ಹುನಗುಂದ: ಜಲಜೀವನ್‌ ಯೋಜನೆ ಅಕ್ರಮ ತನಿಖೆಗೆ, ವಿಜಯಾನಂದ ಕಾಶಪ್ಪನವರ್‌

By Kannadaprabha NewsFirst Published Jun 11, 2023, 8:30 PM IST
Highlights

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರವನ್ನು ಕ್ರೋಢಿಕರಿಸಿ ಒದಗಿಸಬೇಕು. ಈಗಾಗಲೇ 4 ಆರ್‌ಎಸ್‌ಕೆ ಕೇಂದ್ರಗಳಿದ್ದು, ಅವನ್ನು ಹೊರತುಪಡಿಸಿ ರೈತರ ಅನುಕೂಲಕ್ಕಾಗಿ ಪ್ರತಿಯೊಂದು ಜಿಪಂಗೆ ಒಂದರಂತೆ ಬೀಜ-ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದು ಸೂಚಿಸಿದ ಶಾಸಕ ವಿಜಯಾನಂದ ಕಾಶಪ್ಪನವರ

ಹುನಗುಂದ(ಜೂ.11): ತಾಲೂಕಿನ 155 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕೊರತೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ವಿಕಾಸ ಯೋಜನೆ ಬಗ್ಗೆ ಸಭೆಗೆ ತಪ್ಪು ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಅಧಿಕಾರಿ ಆರ್‌.ಎಂ.ಪುರೋತ ಮತ್ತು ಜಿಪಂ ಎಇಇ ಎಂ.ಎಂ.ಪಾಟೀಲ ಅವರನ್ನು ಶಾಸಕ ವಿಜಯಾನಂದ ಕಾಶಪ್ಪನವರ ತರಾಟೆಗೆ ತಗೆದುಕೊಂಡರಲ್ಲದೆ, ಸಭೆಗೆ ಸುಳ್ಳು ಮಾಹಿತಿ ನೀಡದಂತೆ ಖಡಕ್‌ ವಾರ್ನಿಂಗ್‌ ನೀಡಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿ ಸಭೆಯಲ್ಲಿ ನಡೆದ ತಾಲೂಕು ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲ ಜೀವನ್‌ ಮಿಷನ್‌ ಯೋಜನೆ 60 ಹಳ್ಳಿಗಳಲ್ಲಿ ವಿಫಲವಾಗಿದ್ದು, ಬೋಗಸ್‌ ನಡೆದಿದೆ, ಇದರ ಸಂಪೂರ್ಣ ತನಿಖೆಯಾಗಬೇಕು ಹೇಳಿದರು.

Latest Videos

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ತಿಮ್ಮಾಪೂರಗೆ ಹಲವು ಸವಾಲು..!

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರವನ್ನು ಕ್ರೋಢಿಕರಿಸಿ ಒದಗಿಸಬೇಕು. ಈಗಾಗಲೇ 4 ಆರ್‌ಎಸ್‌ಕೆ ಕೇಂದ್ರಗಳಿದ್ದು, ಅವನ್ನು ಹೊರತುಪಡಿಸಿ ರೈತರ ಅನುಕೂಲಕ್ಕಾಗಿ ಪ್ರತಿಯೊಂದು ಜಿಪಂಗೆ ಒಂದರಂತೆ ಬೀಜ-ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದು ಶಾಸಕರು ಸೂಚಿಸಿದರು.

ಲೋಕೋಪಯೋಯೋಗಿ ಇಲಾಖೆ ಮತ್ತು ಜಿಪಂ ಇಂಜಿನಿಯರಿಂಗ್‌ ಇಲಾಖೆಯಿಂದ ಮಾಡಲಾಗಿರುವ ಅನೇಕ ಗ್ರಾಮೀಣ ಭಾಗದ ರಸ್ತೆಗಳು ಕಳಪೆ ಮಟ್ಟದ್ದಾಗಿದ್ದು, ಕೆಲವು ಸಿಸಿ ರಸ್ತೆಗಳು ಕಿತ್ತು ಹೋಗಿವೆ. ತಾಲೂಕಿನ ಯಾವುದೇ ರಸ್ತೆ ಗುಣಮಟ್ಟದಿಂದ ಕೂಡಿಲ್ಲ. ಆದ್ದರಿಂದ ಕಾಮಗಾರಿಗಳ ತನಿಖೆಗೆ ಸೂಚಿಸುತ್ತೇನೆ. ನನ್ನ ಅವಧಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಅತಿ ಅವಶ್ಯಕವಿರುವ ಗ್ರಾಮೀಣ ಪ್ರದೇಶಗಳ ರಸ್ತೆ ಮತ್ತು ಬ್ರಿಡ್ಜ್‌ಗಳ ಪಟ್ಟಿಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿರಿ ಎಂದು ಲೋಕೋಪಯೋಗಿ ಅಧಿಕಾರಿ ರಮೇಶ ಪಾಟೀಲ ಹೇಳಿದರು.

