಜಾಗೃತಿ ಸಂಯೋಜಕ ಸಮಾವೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಹಿನ್ನಲೆಯಲ್ಲಿ ದೇಶದ ಸುಮಾರು 16 ರಾಜ್ಯದಲ್ಲಿ 170 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದು ಕೇಂದ್ರ ಸರ್ಕಾರದ ಸಾಧನೆ. ಮುಸಲ್ಮಾರ ಓಟು ಹೋಗುತ್ತದೆ ಎಂದು ರಾಷ್ಟ್ರದ್ರೋಹ ಚಟುವಟಿಕೆ ನಡೆಸುವುದಕ್ಕೆ ಬಿಡಲಿಲ್ಲ. ರಾಷ್ಟ್ರದ್ರೋಹಿಗಳಿಗೆ ಸರಿಯಾದ ಉತ್ತರ ಕೊಡುವ ಪಾರ್ಟಿ ಬಿಜೆಪಿ ಎನ್ನುವುದನ್ನು ಗೃಹ ಮಂತ್ರಿ ಅಮಿತ್‌ಶಾ ಮಾಡಿ ತೋರಿಸಿದ್ದಾರೆ ಎಂದರು.

ಕೊಪ್ಪಳ: ಶಿವಮೊಗ್ಗದ ಶಂಕಿತ ಉಗ್ರರ ಜತೆ ಸ‌ಂಪರ್ಕ: ಓರ್ವನ ಬಂಧನ

ತಿಹಾರ್‌ ಜೈಲಿಗೆ ಹೋಗಿ ಬಂದಂತಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಂತಹ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಲಪಾಡು ಇವರು ಕಾಂಗ್ರೆಸ್‌ ನಾಯಕರು ಎಂದು ವ್ಯಂಗ್ಯವಾಡಿದ ಅವರು ಈ ನಾಯಕರ ಹೆಸರು ಕೇಳಿದರೆ ಜನರು ಬರುತ್ತಾರೆಯೇ? ಸೋನಿಯಾ ಗಾಂಧಿ, ರಾಜೀವ್‌ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ಇವರುಗಳು ಚುನಾವಣೆ ಸಂದರ್ಭದಲ್ಲಿ ಎಲ್ಲೆಲ್ಲಿ ಕಾಲಿಟ್ಟರೋ ಆ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋತು ಭಸ್ಮವಾಗಿ ಹೋಗಿದೆ. ಜನತೆ ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ ಎಂದರು.

ಹಿಂದೆ ಬಿಜೆಪಿಯನ್ನು ಬ್ರಾಹ್ಮಣರ ಪಾರ್ಟಿ, ಲಿಂಗಾಯಿತರ ಪಾರ್ಟಿ, ಮುಂದುವರೆದವರ ಪಾರ್ಟಿ, ನಗರ ಪ್ರದೇಶದ ಪಕ್ಷ, ವಿದ್ಯಾವಂತರ ಪಕ್ಷ ಹೀಗೆ ವಿರೋಧಿಗಳು ಹೇಗೆ ಬೇಕೋ ಹಾಗೆ ಕರೆಯುತ್ತಿದ್ದರು. ಬಿಜೆಪಿಯಲ್ಲಿ ಹಿಂದುಳಿದವರಿಲ್ಲ, ದಲಿತರಿಲ್ಲ ಎನ್ನುತ್ತಿದ್ದರು. ಆದರೆ ಬಿಜೆಪಿಗೆ ಎಲ್ಲಾ ವರ್ಗದ ಜನರ ಬೆಂಬಲ ದೊರಕಿದೆ. ಕೇಂದ್ರದಲ್ಲೂ ಅಧಿಕಾರದಲ್ಲಿದೆ, ಹಲವು ರಾಜ್ಯದಲ್ಲೂ ಅಧಿಕಾರ ನಡೆಸುತ್ತಿದ್ದೇವೆ. ಮುಂದೇ ಕೂಡ ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಈ ದಿಕ್ಕಿನಲ್ಲಿ ಪ್ರಯತ್ನ ನಡೆಯಬೇಕಿದೆ ಎಂದರು.

ಅಕ್ಟೋಬರ್‌ 9 ರಂದು ಹುಬ್ಬಳ್ಳಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಒಂದು ಮಂಡಲದಿಂದ ಹತ್ತು ಜನ ಸಭೆಗೆ ಹಾಜರಾಗಬೇಕು. ಸಭೆಗೆ ಯಾರು ಆಗಮಿಸಬೇಕು ಎಂಬುದನ್ನು ಬಿಜೆಪಿ ಪ್ರಮುಖರು ತೀರ್ಮಾನಿಸುತ್ತಾರೆ. ಹಾಜರಾಗುವ ಹತ್ತು ಜನರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಇರಬೇಕು. ಅಲ್ಲದೆ ಗುಲ್ಬರ್ಗದಲ್ಲೂ ಸಭೆ ನಡೆಯಲಿದೆ. ಇದಕ್ಕೂ ಕೂಡ ಜಿಲ್ಲೆಯಿಂದ ಆಯ್ದ ಬಿಜೆಪಿ ಕಾರ್ಯಕರ್ತರು ಸಭೆಗೆ ಹಾಜರಾಗಬೇಕು ಎಂದು ಕೋರಿದರು.

ಶಂಕಿತ ಉಗ್ರರಿಗೆ ಕರಾವಳಿ, ಕೇರಳ ಸಂಪರ್ಕ: ಸಚಿವ ಆರಗ ಜ್ಞಾನೇಂದ್ರ

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ಸಿ. ಮೋಹನ್‌, ಕುಮಾರ್‌ ಬಂಗಾರಪ್ಪ, ಕೆ.ಪಿ. ನಂಜುಂಡಿ, ಬಿಜೆಪಿ ಓಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಬಿಜೆಪಿ ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷ ಮಾಲತೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಪ್ರಮುಖರಾದ ಅಶೋಕ್‌ ಮೂರ್ತಿ, ಆರ್‌.ಕೆ. ಸಿದ್ಧರಾಮಣ್ಣ, ಗಿರೀಶ್‌ ಉಪ್ಪಾರ್‌, ಶಿವರಾಜ್‌, ವಿ. ರಾಜು ಮತ್ತಿತರರು ಉಪಸ್ಥಿತರಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಕ್ಷಣ ಮಹಾತ್ಮ ಗಾಂಧಿ ಅಂದೇ ಹೇಳಿದ್ದರು. ನೀವು ಒಟ್ಟಾಗಿರಲು ಸಾಧ್ಯವಿಲ್ಲ. ಕೇವಲ ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ ಬೇಡ. ಹೀಗಾಗಿ ಕಾಂಗ್ರೆಸ್‌ನ್ನು ವಿಸರ್ಜಿಸುವಂತೆ ಅಂದೇ ಗಾಂಧೀಜಿ ಹೇಳಿದ್ದರು. ಅವರ ಮಾತನ್ನು ಕೇಳಲಿಲ್ಲ. ಕಾಂಗ್ರೆಸ್‌ ಇಂದು ತಾನಾಗಿಯೇ ವಿಸರ್ಜನೆ ಆಗುತ್ತಿದೆ ಅಂತ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 
 

click me!