
ವರದಿ : ಸಂಪತ್ ತರೀಕೆರೆ
ಬೆಂಗಳೂರು (ಡಿ.14): ಬೆಂಗಳೂರಿನ (Bengaluru) ನಿರ್ಮಾತೃ ನಾಡಪ್ರಭು ಕೆಂಪೇಗೌಡರ (Kempegowda) ಅಧ್ಯಯನ ಪೀಠ ಸ್ಥಾಪನೆ ಯೋಜನೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಭೂಮಿ ಪೂಜೆ ಮಾಡಿ ಐದು ವರ್ಷ ಕಳೆದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ BBMP) ಮತ್ತು ರಾಜ್ಯ ಸರ್ಕಾರ ಕೂಡ ಅಧ್ಯಯನ ಪೀಠ ಸ್ಥಾಪನೆ ಯೋಜನೆಯನ್ನೇ ಮರೆತಂತಿದೆ. ನಗರದ ಜ್ಞಾನ ಭಾರತಿ ಆವರಣದಲ್ಲಿ 3 ಎಕರೆ ಪ್ರದೇಶದಲ್ಲಿ ಅಂದಾಜು 50 ಕೋಟಿ ರು. ವೆಚ್ಚದಲ್ಲಿ ಅಧ್ಯಯನ ಪೀಠ ನಿರ್ಮಿಸಲು ಯೋಜಿಸಲಾಗಿತ್ತು. ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ 2017ರ ಸೆಪ್ಟೆಂಬರ್ನಲ್ಲಿ ಈ ಸಂಬಂಧ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು. ಆದರೆ ಈವರೆಗೂ ಯೋಜನೆ ಅನುಷ್ಠಾನ ಮಾತ್ರ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಯೋಜನೆಗೆ ಅಗತ್ಯವಾದ ಹಣ ಒದಗಿಸದಿರುವುದೇ ಕಾರಣವೆನ್ನಲಾಗಿದೆ.
2019 ಡಿಸೆಂಬರ್ 6ರಂದು ನಗರಾಭಿವೃದ್ಧಿ ಇಲಾಖೆ, ಯೋಜನೆಗೆ ತಗಲುವ ವೆಚ್ಚವನ್ನು ಬಿಬಿಎಂಪಿಯ (BBMP) ಮುಂದಿನ ಬಜೆಟ್ನಲ್ಲಿ ಮೀಸಲಿಡಬೇಕು. ಕಾಮಗಾರಿಯನ್ನು ಕೆಟಿಪಿಪಿ (KTPP) ಕಾಯ್ದೆ ಅನುಸಾರವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿತ್ತು. ಆ ನಂತರ ಕೋವಿಡ್ ಸೋಂಕು ಉಲ್ಬಣಗೊಂಡು ಲಾಕ್ಡೌನ್ ಜಾರಿಯಾಗಿದ್ದರಿಂದ ಯೋಜನೆ ಜಾರಿಯಾಗಲೇ ಇಲ್ಲ.
2021ರ ಜೂನ್ನಲ್ಲಿ ಕೆಂಪೇಗೌಡರ 511ನೇ ಜನ್ಮ ದಿನಾಚರಣೆ ವೇಳೆ ಸ್ವತಃ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ (BS Yediyurappa) ಕಾಮಗಾರಿಗೆ ಚಾಲನೆ ನೀಡಿದರು. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಯೋಜನೆ ರೂಪಿಸಿ ಕಾರ್ಯದೇಶ ಕೂಡ ಕೊಟ್ಟಿದ್ದರೂ ಯೋಜನೆಗೆ ಅಗತ್ಯವಾದ ಹಣ ಮಾತ್ರ ಬಿಡುಗಡೆಯಾಗಲಿಲ್ಲ. ಹೀಗಾಗಿ ಕಾಮಗಾರಿಗಳೂ ನಡೆಯಲಿಲ್ಲ.