ಹುನಗುಂದ-ಇಳಕಲ್ಲ ತಾಲೂಕಿನಲ್ಲಿ ಈ ವರ್ಷ ಮದ್ಯ ಮಾರಾಟದಿಂದ 111 ಕೋಟಿ ಲೈಸನ್ಸ ಮತ್ತು ದಂಡದಿಂದ 1 ಕೋಟಿ 79 ಲಕ್ಷ ಕೋಟಿ ಆದಾಯ ಬಂದಿದೆ ಎಂದು ಅಬಕಾರಿ ಅಧಿಕಾರಿ ಮಂಜುನಾಥ ಸಿಂಗರಡ್ಡಿ ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಖಾಸಗಿಯವರು ಆಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಗಲಾಟೆಗಳಾಗುತ್ತಿವೆ. ಕೂಡಲೇ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳ ತಂಡವು ನೀರಿನ ಘಟಕಗಳ ಸ್ಥಿತಿಗತಿ ಕುರಿತು ತಹಸೀಲ್ದಾರ್‌ ಪರೀಶಿಲನೆ ನಡೆಸಿ ಮಾಹಿತಿ ಸಲ್ಲಿಸಬೇಕು. ಗ್ರಾಪಂನಲ್ಲಿ ಕುಡಿಯುವ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಪಿಡಿಒಗಳೇ ಜವಾಬ್ದಾರರು. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

ಹುನಗುಂದ-ಇಲಕಲ್ಲ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಳೆಯರಿಗೆ ಸಮುದಾಯ ಶೌಚಗೃಹದ ತೀವ್ರ ಸಮಸ್ಯೆಯಿದ್ದು, ಶೌಚಗೃಹಗಳನ್ನು ನಿರ್ಮಾಣ ಮಾಡಬೇಕೆಂದು ಪಿಡಿಒಗಳಿಗೆ ಸೂಚನೆ ಮಾಡಿದರು. ಗ್ರಾಮೀಣ ಭಾಗದ ವಿವಿಧ ವಿದ್ಯುತ್‌ ಕಂಬಗಳಲ್ಲಿನ ತಂತಿ ಕೆಳಗಡೆ ಬಿದ್ದಿವೆ ಮತ್ತು ವಿದ್ಯುತ್‌ ಕಂಬಗಳನ್ನು ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಸಿಬ್ಬಂದಿ ಸರಿಯಾಗಿ ನಿರ್ವಹಿಸಬೇಕೆಂದು ತಿಳಿಸಿದರು.

ಅತಿವೃಷ್ಟಿ ಪ್ರದೇಶಗಳಲ್ಲಿ ಮುಂಜಾಗೃತಿ ಕ್ರಮಕ್ಕೆ ಸೂಚನೆ

ಮುಂಗಾರಿನಲ್ಲಿ ಕೃಷ್ಣಾ ಮತ್ತು ಮಲಪ್ರಭೆ ದಡದಲ್ಲಿರುವ 35ಕ್ಕೂ ಅಧಿಕ ಗ್ರಾಮಗಳು ಪ್ರತಿ ವರ್ಷ ಅತಿವೃಷ್ಟಿಗೆ ಒಳಗಾಗುತ್ತಿವೆ. ಈ ಬಗ್ಗೆ ಈಗಿಂದಲೇ ಮುಂಜಾಗೃತಾ ಕ್ರಮ ಕೈಗೊಳ್ಳಿ. ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ರಕ್ಷಣೆಗೆ ನಿಗಾ ವಹಿಸಬೇಕೆಂದು ತಹಸೀಲ್ದಾರ್‌ಗೆ ಸೂಚಿಸಿದರು.

ಬಾಗಲಕೋಟೆ: ಬೈಕ್‌, ಕತ್ತೆಗಳ ಮೂಲಕ ಮರಳು ಸಾಗಣೆ..!

ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್‌ ಬಸಲಿಂಗಪ್ಪ ನೈಕೋಡಿ, ಬಸವರಾಜ ಮೇಳವಂಕಿ, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಹುನಗುಂದ ಹಾಗೂ ಇಲಕಲ್‌ ತಾಲೂಕಿನ ಜಿಪಂ ಯೋಜನಾಧಿಕಾರಿಗಳಾದ ಸಿ.ಎಂ.ಮುಂಡರಗಿ, ನಿರ್ಮಲಾ ಕೆ.ಎನ್‌.ಇಲಕಲ್‌, ತಾಪಂ ಇಒ ಸಂಜೀವ ಜಿನ್ನೂರ, ಪಿಎಸ್‌ಐ ಎಸ್‌.ಬಿ.ಪಾಟೀಲ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಕಳೆದ ಐದು ವರ್ಷಗಳಲ್ಲಿ ಮಾಡಿದ ತಪ್ಪುಗಳು ಇನ್ನು ಮುಂದೆ ಆಗಬಾರದು. ಬರುವ ತ್ರೈಮಾಸಿಕ ಸಭೆಯ ಒಳಗಾಗಿ ತಾಲೂಕಿನ ಪ್ರತಿಯೊಂದು ಇಲಾಖೆಯಲ್ಲಿ ಸುಧಾರಣೆ ಕಾಣಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕರ್ತವ್ಯ ಅರಿತು ಕಾರ್ಯ ನಿರ್ವಸಿಬೇಕು, ಇಲ್ಲವಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಅಂತ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.  

click me!