ನೋಣದಿಂದ ಮುಕ್ತಿಗೊಳಿಸಿದ್ರೆ ಜನಪ್ರತಿನಿಧಿಗೆ 1 ಲಕ್ಷ ರೂ. ಬಹುಮಾನ; ಹೆಬ್ಬಾಳ್ ಯುವಕ ಘೋಷಣೆ!

By Kannadaprabha NewsFirst Published Jul 30, 2023, 4:43 AM IST
Highlights

ಕುಳಿತರು, ನಿಂತರು, ನಡೆದರೂ, ಮಲಗಿದರೂ ದಿನವಿಡೀ ತಾಲೂಕಿನ ಹೆಬ್ಬಾಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಕಾಡುತ್ತಿರುವ ನೊಣಗಳ ಹಾವಳಿಯಿಂದ ಮುಕ್ತಿ ಕೊಡಿಸುವ ಅಧಿಕಾರಿ, ಜನಪ್ರತಿನಿಧಿಗೆ ಹೆಬ್ಬಾಳು ರತ್ನ ಬಿರುದು ನೀಡಿ, 1 ಲಕ್ಷ ರು. ನಗದು ಬಹುಮಾನ ನೀಡಿ, ಮೆರವಣಿಗೆ ನಡೆಸಿ 10 ಸಾವಿರ ರು. ಮೌಲ್ಯದ ಪಟಾಕಿ, ಸಿಡಿಸಿ ಗೌರವಿಸುವುದಾಗಿ ಗ್ರಾಮದ ಯುವ ಮುಖಂಡ ಘೋಷಿಸಿದ್ದಾರೆ.

ನಾಗರಾಜ ಎಸ್‌.ಬಡದಾಳ್‌

 ದಾವಣಗೆರೆ (ಜು.30) :  ಕುಳಿತರು, ನಿಂತರು, ನಡೆದರೂ, ಮಲಗಿದರೂ ದಿನವಿಡೀ ತಾಲೂಕಿನ ಹೆಬ್ಬಾಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಕಾಡುತ್ತಿರುವ ನೊಣಗಳ ಹಾವಳಿಯಿಂದ ಮುಕ್ತಿ ಕೊಡಿಸುವ ಅಧಿಕಾರಿ, ಜನಪ್ರತಿನಿಧಿಗೆ ಹೆಬ್ಬಾಳು ರತ್ನ ಬಿರುದು ನೀಡಿ, 1 ಲಕ್ಷ ರು. ನಗದು ಬಹುಮಾನ ನೀಡಿ, ಮೆರವಣಿಗೆ ನಡೆಸಿ 10 ಸಾವಿರ ರು. ಮೌಲ್ಯದ ಪಟಾಕಿ, ಸಿಡಿಸಿ ಗೌರವಿಸುವುದಾಗಿ ಗ್ರಾಮದ ಯುವ ಮುಖಂಡ ಘೋಷಿಸಿದ್ದಾರೆ.

ಕಳೆದ ಕೆಲವು ವರ್ಷದಿಂದ ತಾಲೂಕಿನ ಹೆಬ್ಬಾಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೋಳಿ ಫಾರಂ ಹಾಗೂ ಕೋಳಿ ತ್ಯಾಜ್ಯಗಳ ಬಳಿಯಿಂದ ಅಪಾರ ಸಂಖ್ಯೆಯಲ್ಲಿ ವೃದ್ಧಿ ಯಾಗುತ್ತಿರುವ ನೊಣಗಳ ಹಾವಳಿಯಿಂದ ತಮ್ಮ ಊರುಗಳು, ತಮ್ಮನ್ನು ರಕ್ಷಿಸುವ ಎಂದು ಗ್ರಾಮದ ಯುವ ಮುಖಂಡ ಹೆಬ್ಬಾಳ್‌ ಎಚ್‌.ಆರ್‌.ವಿಜಯಕುಮಾರ ಘೋಷಣೆ ಮಾಡಿದ್ದಾರೆ. ನೊಣಗಳ ಹಿಂಡು ಮಾಡುತ್ತಿರುವ ಉಪಟಳದಿಂದ ಕೋಳಿ ಫಾರಂಗಳ ಸಮೀಪದ ಹೆಬ್ಬಾಳ್‌ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ನೆಮ್ಮದಿಗೆ ಭಂಗ ಬಂದೊದಗಿದ್ದು, ಒಂದು ದಿನವೂ ನಿಶ್ಚಿಂತೆಯಿಂದ ಇರಲಾಗದೇ, ಶುದ್ಧಗಾಳಿಯನ್ನು ಉಸಿರಾಡಲೂ ಬಾಯಿ ಬಿಡದಂತಹ ಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

