
ಕಮಲಾಪುರ (ಏ.8): ತಾಲೂಕಿನ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಶಿಕ್ಷಕಿ ಜ್ಯೋತಿ ಕಪಾಳ ಶವ ಶನಿವಾರ ಪತ್ತೆಯಾದ ಪ್ರಕರಣ ಕಳೆದ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿಂಚೋಳಿ ತಾಲೂಕಿನ ಭುಂಯರ್ ಗ್ರಾಮದ ಅಮರ್ ಕುಡ್ದಳ್ಳಿ ಬಂಧಿತ ಆರೋಪಿ. ಕಷ್ಟ ಕಾಲದಲ್ಲಿ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಜ್ಯೋತಿ ಅವರನ್ನು ಆರೋಪಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಮರ್ ಹಾಗೂ ಜ್ಯೋತಿ ಮೊದಲಿನಿಂದಲೇ ಸ್ನೇಹಿತರು. ಜ್ಯೋತಿ ಅವರಿಂದ ಅಮರ್ ₹14 ಲಕ್ಷ ಹಣ ಪಡೆದು ನಂದಿನಿ ಪಾರ್ಲರ್ ತೆರೆದಿದ್ದ. ಇತ್ತೀಚೆಗೆ ಜ್ಯೋತಿ ಹಣ ವಾಪಸ್ ಕೇಳಿದ್ದರು. 5 ದಿನ ಹಿಂದೆ ಹಣ ಕೊಡುತ್ತೇನೆ ಎಂದು ಹೇಳಿ ಜ್ಯೋತಿಯನ್ನು ಕಾರಲ್ಲಿ ಸುತ್ತಾಡಿಸಿ ಮಧ್ಯರಾತ್ರಿ 1ಕ್ಕೆ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ಬಳಿಕ ಸಾಕ್ಷಿ ನಾಶಪಡಿಸಲು ಮೃತದೇಹವನ್ನು ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ಮಾರ್ಗದರ್ಶನದಲ್ಲಿ ಸಿಪಿಐ ಶಿವಶಂಕರ್ ಸಾಹು ಪಿಎಸ್ಐ ಸುಖಾನಂದ ಸಿಂಗೆ ನೇತೃತ್ವದ ತಂಡ ಉಪೇಂದ್ರ, ಹುಸೇನ್ ಪಟೇಲ್, ರಾಕೇಶ್, ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.