ಕೃಷ್ಣಾ ನದಿ ತೆಪ್ಪ ದುರಂತ: 3 ಮೃತದೇಹ ಪತ್ತೆ, ಈಜಿ ದಡ ಸೇರಿದ ಮೂವರು, ಇನ್ನಿಬ್ಬರಿಗಾಗಿ ಮುಂದುವರೆದ ಶೋಧಕಾರ್ಯ

By Govindaraj SFirst Published Jul 3, 2024, 6:18 PM IST
Highlights

ಜಿಲ್ಲೆಯ ಕೊಲ್ಹಾರ ಸಮೀಪ ಕೃಷ್ಣಾ ನದಿ ದಡದಲ್ಲಿ ಮಂಗಳವಾರ ಸಂಜೆ ಇಸ್ಪೆಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದಾಗ ನದಿ ದಡದಲ್ಲಿದ್ದ ತೆಪ್ಪದಲ್ಲಿ ಹಲವರು ತಪ್ಪಿಸಿಕೊಳ್ಳಲು ನದಿಗಿಳಿದಾಗ ತೆಪ್ಪ ಮುಳುಗಿ ನಾಪತ್ತೆಯಾದವರ ಪೈಕಿ ಮೂವರ ಶವ ಪತ್ತೆಯಾಗಿವೆ.
 

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜುಲೈ 03): ಜಿಲ್ಲೆಯ ಕೊಲ್ಹಾರ ಸಮೀಪ ಕೃಷ್ಣಾ ನದಿ ದಡದಲ್ಲಿ ಮಂಗಳವಾರ ಸಂಜೆ ಇಸ್ಪೆಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದಾಗ ನದಿ ದಡದಲ್ಲಿದ್ದ ತೆಪ್ಪದಲ್ಲಿ ಹಲವರು ತಪ್ಪಿಸಿಕೊಳ್ಳಲು ನದಿಗಿಳಿದಾಗ ತೆಪ್ಪ ಮುಳುಗಿ ನಾಪತ್ತೆಯಾದವರ ಪೈಕಿ ಮೂವರ ಶವ ಪತ್ತೆಯಾಗಿವೆ. ಮೂವರು ಈಜಿ ದಡ ಸೇರಿದ್ದು, ಇನ್ನುಳಿದ ಇಬ್ಬರಿಗಾಗಿ ಪತ್ತೆ ಕಾರ್ಯಾಚರಣೆ ನಡೆದಿದೆ. ಕೊಲ್ಹಾರ ಮೂಲದ ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ ಅವರ ಮೃತದೇಹಗಳು ಪತ್ತೆಯಾಗಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.‌ ಮಂಗಳವಾರ ಸಂಜೆ ಏಳೆಂಟು ಜನರು ಕೂಡಿಕೊಂಡು ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿ ತೀರದಲ್ಲಿ ಇಸ್ಪೀಟ್ ಆಡುವ ವೇಳೆ ಪೊಲೀಸರು ದಾಳಿ ನಡೆಸಿದಾಗ,‌ ಮೂರ್ನಾಲ್ಕ ಜನ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. 

Latest Videos

ಇನ್ನುಳಿದ ಎಂಟು ಜನ ತೆಪ್ಪ ಏರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಅಧಿಕ ಬಾರದಿಂದ ತೆಪ್ಪ ಮಗುಚಿದ್ದು, ಮೂವರು ಈಜಿ ದಡ ಸೇರಿದ್ದಾರೆ. ಐವರು ಜನ ನಾಪತ್ತೆಯಾಗಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಡಿಎಫ್ಓ ರಂಗನಾಥ ರಾಠೋಡ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ನಾಪತ್ತೆಯಾದವರಿಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದರು.‌ ರಾತ್ರಿಯಾದ ಕಾರಣ ಸ್ಥಗಿತವಾಗಿದ್ದ ಕಾರ್ಯಾಚರಣೆ ಬುಧವಾರ ಬೆಳಿಗ್ಗೆ 5 ಗಂಟೆಯಿಂದಲೇ ಆರು ತಂಡಗಳಾಗಿ ಶೋಧ ಕಾರ್ಯಾಚರಣೆ ಮತ್ತೆ‌ ಆರಂಭಸಿದರು. 

ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ, ದರ್ಶನ್ ಪ್ರಕರಣ ವಿಧಿಯಾಟ: ಸಂಗೀತ ನಿರ್ದೇಶಕ ವಿ.ಮನೋಹರ್

ಮಂಗಳವಾರ ಸಂಜೆ ನದಿಯಲ್ಲಿ ಪುಂಡಲೀಕ ಯಂಕಂಚಿ ಮೃತದೇಹ ಪತ್ತೆಯಾದರೆ, ಬುಧವಾರ ಬೆಳಿಗ್ಗೆ ಶೋಧಕಾರ್ಯ ವೇಳೆ ತಯ್ಯಬ್ ಚೌಧರಿ, ದಶರಥ ಗೌಡರ (ಸೂಳಿಭಾವಿ) ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾದವರಲ್ಲಿ ಸಚೀನ ಕಟಬರ, ಬಶೀರ ಹೊನವಾಡ ಈಜಿ ದಡ ಸೇರಿದರೆ ಕೂಡಗಿಯ ಫಾರೂಖ್ ಫತೇಹ್ಮದ್ ನನ್ನು ಮಂಗಳವಾರ ಸಂಜೆ ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ಇನ್ನುಳಿದ ರಫೀಕ್ ಜಾಲಗಾರ ಹಾಗೂ ಮಹಿಬೂಬ್ ವಾಲಿಕಾರ ಅವರುಗಳಿಗಾಗಿ ಶೋಧಕಾರ್ಯ ಮುಂದುವರೆದಿದ್ದು, ಅವರು ಸಹ ಸಾವೀಗಿಡಾಗಿರುವ ಶಂಕೆ ಇದೆ.

