ಬಿರು ಬಿಸಿಲಿಗೆ ತತ್ತರಿಸಿದ ಕೊಡಗು ಜಿಲ್ಲೆ, ಗರಿಷ್ಟ 34 ಉಷ್ಣಾಂಶ ದಾಖಲು!

By Ravi JanekalFirst Published Apr 7, 2024, 7:18 PM IST
Highlights

ಕೊಡಗು ಎಂದರೆ ಸ್ಕಾಟ್ ಲ್ಯಾಂಡ್ ಆಫ್ ಇಂಡಿಯಾ, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಹೆಸರುಗಳನ್ನು ಪಡೆದುಕೊಂಡು ಪ್ರಸಿದ್ಧಿ ಪಡೆದಿತ್ತು. ಅಂತಹ ಕೊಡಗು ಜಿಲ್ಲೆ ಈ ಬಾರಿ ಬರಗಾಲದಿಂದಾಗಿ ಇಂದು ಬಿರು ಬಿಸಿಲಿನ ನಾಡಾಗಿ ಪರಿವರ್ತನೆಯಾಗಿದೆ. 

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.7): ಕೊಡಗು ಎಂದರೆ ಸ್ಕಾಟ್ ಲ್ಯಾಂಡ್ ಆಫ್ ಇಂಡಿಯಾ, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಹೆಸರುಗಳನ್ನು ಪಡೆದುಕೊಂಡು ಪ್ರಸಿದ್ಧಿ ಪಡೆದಿತ್ತು. ಅಂತಹ ಕೊಡಗು ಜಿಲ್ಲೆ ಈ ಬಾರಿ ಬರಗಾಲದಿಂದಾಗಿ ಇಂದು ಬಿರು ಬಿಸಿಲಿನ ನಾಡಾಗಿ ಪರಿವರ್ತನೆಯಾಗಿದೆ. 

ಹೌದು ಜಿಲ್ಲೆಯಲ್ಲಿ ಭೀಕರ ಬಿಸಿಲು ಹೊಡೆಯುತ್ತಿದ್ದು ನಿತ್ಯ ಬರೋಬ್ಬರಿ 34 ರಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಹಿಂದೆಯೆಲ್ಲಾ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆ ಸುರಿಯುತಿತ್ತು. ಹೀಗಾಗಿ ಜಿಲ್ಲೆಯು ಕೂಲ್ ಕೂಲ್ ಆಗಿ ಇರುತಿತ್ತು. ಬೆಟ್ಟಗುಡ್ಡಗಳಿಂದ ಕೂಡಿರುವ ಜಿಲ್ಲೆಯಲ್ಲಿ ಮೋಡಗಳು ಭೂಮಿಗೆ ಇಳಿದಂತೆ ಬಹುತೇಕ ಸಮಯ ಮಂಜು ಆವರಿಸಿರುತಿತ್ತು. ಆಗೆಲ್ಲಾ 15 ರಿಂದ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತಿತ್ತು. ಆದರೆ ಈ ವರ್ಷ ತೀವ್ರ ಮಳೆ ಕೊರತೆಯಿಂದಾಗಿ ಮಂಜಿನ ಮಾತಿರಲಿ, ಮೋಡಗಳೂ ಕಾಣಿಸುತ್ತಿಲ್ಲ. ಬಿರುಬಿಸಿಲನ ಧಗೆಗೆ ಜಿಲ್ಲೆಯ ಜಲಾಶಯ, ನದಿ, ತೊರೆಗಳೇ ಬತ್ತಿಹೋಗಿವೆ. ನಿತ್ಯ 34 ರಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. 

ಹೀಗಾಗಿಯೇ ಜನರು ಮನೆಯಿಂದ ಹೊರಗೆ ಬರುವುದಕ್ಕೆ ಭಯಪಡುವಂತೆ ಆಗಿದೆ. ಮನೆ ಒಳಗೆ ಇದ್ದರೆ ಇನ್ನಿಲ್ಲದ ಧಗೆ, ಶೆಕೆ. ಮನೆಗೆ ಏನಾದರೂ ಅಗತ್ಯ ವಸ್ತುಗಳನ್ನು ಕೊಳ್ಳಲೋ, ಇಲ್ಲ ಕರ್ತವ್ಯಗಳಿಗೆ ತೆರಳಲು ಮನೆಯಿಂದ ಹೊರಗೆ ಬರಲು ಜನರು ಭಯ ಪಡುತಿದ್ದಾರೆ. ಒಂದು ವೇಳೆ ಹೊರಗೆ ಬಂದರು ಕೊಡೆ ಇಲ್ಲದೆ ನಡೆಯಲು ಸಾಧ್ಯವೇ ಇಲ್ಲ ಎಂದು ಕೊಡೆ ಹಿಡಿದೋ, ಇಲ್ಲವೆ ಹೆಣ್ಣುಮಕ್ಕಳು ತಲೆಯ ಮೇಲೆ ದುಪ್ಪಟ ಹಾಕಿಕೊಂಡೋ ಓಡಾಡುವಂತೆ ಆಗಿದೆ. 

