ಏರ್‌ ಶೋ: ಸುರಕ್ಷತಾ ಮಾರ್ಗಸೂಚಿ ಬಿಡುಗಡೆ

By Kannadaprabha NewsFirst Published Jan 22, 2021, 7:08 AM IST
Highlights

ಫೆ.3ರಿಂದ 5ರ ವರೆಗೆ 3 ದಿನಗಳ ಕಾಲ ‘ಏರೋ ಇಂಡಿಯಾ 2021’ ವೈಮಾನಿಕ ಪ್ರದರ್ಶನ| ವಿಪತ್ತು ನಿರ್ವಹಣೆಗಾಗಿ ಪ್ರತ್ಯೇಕ ಅಧಿಕಾರಿಗಳ ನೇಮಕ: ಸಚಿವ ಆರ್‌.ಅಶೋಕ್‌| 

ಬೆಂಗಳೂರು(ಜ.22):  ರಾಜಧಾನಿ ಬೆಂಗಳೂರಿನಲ್ಲಿ ಫೆ.3 ರಿಂದ 5ರ ವರೆಗೆ 13ನೇ ಆವೃತ್ತಿಯ ‘ಏರೋ ಇಂಡಿಯಾ 2021’ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಕಳೆದ ಆವೃತ್ತಿಯಂತೆ ಯಾವುದೇ ಅವಘಡ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷತಾ ಮಾರ್ಗಸೂಚಿಗಳನ್ನು ಒಳಗೊಂಡ ಸಮಗ್ರ ವಿಪತ್ತು ನಿರ್ವಹಣಾ ಯೋಜನೆ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. 

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಫೆ.3ರಿಂದ 5ರ ವರೆಗೆ 3 ದಿನಗಳ ಕಾಲ 13ನೇ ಆವೃತ್ತಿಯ ‘ಏರೋ ಇಂಡಿಯಾ 2021’ ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದಲ್ಲಿ 14 ರಾಷ್ಟ್ರಗಳ 541 ಪ್ರದರ್ಶಕರು ಭಾಗವಹಿಸಲಿದ್ದು, ಇದರಲ್ಲಿ 463 ಭಾರತೀಯ ಹಾಗೂ 78 ವಿದೇಶಿ ಪ್ರದರ್ಶಕರಾಗಿದ್ದಾರೆ. 61 ವಿಮಾನಗಳ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಕಳೆದ 12ನೇ ಆವೃತ್ತಿಯ ವೈಮಾನಿಕ ಪ್ರದರ್ಶನದ ವೇಳೆ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಮೊದಲ ಬಾರಿಗೆ ಇಂತಹ ಅವಘಡ ಸಂಭವಿಸಿತ್ತು. ಅಂತಹ ಯಾವುದೇ ಅವಘಡಗಳು ಮರುಕಳಿಸದಂತೆ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಗ್ರ ವಿಪತ್ತು ನಿರ್ವಹಣಾ ಯೋಜನೆ ರೂಪಿಸಲಾಗಿದೆ. ವಾಯುನೆಲೆಯಿಂದ ಒಳಾಂಗಣ ವಿಪತ್ತು ನಿರ್ವಹಣೆ ಯೋಜನೆ ಹಾಗೂ ಇಲಾಖೆಯು ಹೊರಾಂಗಣ ವಿಪತ್ತು ನಿರ್ವಹಣೆಗೆ ಯೋಜನೆ ರೂಪಿಸಿದೆ. ಎರಡೂ ಕಡೆ ಒಬ್ಬೊಬ್ಬ ಪ್ರತ್ಯೇಕ ಅಧಿಕಾರಿ ನಿಯೋಜಿಸಲಾಗಿದೆ ಎಂದರು.

ಏರ್ ಶೋ: ಹೈಕೋರ್ಟ್‌ನಿಂದ ಸರ್ಕರಕ್ಕೆ ಮಹತ್ವದ ನಿರ್ದೇಶ

ಯೋಜನೆಯಡಿ ಬೆಂಕಿ ಅವಘಡ, ಕಟ್ಟಡ ಕುಸಿತ, ಕಾಲ್ತುಳಿತ, ವಿಮಾನ ಅಪಘಾತ, ಅಣು ವಿಕಿರಣ ಅಪಾಯಗಳು, ಭಯೋತ್ಪಾದನಾ ಕೃತ್ಯ, ಡ್ರೋನ್‌ ದಾಳಿ, ಸೈಬರ್‌ ದಾಳಿ, ಹವಾಮಾನ ವೈಪರೀತ್ಯ, ಕುಡಿಯುವ ನೀರು ಹಾಗೂ ಆಹಾರ ವಿಷ ಅಪಾಯ ಹೀಗೆ ಸಂಭವಿಸಬಹುದಾದ ಹತ್ತಕ್ಕೂ ಹೆಚ್ಚು ಬಗೆಯ ವಿಪತ್ತುಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ವಿಶೇಷ ಭೌಗೋಳಿಕ ಮಾಹಿತಿ ವ್ಯವಸ್ಥೆ (ಭೂ ವೈಜ್ಞಾನಿಕ ಮಾಹಿತಿ ವ್ಯವಸ್ಥೆ -ಜಿಐಎಸ್‌) ಅಂತರ್ಜಾಲ ತಾಣವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ http://dev.ksrsac.in/aershow/ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ವಿಪತ್ತು ನಿರ್ವಹಣೆ ಎಲ್ಲಾ ಅಂಶಗಳಿರುತ್ತವೆ. ವಿಪತ್ತು ಹಾಗೂ ತುರ್ತು ಪರಿಸ್ಥಿತಿ ಘಟನೆಗಳನ್ನು ವರದಿ ಮಾಡಲು ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ ಎಂದು ವಿವರಿಸಿದ್ದಾರೆ. 

ಇದೇ ವೇಳೆ ವಿಪತ್ತು ನಿರ್ವಹಣಾ ಯೋಜನೆ ಕೈಪಿಡಿ ಮತ್ತು ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಯಿತು. ಸಂಸದ ಪಿ.ಸಿ.ಮೋಹನ್‌, ಇಲಾಖೆಯ ಕಾರ್ಯದರ್ಶಿ ಅಂಜುಮ್‌ ಫರ್ವೇಜ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
 

click me!