ವಿಶ್ವ ವಿಖ್ಯಾತ ಗೋಳಗುಮ್ಮಟದಲ್ಲಿ ಕನ್ನಡಾಭಿಮಾನದ ಕೋಟಿ ಕಂಠ ಗಾಯನ!

By Suvarna NewsFirst Published Oct 28, 2022, 7:53 PM IST
Highlights

ಗೋಳಗುಮ್ಮಟದ ಆವರಣಲ್ಲಿ ಮೊಳಗಿ ಕನ್ನಡಾಭಿಮಾನ ಅನಾವರಣಗೊಳಿಸಿದವು. ಜಿಲ್ಲಾಡಳಿತ, ಜಿಲ್ಲಾ  ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ  'ಕೋಟಿ ಕಂಠ ಗಾಯನ'  'ನನ್ನ ನಾಡು- ನನ್ನ ಹಾಡು' ಯಶಸ್ವಿಯಾಗಿ ನಡೆಯಿತು.

ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಅ.28) : ಕನ್ನಡ ನಾಡು, ನುಡಿ ಶ್ರೀಮಂತಿಕೆ ಸಾರುವ ಗೀತೆಗಳು ಗೋಳಗುಮ್ಮಟದ ಆವರಣಲ್ಲಿ ಮೊಳಗಿ ಕನ್ನಡಾಭಿಮಾನ ಅನಾವರಣಗೊಳಿಸಿದವು. ಜಿಲ್ಲಾಡಳಿತ, ಜಿಲ್ಲಾ  ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ  'ಕೋಟಿ ಕಂಠ ಗಾಯನ'  'ನನ್ನ ನಾಡು- ನನ್ನ ಹಾಡು' ಯಶಸ್ವಿಯಾಗಿ ನಡೆಯಿತು. ಗೋಳಗುಮ್ಮಟ ಆವರಣದಲ್ಲಿ ಕೋಟಿ ಕಂಠ ಗಾಯನ ನಾಡಭಕ್ತಿಯ ಕಿಚ್ಚು ಹಚ್ಚುವಂತಿತ್ತು. ಜಿಲ್ಲಾಧಿಕಾರಿ ಸೇರಿದಂತೆ, ವೇದಿಕೆಯ ಅತಿಥಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ನಗರದ ಸಾರ್ವಜನಿಕರು ಕರುನಾಡಿನ ಶ್ರೀಮಂತಿಕೆ ಸಾರುವ ಗೀತೆಗಳನ್ನು ಹಾಡುವ ಮೂಲಕ ಅಭಿಮಾನ ಪ್ರದರ್ಶಿಸಿದರು. ನಾಡಗೀತೆ ಜಯಭಾರತ ಜನನೀಯ ತನುಜಾತೆ, ಡಿ.ಎಸ್. ಕರ್ಕಿ ವಿರಚಿತ ಹಚ್ಚೇವು ಕನ್ನಡದ ದೀಪ, ಹುಯಿಲಗೋಳ  ನಾರಾಯಣರಾವ್ ವಿರಚಿತ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಕುವೆಂಪು ವಿರಚಿತ `ಬಾರಿಸು ಕನ್ನಡ ಡಿಂಡಿಮವಾ', ಚೆನ್ನವೀರ ಕಣವಿ ವಿರಚಿತ 'ವಿಶ್ವ ವಿನೂತನ ವಿದ್ಯಾ ಚೇತನ' ಹಂಸಲೇಖ ವಿರಚಿತ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳು ನಗರದ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಮೊಳಗಿದವು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ದಾನಮ್ಮನವರ್..!
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ನಾಡಗೀತೆಯನ್ನು ಹುಯಿಲಗೋಳ ನಾರಾಯಣರಾವ್ ಅವರು ಕರ್ನಾಟಕದ ಏಕೀಕರಣ ಚಳುವಳಿ ಸಂದರ್ಭದಲ್ಲಿ ಈ ಗೀತೆ ಕನ್ನಡ,ನಾಡು-ನುಡಿ ಸಂಸ್ಕೃತಿ, ಭಾಷೆಯ ಐಕ್ಯತೆ ಆಶಯಕ್ಕೆ ಹೊಸ ಹುಮ್ಮಸ್ಸು ಮೂಡಿಸಿತ್ತು. ನವಂಬರ್ ತಿಂಗಳಲ್ಲಿ ಎಲ್ಲಾ ಜನರ ಮನೆ- ಮನಗಳಲ್ಲಿ ಕನ್ನಡಾಂಬೆಯ ಹಬ್ಬದ ವಾತಾವರಣದ ಕಳೆಗಟ್ಟುತ್ತದೆ ಎಂದರು. ಕನ್ನಡವು ಸಂಪದ್ಭರಿತ ಭಾಷೆಯಾಗಿದೆ ಅಂತೆಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅಷ್ಟೆ ಅಲ್ಲದೆ, ಈ ಸಮೃದ್ಧ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಸಂದಿದೆ ಎಂದರು. ಸಾಹಿತ್ಯ ಸಮೃದ್ಧಿಯ ಚೆಲುವ ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಇದರ ಪ್ರಾಚೀನತೆಯನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ನಾವು ಗುರುತಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಮೊದಲ ಆಧ್ಯತೆ ಕನ್ನಡಕ್ಕೆ ಎಂದ ಡಿಸಿ..!
ಇಂತಹ ಶ್ರೀಮಂತ ಸಂಸ್ಕೃತಿಯುಳ್ಳ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು. ನಾಡಿನ ಸಾಹಿತಿಗಳು, ಕವಿಗಳು ತಮ್ಮ ಬರಹ, ಸಾಹಿತ್ಯದ ಮೂಲಕ ಕವನಗಳ ಮೂಲಕ ನಾಡಿನ  ವರ್ಣನೆಯನ್ನ ಬಹು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕೃತಿ ಪರಂಪರೆಯು ಸಾಹಿತ್ಯದ ಮೂಲಕ ಹೆಚ್ಚಳವಾಗಿದೆ ಎಂದರು.

