ಧಾರವಾಡ: ಆಡಳಿತ ವ್ಯವಸ್ಥೆಯಿಂದ ಬೇಸತ್ತು ಮತದಾನ ಬಹಿಷ್ಕಾರಕ್ಕೆ ಮುಂದಾದ ಗೌಳಿ ಜನ!

By Kannadaprabha NewsFirst Published Apr 13, 2023, 10:51 AM IST
Highlights

ಆಡಳಿತ ವ್ಯವಸ್ಥೆಯಿಂದ ಬೇಸತ್ತು ಗೌಳಿಗರೇ ವಾಸಿಸುವ ಈ ಗ್ರಾಮದ ಜನರು ವಿಧಾನಸಭಾ ಚುನಾವಣೆಯ ಮತದಾನವನ್ನೇ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.  ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಬಳಲುತ್ತಿದ್ದು, ಎಲ್ಲ ಹಂತದ ಮನವಿ, ಪ್ರತಿಭಟನೆ ಹಾಗೂ ಹೋರಾಟದ ನಂತರ ಕೊನೆಗೆ ಆಡಳಿತ ವ್ಯವಸ್ಥೆಗೆ ಪಾಠ ಕಲಿಸಲು ಮತದಾನದ ಬಹಿಷ್ಕಾರಕ್ಕೆ ಸಜ್ಜಾಗಿದ್ದಾರೆ.

ವಿಶೇಷ ವರದಿ

ಧಾರವಾಡ (ಏ.13) : ಆಡಳಿತ ವ್ಯವಸ್ಥೆಯಿಂದ ಬೇಸತ್ತು ಗೌಳಿಗರೇ ವಾಸಿಸುವ ಈ ಗ್ರಾಮದ ಜನರು ವಿಧಾನಸಭಾ ಚುನಾವಣೆಯ ಮತದಾನವನ್ನೇ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

Latest Videos

ಸಮೀಪದ ದಡ್ಡಿ ಕಮಲಾಪೂರ ಗ್ರಾಮಸ್ಥರು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಬಳಲುತ್ತಿದ್ದು, ಎಲ್ಲ ಹಂತದ ಮನವಿ, ಪ್ರತಿಭಟನೆ ಹಾಗೂ ಹೋರಾಟದ ನಂತರ ಕೊನೆಗೆ ಆಡಳಿತ ವ್ಯವಸ್ಥೆಗೆ ಪಾಠ ಕಲಿಸಲು ಮತದಾನದ ಬಹಿಷ್ಕಾರಕ್ಕೆ ಸಜ್ಜಾಗಿದ್ದಾರೆ. ಸುಮಾರು 13 ವರ್ಷಗಳಿಂದ ಗ್ರಾಮದ ಬಡ ಜನರಿಗೆ ಆಶ್ರಯ ಮನೆ ನೀಡದೇ ಸತಾಯಿಸುತ್ತಿರುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡದೇ ಇರುವುದೇ ಈ ಜನರ ಬೇಸರಕ್ಕೆ ಕಾರಣವಾಗಿದೆ.

ಮೂಡಿಗೆರೆ ಕ್ಷೇತ್ರದಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯ ದಡ್ಡಿ ಕಮಲಾಪೂರ ಬರೀ ಗೌಳಿಗಳೇ ವಾಸಿಸುವ ಜನ. ಶಿಕ್ಷಣವು ಅಷ್ಟಕಷ್ಟೇ. ದನಕರುಗಳೊಂದಿಗೆ ಬದುಕುವ ಬಡ ಜನತೆಗೆ ಸರಿಯಾದ ಸೂರಿಲ್ಲ. ಹೀಗಾಗಿ ಸೂರಿಗಾಗಿ ಬಡಿದಾಡುವಂತಾಗಿದೆ. ಧಾರವಾಡ ನಗರದಿಂದ ಹತ್ತೇ ಕಿಲೋ ಮೀಟರ್‌ ಸಮೀಪ, ಗೋವಾ ರಸ್ತೆಗೆ ಹೊಂದಿಕೊಂಡರೂ ಈವರೆಗೂ ಕುಡಿಯುವ ನೀರು, ಗಟಾರು, ರಸ್ತೆಗಳಿಲ್ಲ. ದನಕರುಗಳೊಂದಿಗೆ ಬದುಕುವ ಬಡ ಜನತೆ ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದು ಕೊನೆ ಅಸ್ತ್ರವಾಗಿ ಮತದಾನ ಬಹಿಷ್ಕಾರದ ತೀರ್ಮಾನಕ್ಕೆ ಬಂದಿದ್ದಾರೆ.

