ಸಿಎಂ ಯಡಿಯೂರಪ್ಪ ಕೊಟ್ಟ ಮಾತು ತಪ್ಪದಿರಲಿ: ಪಂಚ​ಮ​ಸಾಲಿ ಶ್ರೀ

By Kannadaprabha NewsFirst Published Jan 22, 2021, 8:05 AM IST
Highlights

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲಿ: ಸ್ವಾಮೀಜಿ ಪಟ್ಟು| ಬಳ್ಳಾರಿ ಮರಿಯಮ್ಮನಹಳ್ಳಿ ತಲುಪಿದ ಪಾದಯಾತ್ರೆ| ಜ.29ರಂದು ಪಂಚಮಸಾಲಿ ಸಮಾಜದಿಂದ ಬೃಹತ್‌ ಸಭೆ| ವಚನಾನಂದಶ್ರೀಗಳು ಭಾಗವಹಿಸಿದರೆ ಸ್ವಾಗತ| 

ಹೊಸಪೇಟೆ(ಜ.22):  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಾತು ತಪ್ಪಿ ವಚನಭ್ರಷ್ಟರಾದ ಆರೋಪ ಹೊತ್ತುಕೊಂಡರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರಂತಾಗಬಾರದು. ಕೊಟ್ಟ ಮಾತು ಮೀರಬಾರದು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ. 

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಲಿಂಗಾಯತರಲ್ಲೇ ಪ್ರಥಮ ಪಾದಯಾತ್ರೆ ಇದಾಗಿದ್ದು, ಲಿಂಗಾಯತರ ಒಳಿತಿಗಾಗಿ, ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ. ವಿಧಾನಸೌಧದ ಕಡೆಗೆ ಪಾದಯಾತ್ರೆ ಹೊರಟಿದ್ದು, ಸರ್ಕಾರ ಕೂಡಲೇ ತನ್ನ ನಿಲುವು ಪ್ರಕಟಿಸಬೇಕು ಎಂದರು.

'ಯಡಿಯೂರಪ್ಪ ಲಿಂಗಾಯತರ ದೇವರಾಜು ಅರಸು ಆಗಲಿ'

29ರಂದು ಬಹಿರಂಗ ಸಭೆ:

ಬೆಳಗಾವಿ, ಉತ್ತರ ಕರ್ನಾಟಕ ಸೇರಿ ರಾಜ್ಯದ ನಾನಾ ಭಾಗಗಳಿಂದ ಹರಿಹರಕ್ಕೆ ಜನ ಹರಿದುಬರಲಿದ್ದು, ಜ.29ರಂದು ಪಂಚಮಸಾಲಿ ಸಮಾಜದಿಂದ ಬೃಹತ್‌ ಸಭೆ ಹಮ್ಮಿಕೊಳ್ಳಲಾಗಿದೆ. ವಚನಾನಂದಶ್ರೀಗಳು ಭಾಗವಹಿಸಿದರೆ ಸ್ವಾಗತ. ಸಮಾಜದ ಶಾಸಕರು, ಸಚಿವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.

ಪಾದಯಾತ್ರೆ:

2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲ ಸಂಗಮ ಪೀಠದಿಂದ ಜ.14ರಂದು ಆರಂಭಗೊಂಡಿದ್ದ ಪಂಚಲಕ್ಷ ಹೆಜ್ಜೆಗಳ ಬೃಹತ್‌ ಐತಿಹಾಸಿಕ ಪಾದಯಾತ್ರೆ ಗುರುವಾರ ಕೊಪ್ಪಳದ ಹುಲಗಿಯಿಂದ ಆರಂಭವಾಗಿ ನಗರದ ಟಿಬಿಡ್ಯಾಂ ಮೂಲಕ ಗುಂಡಾ ಸಸ್ಯೋದ್ಯಾನ ಮಾರ್ಗವಾಗಿ ಮರಿಯಮ್ಮನಹಳ್ಳಿಗೆ ತಲುಪಿತು.
 

click me!