8 ದಿನ ಕರ್ನಾಟಕಕ್ಕೆ ಉಷ್ಣ ಅಲೆ ಭೀತಿ, ಮೂರು ತಿಂಗಳು ಆತಂಕ..!

ಬಿಸಿಲಿನ ತಾಪ ತಾಳಲಾರದೆ ನೀರಿನ ಅಂಶ ಅಧಿಕವಾಗಿರುವ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ಮೊರೆ ಹೋಗುತಿದ್ದಾರೆ. ಎಳನೀರು, ಐಸ್ಕ್ರೀಂಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತಿದ್ದಾರೆ. ಪ್ರಾಣಿ, ಪಕ್ಷಿಗಳು ಕೂಡ ಪರದಾಡುವಂತೆ ಆಗಿದೆ. ಮಡಿಕೇರಿಯಲ್ಲಿ ನಿತ್ಯ 50 ಎಳನೀರು ಮಾರುತಿದ್ದವನು ಈಗ ಸಾವಿರ ಎಳನೀರು ಮಾರುತ್ತಿದ್ದೇನೆ. ಜನರು ಅಷ್ಟರ ಮಟ್ಟಿಗೆ ತಂಪು ಪಾನೀಯಗಳಿಗೆ ಮೊರೆ ಹೋಗಿದ್ದಾರೆ. ಇಂತಹ ಬಿಸಿಲನ್ನು ಇಷ್ಟು ವರ್ಷಗಳಲ್ಲಿ ನಾನು ಹಿಂದೆಂದೂ ನೋಡಿರಲಿಲ್ಲ ಎನ್ನುತ್ತಿದ್ದಾರೆ ವ್ಯಾಪಾರಿಗಳು. 

ರಾಜ್ಯದಲ್ಲಿ ರಣಬಿಸಿಲು: ಉಷ್ಣಮಾರುತಕ್ಕೆ ಮೊದಲ ಸಾವು?

ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಮಾರ್ಚಿ ತಿಂಗಳ ಆರಂಭದಿಂದಲೇ ಹಿಂಗಾರು ಮಳೆಗಳು ಸುರಿಯುತಿದ್ದವು. ಆದರೆ ಈ ಬಾರಿ ಏಪ್ರಿಲ್ ತಿಂಗಳ ಮೊದಲ ವಾರ ಮುಗಿಯುತ್ತಿದ್ದರೂ ಇಂದಿಗೂ ಒಂದು ಹನಿಯೂ ಮಳೆ ಬಿದ್ದಿಲ್ಲ. ಜೊತೆಗೆ ಬೇಸಿಗೆ ದಿನಗಳು ಕಳೆದಂತೆಲ್ಲಾ ದಿನದಿಂದ ದಿನಕ್ಕೆ ಬಿಸಿಲ ಜಳ ತಾರಕ್ಕಕ್ಕೇರುತ್ತಲೇ ಇದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ ಮಲೆನಾಡು ಜಿಲ್ಲೆಯಾಗಿರುವ ಕೊಡಗು ಜಿಲ್ಲೆಯಲ್ಲಿ 35 ಡಿಗ್ರಿಯಷ್ಟು ಬಿಸಿಲ ಧಗೆ ಇದ್ದು, ಮೇ ತಿಂಗಳಿನಲ್ಲಿ ಈ ಬಿಸಿಲ ತಾಪ ಅದು ಯಾವ ಹಂತ ತಲುಪುತ್ತದೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ.  ಒಂದು ವೇಳೆ ಮಳೆ ಸುರಿದರೆ ಕೊಡಗು ಜಿಲ್ಲೆಯ ಭೂ ಪ್ರದೇಶ ಒಂದಷ್ಟು ತಣ್ಣಗಾಗಲಿದೆ. ಇಲ್ಲದಿದ್ದರೆ ಜನರು ಬದುಕುವುದು ಕಷ್ಟ ಎನ್ನುವ ಸ್ಥಿತಿ ಎದುರಾಗಲಿದೆ.

click me!