ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ, ಎಚ್‌ಕೆಪಿ

By Kannadaprabha NewsFirst Published Dec 21, 2022, 9:30 PM IST
Highlights

ಗಡಿ ವಿಚಾರದಲ್ಲಿ ಕೇಂದ್ರದ ಗೃಹ ಸಚಿವರು ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿದರು. ಆದರೆ, ಈ ಸಭೆಯನ್ನು ಕರ್ನಾಟಕದ ಮುಖ್ಯಮಂತ್ರಿ ತಿರಸ್ಕಾರ ಮಾಡಬೇಕಿತ್ತು ಎಂದ ಎಚ್‌.ಕೆ.ಪಾಟೀಲ 

ಬೆಳಗಾವಿ(ಡಿ.21):  ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ, ಕಾಳಜಿ ಕಾಣುತ್ತಿಲ್ಲ ಎಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಕೇಂದ್ರದ ಗೃಹ ಸಚಿವರು ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿದರು. ಆದರೆ, ಈ ಸಭೆಯನ್ನು ಕರ್ನಾಟಕದ ಮುಖ್ಯಮಂತ್ರಿ ತಿರಸ್ಕಾರ ಮಾಡಬೇಕಿತ್ತು ಎಂದರು.

ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಮಹಾಜನ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ. ಹೀಗಿದ್ದಾಗ ಅಲ್ಲಿ ಚರ್ಚೆ ಕರೆದು ಇಬ್ಬರನ್ನೂ ಶಾಂತಿ ಕಾಪಾಡಲು ನೇಮಕ ಮಾಡುತ್ತಾರೆ. ನಮ್ಮ ಕರ್ನಾಟಕ ಸರ್ಕಾರ ಶಾಂತಿ ಕಾಪಾಡಲು ಆಗುವುದಿಲ್ಲ. ಬೆಳಗಾವಿಯಲ್ಲಿ ಅಶಾಂತಿ ಇದೆಯಾ? ಪುರಾವೆಗಳನ್ನು ನೀವೇ ಸೃಷ್ಟಿಮಾಡಿದ್ದೀರಿ. ಈ ರೀತಿ ತಪ್ಪು ಹೆಜ್ಜೆ ಇಟ್ಟಿರುವ ಸರ್ಕಾರ ಜನರ ಕ್ಷಮೆ ಕೇಳಬೇಕು. ತಕ್ಷಣ ಸರ್ವಾನುಮತದ ನಿರ್ಣಯ ಮಾಡಿ ದಿಟ್ಟಹೆಜ್ಜೆ ತೆಗೆದುಕೊಳ್ಳಬೇಕು. ಮತ್ತೊಮ್ಮೆ ನಮ್ಮ ನಿಲುವು ಗೊತ್ತುಪಡಿಸಬೇಕು ಎಂದರು.

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಮತ್ತೆ ಕರ್ನಾಟಕ ವಿರುದ್ಧ ಕಿಡಿ

ಮಹಾಜನ ವರದಿಯೇ ಅಂತಿಮ: ಮಾಧುಸ್ವಾಮಿ

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಲ್ಲಿ ಮಹಾಜನ ವರದಿಯೇ ಅಂತಿಮ. ಕನ್ನಡ ನಾಡು, ನುಡಿ, ಗಡಿ ವಿಚಾರದಲ್ಲಿ ನಾವು ಯಾರೊಂದಿಗೂ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೊದಲಿನಿಂದಲೂ ಮಹಾಜನ ವರದಿಯೇ ಅಂತಿಮ ಎಂದು ಹೇಳಿಕೊಂಡು ಬಂದಿದ್ದೇವೆ. ಮಹಾಜನ ವರದಿಯನ್ನು ಡಿಮ್ಯಾಂಡ್‌ ಮಾಡಿ ಮಾಡಿಸಿದ್ದು ಮಹಾರಾಷ್ಟ್ರ ಸರ್ಕಾರ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿನ ಮರಾಠಿಗರಿಗೆ ಮಹಾರಾಷ್ಟ್ರ ನೆರವು ಪ್ರಕಟ

ಎಸ್ಸಿ, ಎಸ್ಟಿ ಮೀಸಲು: ಎಲ್ಲರೊಂದಿಗೆ ಚರ್ಚಿಸಿಯೇ ವಿಧೇಯಕ ಮಂಡನೆ

ಬೆಳಗಾವಿ: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಮೀಸಲಾತಿ ಬಗ್ಗೆ ಸರ್ವಪಕ್ಷ ಸಭೆ ಕರೆದು ಎಲ್ಲರೊಂದಿಗೆ ಚರ್ಚಿಸಿಯೇ ವಿಧೇಯಕ ಮಂಡಿಸಿದ್ದೇವೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ, ಎಸ್ಟಿಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದವರು ರಾಜಕೀಯ ಸ್ಟಂಟ್‌ ಆರಂಭಿಸಿದ್ದಾರೆ. ಈ ಬಗ್ಗೆ ಎಲ್ಲರ ಜೊತೆಯಲ್ಲಿಯೂ ಚರ್ಚೆ ಮಾಡಿದ್ದೆವು. ಅಲ್ಲದೇ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದವರು ಚರ್ಚೆಯಲ್ಲಿ ಉಪಸ್ಥಿತರಿದ್ದರು. ಹೀಗಿದ್ದ ಮೇಲೂ ಈ ರೀತಿಯಲ್ಲಿ ಟೀಕಿಸುವುದು ಸರಿಯಲ್ಲ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ ನೀವು ಚರ್ಚೆಯಲ್ಲಿ ಭಾಗಿಯಾಗಿರಲಿಲ್ವ? ನೀವು ಏನು ಮಾಡುತ್ತೀರೋ ಮಾಡಿ, ನಾವಿದ್ದೇವೆಂದು ಹೇಳಿದವರು ಯಾರು? ನಿಮ್ಮ ಸಲಹೆ ತೆಗೆದುಕೊಂಡು ನಾವು ಈ ರೀತಿಯಾಗಿ ಮಾಡಿದ್ದೇವೆ. ಈಗ ನಮ್ಮನ್ನು ಟೀಕಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

click me!