
ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಖ್ಯಾತ ಯೋಗಗುರು ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ. ಈ ಬೆಳವಣಿಗೆ ಧಾರ್ಮಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಮುನ್ನ ಕೆಲವೇ ವಾರಗಳ ಹಿಂದೆ ಕೂಡಲಸಂಗಮದಲ್ಲಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಪದಚ್ಯುತಗೊಳಿಸಲಾಗಿತ್ತು. ಇದೀಗ ಅದೇ ಸಮುದಾಯದ ಮತ್ತೊಂದು ಪೀಠದಿಂದ ವಚನಾನಂದ ಸ್ವಾಮೀಜಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಮೂಲಗಳ ಪ್ರಕಾರ, ಹರಿಹರ ತಾಲೂಕಿನ ಹನಗವಾಡಿ ಸಮೀಪದ ಗುರುಪೀಠದಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಸುಮಾರು 12 ಮಂದಿ ಧರ್ಮದರ್ಶಿಗಳು ಭಾಗವಹಿಸಿ, ವಚನಾನಂದ ಸ್ವಾಮೀಜಿಯ ಪದಚ್ಯುತಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡರು. ಮಠದಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ನೇತೃತ್ವದಲ್ಲಿ ಟ್ರಸ್ಟ್ ಸಭೆ ನಡೆಯಿತು. ಈ ಸಭೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಕೆ.ಎಂ. ಜ್ಯೋತಿಪ್ರಕಾಶ್, ಬಸವರಾಜ ದಿಂಡೂರ, ಬಾವಿ ಬೆಟ್ಟಪ್ಪ, ಚಂದ್ರಶೇಖರ ಪೂಜಾರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಟ್ರಸ್ಟಿಗಳು ಮತ್ತು ಸದಸ್ಯರು ಭಾಗವಹಿಸಿದರು. ಸಭೆ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದಿದ್ದು, ಬಳಿಕ ಟ್ರಸ್ಟಿಗಳು ಶಾಲಾ ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ಸ್ಥಳ ತೊರೆದರು.
ಮಠದ ಪ್ರವೇಶದ್ವಾರ ಬಳಿ ಜಮಾವಣೆಗೊಂಡಿದ್ದ ಭಕ್ತರು ಟ್ರಸ್ಟಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಉದ್ವಿಗ್ನವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮಠದ ಸುತ್ತಮುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಭಕ್ತರನ್ನು ನಿಯಂತ್ರಿಸಲು ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು.
ಟ್ರಸ್ಟ್ ಸಭೆಯ ಬಳಿಕ ಮಾತನಾಡಿದ ಟ್ರಸ್ಟಿ ಜಿ.ಪಿ. ಪಾಟೀಲ್, “ಇದು ಟ್ರಸ್ಟ್ನ ವೈಯಕ್ತಿಕ ನಿರ್ಧಾರವಲ್ಲ, ಸಮಾಜದ ಒಟ್ಟಾರೆ ಅಭಿಪ್ರಾಯದ ಮೇರೆಗೆ ತೆಗೆದುಕೊಳ್ಳಲಾದ ತೀರ್ಮಾನ” ಎಂದು ತಿಳಿಸಿದ್ದಾರೆ. “ಸ್ವಾಮೀಜಿಗಳು ನಮ್ಮನ್ನು ಒಳಗೆ ಕರೆಯಲು ಸಮ್ಮತಿಸದಿರುವುದು ಹಾಗೂ ಶ್ವಾಸಗುರು ಪೀಠವನ್ನು ಬಿಡದೇ ಇರುವುದೇ ಪ್ರಮುಖ ಕಾರಣ. ಉಳಿದ ಕಾರಣಗಳನ್ನು ಅಧಿಕೃತವಾಗಿ ತಿಳಿಸಲಾಗುತ್ತದೆ” ಎಂದು ಹೇಳಿದರು.
ಇನ್ನೊಂದೆಡೆ, ಟ್ರಸ್ಟಿ ಬಸವರಾಜ ದಿಂಡೂರ ಅವರು, “ಶ್ವಾಸಪೀಠ ಅಥವಾ ಹರಿಹರ ಪಂಚಮಸಾಲಿ ಪೀಠ ಈ ಎರಡರಲ್ಲಿ ಒಂದನ್ನು ಆಯ್ಕೆಮಾಡುವಂತೆ ಸೂಚಿಸಲಾಗಿತ್ತು. ಆದರೆ, ಸ್ವಾಮೀಜಿಗಳು ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಈ ಘಟನೆಯ ಬಳಿಕವೂ ವಚನಾನಂದ ಸ್ವಾಮೀಜಿಗಳು ಮಠದಲ್ಲಿಯೇ ಇರುವುದಾಗಿ ತಿಳಿದುಬಂದಿದೆ. ಸಂಜೆ 5 ಗಂಟೆಯ ಬಳಿಕ ಭಕ್ತರಿಗೆ ಮಠ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆ ಇದ್ದು, ಸ್ವಾಮೀಜಿಗಳು ಭಕ್ತರೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಭಕ್ತರು ಮಠದ ಹೊರಭಾಗದಲ್ಲಿ ಜಮಾವಣೆಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿದಿದೆ.
ಒಟ್ಟಿನಲ್ಲಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದಿರುವ ಈ ಬೆಳವಣಿಗೆ ಸಮಾಜದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.