
ಕೊಪ್ಪಳ (ಮಾ.10): ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿದ್ದರೂ, ಅವರ ಸುರಕ್ಷತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಲ್ಲಿ ಅಂತಹದ್ದೇ ಒಂದು ಆಘಾತಕಾರಿ ಘಟನೆ ನಡೆದಿದ್ದು, ಸೀಟಿಲ್ಲದೆ ಬಸ್ನಲ್ಲಿ ಕೆಳಗೆ ಕುಳಿತಿದ್ದ ಮಹಿಳಾ ಪ್ರಯಾಣಿಕಳ ಮೇಲೆ ಕಂಡಕ್ಟರ್ ಟಿಕೆಟ್ ಮಷೀನ್ನಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಎಂಬ ಮಹಿಳೆ ತನ್ನ ಮಗುವಿನೊಂದಿಗೆ ಕೊಪ್ಪಳದಿಂದ ಬೆಟಗೇರಿಗೆ ಹೋಗುವ ಬಸ್ ಹತ್ತಿದ್ದರು. ಬಸ್ನಲ್ಲಿ ಭಾರಿ ಜನದಟ್ಟಣೆ ಇದ್ದ ಕಾರಣ ಅವರಿಗೆ ಕುಳಿತುಕೊಳ್ಳಲು ಸೀಟು ಸಿಕ್ಕಿರಲಿಲ್ಲ. ಕೈಯಲ್ಲಿ ಮಗುವಿದ್ದ ಕಾರಣ ನಿಂತುಕೊಳ್ಳಲು ಸಾಧ್ಯವಾಗದೆ ಮಲ್ಲಮ್ಮ ಬಸ್ನ ನೆಲದ ಮೇಲೆಯೇ ಕುಳಿತಿದ್ದರು.
ಬಸ್ ಹೊರಡುವ ಸಮಯದಲ್ಲಿ ನಿರ್ವಾಹಕ (ಕಂಡಕ್ಟರ್) ವಸಂತ್ ಪಾಟೀಲ್, ನೆಲದ ಮೇಲೆ ಕುಳಿತಿದ್ದ ಮಲ್ಲಮ್ಮ ಅವರಿಗೆ ಎದ್ದು ನಿಲ್ಲುವಂತೆ ಸೂಚಿಸಿದ್ದಾನೆ. ಮಲ್ಲಮ್ಮ ಮಗುವನ್ನು ಎತ್ತಿಕೊಂಡು ಏಳಲು ಸ್ವಲ್ಪ ತಡ ಮಾಡಿದ್ದಾರೆ. ಇದೇ ವಿಚಾರಕ್ಕೆ ಕೋಪಗೊಂಡ ನಿರ್ವಾಹಕ ವಸಂತ್ ಪಾಟೀಲ್, ಮಲ್ಲಮ್ಮ ಅವರೊಂದಿಗೆ ಜೋರಾಗಿ ವಾಗ್ವಾದಕ್ಕಿಳಿದಿದ್ದಾನೆ. ಗಲಾಟೆ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಕಂಡಕ್ಟರ್, ತನ್ನ ಕೈಯಲ್ಲಿದ್ದ ಎಲೆಕ್ಟ್ರಾನಿಕ್ ಟಿಕೆಟ್ ವಿತರಣಾ ಮಷೀನ್ನಿಂದಲೇ (ETM) ಮಲ್ಲಮ್ಮ ಅವರ ತಲೆಗೆ ಅಥವಾ ಮೈಮೇಲೆ ಬಲವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಕಂಡಕ್ಟರ್ ನಡೆಸಿದ ಹಲ್ಲೆಯಿಂದಾಗಿ ಮಲ್ಲಮ್ಮ ಅವರಿಗೆ ನೋವಾಗಿದ್ದು, ತಕ್ಷಣ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಮುಂದೆಯೇ ತಾಯಿಯ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ನಲ್ಲಿದ್ದ ಇತರ ಪ್ರಯಾಣಿಕರು ಕಂಡಕ್ಟರ್ ವರ್ತನೆಯನ್ನು ಕಂಡು ಆಕ್ರೋಶ ಹೊರಹಾಕಿದ್ದಾರೆ.
ಮಹಿಳೆಯ ಮೇಲೆ ಹಲ್ಲೆ ಮಾಡಿದ ನಿರ್ವಾಹಕ ವಸಂತ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಮ್ಮ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದು, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಂಡಕ್ಟರ್ನನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
'ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಿರುವಾಗ ತಾಳ್ಮೆ ವಹಿಸಬೇಕು. ಆದರೆ ಈ ಪ್ರಕರಣದಲ್ಲಿ ಕಂಡಕ್ಟರ್ ಕಾನೂನು ಕೈಗೆತ್ತಿಕೊಂಡಿರುವುದು ಖಂಡನೀಯ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.