ವಿಪರಾರಯಸವೆಂದರೆ ಇದೇ ಸಮಯದಲ್ಲಿ ಭೂಮಿ ಪೂಜೆ ನೆರವೇರಿಸಿದ್ದ ಅಂಬೇಡ್ಕರ್ ಎಕನಾಮಿಕ್ಸ್ ಸ್ಕೂಲ್ ಆಫ್ ಯೂನಿವರ್ಸಿಟಿ, ಈಶಾನ್ಯ ರಾಜ್ಯಗಳ ವಿದ್ಯಾರ್ಥಿ ನಿಲಯ, ಅಂಬೇಡ್ಕರ್ ಅಧ್ಯಯನ ಪೀಠದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡು ಕೇಂದ್ರಗಳು ಲೋಕಾರ್ಪಣೆಗೊಂಡಿವೆ. ಆದರೆ ಕೆಂಪೇಗೌಡ ಅಧ್ಯಯನ ಪೀಠದ ಕಾಮಗಾರಿ ಆರಂಭಕ್ಕೂ ಮುನ್ನವೇ ಮುಕ್ತಾಯವಾದಂತೆ ಕಾಣುತ್ತಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಕೇಂದ್ರದ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಕೆಂಪೇಗೌಡರ (Kempegowda) ಅಧ್ಯಯನ ಪೀಠ ಸ್ಥಾಪನೆಗೆ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ. ಈ ಅಧ್ಯಯನ ಪೀಠ ಸ್ಥಾಪನೆಗೆ ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಕೂಡ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಆರಂಭದಲ್ಲಿ ಈ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದ ಒಕ್ಕಲಿಗ ಸಮುದಾಯದ ನಾಯಕರು, ಸಚಿವರು, ಶಾಸಕರು ಕೂಡ ಈಗ ಸುಮ್ಮನಾಗಿದ್ದಾರೆ. ಹೀಗಾಗಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪನೆ ನೆನೆಗುಂದಿಗೆ ಬಿದಿದ್ದೆ ಎನ್ನಲಾಗುತ್ತಿದೆ.
ಶಾಸನ, ದೇಗುಲ, ಶಿಲ್ಪಕಲೆ ನಿರ್ಮಿಸುವ ಯೋಜನೆ
ಬೃಹತ್ ಕಟ್ಟಡದಲ್ಲಿ ದೊಡ್ಡ ಸಭಾಂಗಣ, ಸುಸಜ್ಜಿತ ಮ್ಯೂಸಿಯಂ, ಗ್ರಂಥಾಲಯ, 20 ಅಡಿ ಎತ್ತರದ ಅಶ್ವಾರೂಢ ಪ್ರತಿಮೆ, ತರಗತಿಗಳ ಕೊಠಡಿಗಳು, ಸಂಶೋಧನಾ ಕೊಠಡಿಗಳು ಹೀಗೆ ನಾನಾ ಕಟ್ಟಡಗಳು ಬರಲಿವೆ. ವಿರಗಲ್ಲು, ಮಾಸ್ತಿಗಲ್ಲು ಸೇರಿದಂತೆ ನಾನಾ ರಾಜ್ಯಗಳಲ್ಲಿರುವ ಶಾಸನಗಳ ಸಂಗ್ರಹದ ಮ್ಯೂಸಿಯಂ ಕೂಡ ಇಲ್ಲಿ ನಿರ್ಮಾಣ ಮಾಡಬೇಕೆಂಬ ಯೋಜನೆ ಇದೆ. ಮುಖ್ಯವಾಗಿ 16ನೇ ಶತಮಾನದ ಕೆಂಪೇಗೌಡರ ಸಾಮ್ರಾಜ್ಯವನ್ನು ಸ್ಮರಿಸುವಂತೆ ಅತ್ಯಂತ ಆಕರ್ಷಕವಾಗಿ 3 ಎಕರೆ ಜಾಗದಲ್ಲಿ ಕೆಂಪೇಗೌಡರ ಕಾಲದ ಶಾಸನಗಳು, ದೇವಸ್ಥಾನ, ಶಿಲ್ಪಕಲೆ ಇತ್ಯಾದಿಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. ಅದಕ್ಕಾಗಿ .15 ಕೋಟಿ ವೆಚ್ಚದಲ್ಲಿ ಹಳೆ ಬೆಂಗಳೂರಿನ ಮರು ಸೃಷ್ಟಿಗೂ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ.
ಆದರೆ, ಅಧ್ಯಯನ ಕೇಂದ್ರಕ್ಕೆ ವಾಹನದ ವ್ಯವಸ್ಥೆಯೂ ಇಲ್ಲದ ಪರಿಣಾಮ ಕೆಂಪೇಗೌಡ ಅಧ್ಯಯನಕ್ಕೆ ಬೇಕಾದ ಶಾಸನಗಳ ಸಂಗ್ರಹ ಸೇರಿದಂತೆ ಯಾವುದೇ ಕ್ಷೇತ್ರ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಸಂಶೋಧನಾ ಪರಿಕರಗಳು, ಶಾಸನಗಳು ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಕೇಂದ್ರ ಸಮಿತಿ ಆತಂಕ ವ್ಯಕ್ತಪಡಿಸಿದೆ.