
ಕಲಬುರಗಿ (ಮಾ.10): ಸದ್ದಿಲ್ಲದೇ ನಡೆಯುತ್ತಿದ್ದ ಧಾರ್ಮಿಕ ಮತಾಂತರದ ಷಡ್ಯಂತ್ರವೊಂದನ್ನು ಹಿಂದೂ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ. ಹಳ್ಳಿ ಹಳ್ಳಿಗಳಿಗೆ ಹೋಗಿ ನಾವು ನಿಮಗಾಗಿ ಪ್ರಾರ್ಥನೆ ಮಾಡುತ್ತೇವೆ. ನಮ್ಮೊಂದಿಗೆ ನೀವೂ ಕೂಡ ಭಾನುವಾರ ಬಂದು ಪ್ರಾರ್ಥನೆ ಮಾಡಿ ಎಂದು ಯೇಸು ಕ್ರಿಸ್ತನ ಬೋಧನೆಗಳ ಕರಪತ್ರಗಳನ್ನು ಹಂಚಿಕೆ ಮಾಡುತ್ತಾ ಮತಾಂತರಕ್ಕೆ ಷಡ್ಯಂತ್ರ ಮಾಡುತ್ತಿದ್ದ ಗ್ಯಾಂಗ್ ಅನ್ನು ಹಿಂದೂ ಕಾರ್ಯಕರ್ತರು ಭೇದಿಸಿದ್ದಾರೆ.
ಕಲಬುರಗಿ ನಗರದ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದನೆ ನೀಡುತ್ತಿದ್ದ ತಂಡವೊಂದನ್ನು ಬಜರಂಗದಳ ಹಾಗೂ ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಪತ್ರ ಹಂಚಿಕೆ ಮಾಡಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರತಿಭಟನೆ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ಕಲಬುರಗಿಯ ಶರಣಸಿರಸಗಿ ಗ್ರಾಮದಲ್ಲಿ ಅಪರಿಚಿತ ಯುವಕರ ತಂಡವೊಂದು ಮನೆ ಮನೆಗೆ ಸುತ್ತುತ್ತಿತ್ತು. ಈ ತಂಡವು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಹ್ಯಾಂಡ್ಬಿಲ್ಗಳು (ಕರಪತ್ರ) ಮತ್ತು ಧಾರ್ಮಿಕ ಪುಸ್ತಕಗಳನ್ನು ಹಿಡಿದು ಗ್ರಾಮಸ್ಥರ ವಿಶ್ವಾಸ ಗಳಿಸಲು ಯತ್ನಿಸುತ್ತಿತ್ತು. 'ನಿಮ್ಮ ಮನೆಯಲ್ಲಿ ಯಾರಾದರೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಸಂಕಷ್ಟದಲ್ಲಿದ್ದರೆ ನಮಗೆ ತಿಳಿಸಿ, ನಾವು ಅವರ ಪರವಾಗಿ ನಾಳೆ ವಿಶೇಷ ಪ್ರಾರ್ಥನೆ (Prayer) ಮಾಡುತ್ತೇವೆ. ಇದರಿಂದ ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗುತ್ತವೆ' ಎಂದು ಗ್ರಾಮಸ್ಥರಿಗೆ ಆಮಿಷ ಒಡ್ಡುತ್ತಿದ್ದರು ಎನ್ನಲಾಗಿದೆ.
ಧರ್ಮ ಪ್ರಚಾರದ ಹೆಸರಿನಲ್ಲಿ ಬಡ ಮತ್ತು ಮುಗ್ಧ ಜನರನ್ನು ಮತಾಂತರ ಮಾಡಲು ಈ ತಂಡವು ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿರುವ ಬಜರಂಗದಳದ ಕಾರ್ಯಕರ್ತರು, ಪ್ರಚಾರ ಮಾಡುತ್ತಿದ್ದವರನ್ನು ಸ್ಥಳದಲ್ಲೇ ತಡೆದು ನಿಲ್ಲಿಸಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮತಾಂತರಕ್ಕೆ ಪ್ರಚೋದನೆ ನೀಡುವ ಹ್ಯಾಂಡ್ಬಿಲ್ಗಳನ್ನು ವಶಪಡಿಸಿಕೊಂಡ ಕಾರ್ಯಕರ್ತರು, ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಮತಾಂತರದ ಜಾಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ಬೆನ್ನಲ್ಲೇ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಆಮಿಷವೊಡ್ಡಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.
'ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮತಾಂತರದ ಹಾವಳಿ ಹೆಚ್ಚಾಗುತ್ತಿದೆ. ಅನಾರೋಗ್ಯದ ನೆಪವೊಡ್ಡಿ ಮುಗ್ಧ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಸರ್ಕಾರ ಕೂಡಲೇ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸದ್ಯ ಪೊಲೀಸರು ಪ್ರಕರಣದ ಮಾಹಿತಿ ಕಲೆಹಾಕುತ್ತಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಶರಣಸಿರಸಗಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರ್ಮಿಕ ಸಂಘರ್ಷದ ಆತಂಕ ಮೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.