ಬೆಂಗಳೂರು: ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮೊಳಗಿದ ಕನ್ನಡದ ಹಾಡು..!

ಕನ್ನಡ ನಾಡು ಪವಿತ್ರ ಭಾವವಿದ್ದಂತೆ, ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ನಮ್ಮ ಮೊದಲಾದ್ಯತೆ ಕನ್ನಡವೇ ಆಗಿದೆ. ವಿಶೇಷವಾಗಿ ಶಿಕ್ಷಣ ನೀತಿಯು ಮಾತೃಭಾಷೆಗೆ ಒತ್ತು ಕೊಡುತ್ತಿದೆ. ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಕನ್ನಡ ನಾಡಿನ ಸಂಸ್ಕೃತಿ ಭಾಷೆ ಸಿರಿಯನ್ನು ಹೆಚ್ಚಿಸಿ ಅದು ಪಸರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಈ ದಿಸೆಯಲ್ಲಿ ಹಮ್ಮಿಕೊಂಡು ಆಚರಿಸಲಾಗುತ್ತಿದೆ ಎಂದರು.

ಉಡುಪಿ: ಕಡಲಿನ ನಡುವೆ ನೂರಾರು ಬೋಟುಗಳಲ್ಲಿ ಕೋಟಿ ಕಂಠ ಗಾಯನ

ಕೋಟಿ ಕಂಠ ಗಾಯನಕ್ಕೆ ಸಾಕ್ಷಿಯಾದ ಜಿಲ್ಲಾಡಳಿತ..!
ನಾಡು ನುಡಿ, ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಮೂಡಿಸುವ ಗೀತೆಗಳನ್ನು ನಮ್ಮ ನಾಡಿನ ಕವಿಗಳ ರಚಿಸಿದ್ದಾರೆ. ಇವುಗಳನ್ನು ಕೇಳುವ ಹಾಗೂ ಹಾಡುವ ಮೂಲಕ ನಮ್ಮ ಅಭಿಮಾನ ಹೆಚ್ಚಾಗುತ್ತದೆ ಎಂದು ಜಿಲ್ಲಾಡಳಿತದ ಪರವಾಗಿ ಡಿಸಿ ಮಾತನಾಡಿದ್ರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜೆ. ಲಕ್ಕಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಜಿಲ್ಲೆಯ ಅಧಿಕಾರಿಗಳು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

click me!