 

ಕಂಡವರಿಗೆಲ್ಲ ಕಪಾಳ ಮೋಕ್ಷ ಮಾಡ್ತಿದ್ದ ಅಪರಿಚಿತ: ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ ಜನರು

ನೂತನ ಡಿಸಿಗೆ ಕೇಳಿತೇ ಗ್ರಾಮಸ್ಥರ ಕೂಗು:

ಎಲ್ಲಿ ನೋಡಿದರಲ್ಲಿ ನೊಣಗಳೇ ಕಂಡು ಬರುತ್ತಿವೆ. ತಿಂಡಿ, ಊಟ ಸೇವಿಸಲೂ ಆಗದಂತೆ ನೊಣಗಳು ತಿನ್ನುವ ಆಹಾರ, ಪದಾರ್ಥ ಮೇಲೆ ಬಂದು ಕೂರುತ್ತಿವೆ. ಮನುಷ್ಯರಿಗೆ ಇಷ್ಟೊಂದು ಹಿಂಸೆ ಆಗುತ್ತಿರುವಾಗ ಮೂಕ ಪ್ರಾಣಿಗಳಾದ ಹಸು, ಎಮ್ಮೆ, ಕರುಗಳು, ನಾಯಿಗಳ ಪಾಡು ಯಾರಿಗೂ ಹೇಳ ತೀರದಂತಿದೆ ಎಂದು ಗ್ರಾಮದ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನೊಣಗಳಿಂದ ಮುಕ್ತಿ ಕೊಡಿಸುವಂತೆ 2015ರಿಂದ ಹೋರಾಟ ನಡೆಸಿದ್ದರೂ ಯಾವುದೇ ಪರಿಹಾರ ಮಾತ್ರ ಸಿಕ್ಕಿಲ್ಲ. ಕೋಳಿ ಫಾರಂ ಮಾಲೀಕರು ಎಲ್ಲಾ ನಗರ, ಮಹಾ ನಗರದಲ್ಲಿ ಐಷಾರಾಮಿ ಮನೆಯಲ್ಲಿ ದಿನ ಕಳೆಯುತ್ತಾರೆ. ಆದರೆ, ಕೋಳಿ ಫಾರಂ ಇರುವಂತಹ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ಜನರ ಬದುಕನ್ನೇ ಇಂತಹ ಕೋಳಿ ಫಾರಂಗಳಿಂದಾಗಿ ನರಕವಾಗಿದೆ. ನೂತನ ಜಿಲ್ಲಾಧಿಕಾರಿ ಜನರ ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆಯೆಂಬ ಮಾತುಗಳನ್ನಾಡಿದ್ದಾರೆ. ದಯವಿಟ್ಟು ಹೆಬ್ಬಾಳು ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ, ನಾವು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

ದಾವಣಗೆರೆ ಜಿಲ್ಲೆಯಲ್ಲಿ 7.8 ಮಿ.ಮೀ. ಮಳೆ: 20.70 ಲಕ್ಷ ರೂ. ನಷ್ಟ

ಗ್ರಾಪಂನಿಂದ ಜಿಲ್ಲಾಡಳಿತವರೆಗೆ ಹೆಬ್ಬಾಳ್‌ ಸುತ್ತಲಿನ ಗ್ರಾಮಗಳ ಜನರು ನೊಣಗಳ ಹಾವಳಿ ಎದುರಿಸುತ್ತಿರುವ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪತ್ರಿಕೆಯಲ್ಲಿ ನೊಣಗಳ ಉಪಟಳದ ಸುದ್ದಿ ಬಂದಾಗ ಗ್ರಾಪಂನಿಂದ ನೊಣಗಳ ನಿರ್ಮೂಲನೆ ಮಾಡುವ ಮಾತು ಕೇಳಿ ಬಂದರೂ, ಮತ್ತೆ ಅದು ನನೆಗುದಿಗೆ ಬೀಳುತ್ತದೆ. ನೂತನ ಜಿಲ್ಲಾಧಿಕಾರಿಯವರು ಹೆಬ್ಬಾಳ್‌ ಸುತ್ತಮುತ್ತಲ ಗ್ರಾಮಕ್ಕೆ ಭೇಟಿ ನೀಡಿ, ನಾವು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಬೇಕು.

ಎಚ್‌.ಆರ್‌.ವಿಜಯಕುಮಾರ, ಹೆಬ್ಬಾಳ್‌ ಗ್ರಾಮದ ಯುವ ಮುಖಂಡ.

click me!