ಗ್ರಾಮದ ಸಮೀಪವೇ 1.27 ಎಕರೆ ಜಮೀನಿದ್ದು ಬಡ ಜನತೆಗೆ ಆಶ್ರಯ ಮನೆಗಳನ್ನು ನೀಡಬೇಕು ಎನ್ನುವುದು ಜನರ ಆಗ್ರಹ. ಅದಕ್ಕಾಗಿ 2010ರಿಂದ ಹೋರಾಟ ಮಾಡಲಾಗುತ್ತಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದ ಕಾರಣ ಈವರೆಗೂ ಅದು ಕೈಗೊಡಿಲ್ಲ. ಜೊತೆಗೆ ಈ ಜಾಗವನ್ನು ರಸ್ತೆಯನ್ನಾಗಿ ಮಾಡಿಕೊಂಡಿರುವ ಮಹಿಷಿ ಟ್ರಸ್ಟ್‌ ಆಶ್ರಯ ಮನೆಗಳನ್ನು ಮಾಡಲು ಅಡ್ಡಗಾಲು ಹಾಕುತ್ತಿದೆ ಎಂದು ಗ್ರಾಮದ ಮುಖಂಡರಾದ ಕಮಲು ಫäಲವಾಲೆ ಆರೋಪಿಸುತ್ತಾರೆ. ಟ್ರಸ್ಟ್‌ಗೆ ಹೋಗಿ ಬರಲು ಗ್ರಾಮದಲ್ಲಿ ಅಧಿಕೃತ ದಾರಿ ಇದ್ದರೂ ಆಶ್ರಯ ಮನೆಗಳಿಗೆ ನೀಡಬೇಕಾದ ಜಾಗವನ್ನು ರಸ್ತೆಯನ್ನಾಗಿ ಬಳಸಿಕೊಂಡು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಬಡ ಜನತೆಗೆ ತೊಂದರೆ ಮಾಡುತ್ತಿದ್ದಾರೆ ಎಂದೂ ಫäಲವಾಲೆ ಆರೋಪಿಸುತ್ತಾರೆ.

ಅದೆಷ್ಟೋ ವರ್ಷಗಳಿಂದ ದೂರುತ್ತಿದ್ದರೂ ನಮ್ಮ ಗೋಳನ್ನು ಯಾರೂ ಕೇಳುತ್ತಿಲ್ಲ. ಸಂತೋಷ ಲಾಡ್‌ ಸಚಿವರಿದ್ದಾಗ ಅವರ ಗಮನಕ್ಕೆ ತರಲಾಗಿತ್ತು. ಆಗಿನ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದರು. ಇನ್ನೇನು ಕೆಲಸ ಆಯ್ತು ಎನ್ನುವಷ್ಟರಲ್ಲಿ ಲಾಡ್‌ ಅಧಿಕಾರಾವಧಿ ಮುಗಿಯಿತು. ನಂತರ ಬಂದ ಸಿ.ಎಂ. ನಿಂಬಣ್ಣವರ ಗ್ರಾಮದತ್ತ ಕಣ್ಣೆತ್ತಿ ನೋಡಿಲ್ಲ. ಹೀಗಾಗಿ ಬೇಸತ್ತು ಆ ಜಾಗದಲ್ಲಿ ತಾತ್ಕಾಲಿಕ ಟೆಂಟ್‌ ಹಾಕಿದ್ದೇವು. ಅವುಗಳನ್ನು ತಹಶೀಲ್ದಾರರು ಕಿತ್ತೊಗೆದರು. ಇದೀಗ ಚುನಾವಣೆ ಬಂದಿದೆ. ಗ್ರಾಮದಲ್ಲಿ 545 ಜನ ಮತದಾರರಿದ್ದಾರೆ. ಮತಪ್ರಚಾರಕ್ಕೆ ಗ್ರಾಮಕ್ಕೂ ರಾಜಕಾರಣಿಗಳು ಬರದಂತೆ ಊರ ಹೊರಗೆ ಬ್ಯಾನರ್‌ ಹಾಕಿ ಅವರನ್ನು ತಡೆಯುತ್ತೇವೆ. ಒಟ್ಟಾರೆ ಗ್ರಾಮದ ಅಭಿವೃದ್ಧಿಗೆ ಬದ್ಧರಾದರೆ ಮಾತ್ರ ಮತದಾನ ಎಂದು ಗ್ರಾಮದ ಮುಖಂಡರಾದ ಚೇತನ ಫäಲವಾಲೆ, ಶಿವು ಬಡಿಗೇರ, ರಾಜನ್‌ ಖಾನೆವಾಲೆ, ಕಿರಣ ಗಾರವಾಲೆ ಎಚ್ಚರಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಮತದಾನ ಬಹಿಷ್ಕಾರ..!

ದಡ್ಡಿಕಮಲಾಪೂರ ಗ್ರಾಮದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕಾರ ಅಂತಹ ತೀರ್ಮಾನಕ್ಕೆ ಗ್ರಾಮಸ್ಥರು ಬರಬಾರದು ಎಂದು ಅವರ ಮನವೊಲಿಸಲಾಗುವುದು. ಜೊತೆಗೆ ಅಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸುತ್ತೇನೆ.

ಗುರುದತ್‌್ತ ಹೆಗಡೆ, ಜಿಲ್ಲಾಧಿಕಾರಿಗಳು

click me!