ಶೋಧಕಾರ್ಯಕ್ಕೆ ಸವಾಲಾಗಿರುವ ಗಾಳಿ, ಮೀನು ಬಲೆ
ಕೃಷ್ಣಾ ನದಿಯಲ್ಲಿ ಪೊಲೀಸರು ಆರು ತಂಡಗಳಾಗಿ ಶೋಧಕಾರ್ಯ ನಡೆಸುತ್ತಿದ್ದು, ನದಿಯಲ್ಲಿ ಅತಿಯಾದ ಗಾಳಿ ಹಾಗೂ ಮೀನಿನ ಬಲೆಗಳು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಸಂಜೆಯಾಗುತ್ತಲೇ ಜೋರಾದ ಗಾಳಿ ಶೋಧ ತಂಡಗಳಿಗೆ ನದಿಯಲ್ಲಿ ದೇಹಗಳನ್ನು ಪತ್ತೆ ಮಾಡಲು ಸಮಸ್ಯೆಯೊಡುತ್ತಿದೆ. ಅಲ್ಲದೇ ಮೀನಿಗಾಗಿ ಹಾಕಿದ ಬಲೆಗಳು ಬೋಟ್ ಗೆ ಸಿಲುಕುತ್ತಿದ್ದು ಪದೇಪದೇ ಬೋಟ್ ದಡಕ್ಕೆ ತಂದು ಬಲೆ ಬಿಡಿಸಿಕೊಂಡು ಮತ್ತೆ ಶೋಧಕಾರ್ಯ ಮುಂದುವರೆಸುವಂತಾಗಿದೆ.

ಸ್ಥಳದಲ್ಲೇ ಬೀಡು ಬಿಟ್ಟಿರುವ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ
ಘಟನೆ ಜರುಗಿದ ಸಮಯದಿಂದಲೇ ಜಿಲ್ಲಾ ಎಸ್ಪಿ ಋಷಿಕೇಶ ಸೊನಾವಣೆ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ರಾಮಣ್ಣ ಸಂಕನಾಳ, ಬಾಗಲಕೋಟೆ ಎಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿಗಳಾದ ಬಸವರಾಜ ಯಲಿಗಾರ, ತಳಕಟ್ಟಿ, ಡಿಎಫ್ಒ ರಂಗನಾಥ ರಾಠೋಡ ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸ್ಥಳದಲ್ಲೇ ಮೊಕ್ಕಾಂ ಹೂಡಿ ಶೋಧಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಕೊಲ್ಹಾರ ಪಟ್ಟಣ, ಯುಕೆಪಿ ವೃತ್ತ, ಹೊರವಲಯ ಹಾಗೂ ಬಳೂತಿ‌ ಗ್ರಾಮದ ಸರಹದ್ದಿನಲ್ಲಿ ಬೀಗಿ ಪೊಲೀಸ್ ಬಂದುಬಸ್ತ್ ಏರ್ಪಿಡಿಸಲಾಗಿದೆ.

ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ: ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ಮಾಲತಿ ಸುಧೀರ್

ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
ಇನ್ನು ಘಟನೆಯಲ್ಲಿ ಮೃತಪಟ್ಟವರದ್ದು, ಒಬ್ಬೋಬ್ಬರದ್ದು ಒಂದೊಂದು ಕಥೆ. ತೈಯಬ್ ಚೌಧರಿ ಮೆಣಸಿಕಾಯಿ ಮಾರಾಟ ಮಾಡಿ 85 ಸಾವಿರ ಹಣ ತೆಗೆದುಕೊಂಡು ಹೋಗಿ ಇಸ್ಪೀಟ್ ಆಡಿ ದಾರುಣ ಸಾವನಪ್ಪಿದ್ದಾನೆ. ಮೃತ ಮೆಹಬೂಬ ಮನೆಯಲ್ಲಿ ಕೂಡಾ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು‌ ಪೊಲೀಸರು ಬೆನ್ನು ಹತ್ತಿದ್ದರು, ಅವರಿಂದ ತಪ್ಪಿಸಿಕೊಳ್ಳಲು ಹೋದಾಗ  ಘಟನೆ ನಡೆದಿದೆ. ಇದು ಆಗಬಾರದಿತ್ತು. ಪೊಲೀಸರು ಬೆನ್ನು ಹತ್ತಿರದಿದ್ದರೆ ಅವರು ಉಳಿಯುತ್ತಿದ್ದರು ಎಂದು ನಾಪತ್ತೆಯಾಗಿರುವ ಮಹಿಬೂಬ್ ವಾಲಿಕಾರ ತಂದೆ ನೂರಲಿ ವಾಲಿಕಾರ್ ನೋವು ತೋಡಿಕೊಂಡರು.

click me!