ಧಾರವಾಡ: ಯೋಗೇಶ್ವರ ಏತನೀರಾವರಿ ಯೋಜನೆ ಜಾರಿ, ಸಚಿವ ಆಚಾರ್‌

By Kannadaprabha NewsFirst Published Aug 16, 2022, 6:28 AM IST
Highlights

ಹುಬ್ಬಳ್ಳಿ-ನವಲಗುಂದ 10 ಸಾವಿರ ಹೆಕ್ಟೇರ್‌ ನೀರಾವರಿ ಯೋಜನೆ: ಸಚಿವ ಹಾಲಪ್ಪ ಆಚಾರ್‌

ಧಾರವಾಡ(ಆ.16):  ತುಪ್ಪರಿಹಳ್ಳದಿಂದ ಬೆಣ್ಣಿಹಳ್ಳಕ್ಕೆ ಸೇರುವ 1.5 ಟಿಎಂಸಿ ಪ್ರಮಾಣದ ನೀರು ಬಳಸಿಕೊಂಡು, ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕುಗಳ 10 ಸಾವಿರ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ‘ಯೋಗೇಶ್ವರ ಏತನೀರಾವರಿ ಯೋಜನೆ’ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು. ಇಲ್ಲಿನ ಆರ್‌.ಎನ್‌. ಶೆಟ್ಟಿಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ತುಪ್ಪರಿಹಳ್ಳವು ಪ್ರತಿವರ್ಷ ಪ್ರವಾಹ ಸೃಷ್ಟಿಸಿ ಬೆಣ್ಣಿಹಳ್ಳ ಸೇರುತ್ತದೆ. ಈ ನೀರಿನ್ನು ಸದ್ಬಳಕೆ ಮಾಡಿಕೊಂಡು ಏತ ನೀರಾವರಿ ಯೋಜನೆ ರೂಪಿಸಲಾಗಿದೆ ಎಂದ ಸಚಿವರು, ನವಲಗುಂದದಲ್ಲಿ ಬೃಹತ್‌ ಜವಳಿ ಪಾರ್ಕ್ನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿದೆ. ಇಲ್ಲಿ 3 ಸಾವಿರ ಉದ್ಯೋಗ ದೊರೆಯಲಿದೆ.

INDIA@75: 9ಕಿಮೀ ಉದ್ದದ ತಿರಂಗಾ ಧ್ವಜ ಯಾತ್ರೆ, ಸಂತೋಷ್‌ ಲಾಡ್‌ ಚಾಲನೆ

ಜಲಜೀವನ ಮಿಷನ್‌ ಯೋಜನೆಯಡಿ . 363 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಪ್ರತಿ ಮನೆಗೂ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಈಗಾಗಲೇ 1 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು. ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ 100ಕ್ಕೂ ಅ​ಧಿಕ ಕೆರೆ ಹಾಗೂ ಜಲಮೂಲಗಳನ್ನು ನೀರಾವರಿ ಇಲಾಖೆಯ . 50 ಕೋಟಿಗಳ ವಿಶೇಷ ಅನುದಾನ, ವಿವಿಧ ಕೈಗಾರಿಕೆಗಳ ಸಿಎಸ್‌ಆರ್‌ ಹಾಗೂ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಮೃತ ಗ್ರಾಪಂ ಯೋಜನೆಯಡಿ 35 ಗ್ರಾಪಂ ಆಯ್ದುಕೊಂಡು ಸಮಗ್ರ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಆಕರ್ಷಕ ಪಂಥ ಸಂಚಲನ

ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ದಳಗಳು ಆಕರ್ಷಕ ಪಥಸಂಚಲನ ಮೂಲಕ ತುಂತುರು ಮಳೆ ಮಧ್ಯದಲ್ಲಿ ಗೌರವ ಸಲ್ಲಿಸಿದರು. ಪರೇಡ್‌ ಕಮಾಂಡರ್‌ ಬಿ.ಆರ್‌. ಚನ್ನಮ್ಮನವರ ಮತ್ತು ರಾಜು ಎಸ್‌. ಗುಡನಟ್ಟಿನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಗೃಹ ರಕ್ಷಕ ದಳ, ಅಬಕಾರಿ ಇಲಾಖೆ, ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ, ಅರಣ್ಯ ಇಲಾಖೆ, ಭಾರತ ಸೇವಾ ದಳಗಳ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಶಿವಾನಂದ ಎಚ್‌. ತಿಮ್ಮಾಪುರ (ಸಾಮಾಜಿಕ ಸೇವೆ), ಅದಿತಿ ಕ್ಷೇತ್ರತೇಜ (ಕ್ರೀಡೆ), ಡಾ. ಬಸು ಬೇವಿನಗಿಡದ ಮತ್ತು ಡಾ. ಎಸ್‌.ಬಿ. ಬಸಟ್ಟೆ(ಸಾಹಿತ್ಯ), ಜಿ.ಕೆ. ಹಿರೇಮಠ (ಶಿಕ್ಷಣ) ಅವರನ್ನು ಅಮೃತ ಮಹೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ

ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸುಧಾರಣಾ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಾಥಮಿಕ ಶಾಲೆ: ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಮಿತಾ ಪ್ರಕಾಶ ಅಂಗಡಿ (ಪ್ರಥಮ), ಪ್ರಬಂಧ ಸ್ಪರ್ಧೆಯಲ್ಲಿ ಕಾವ್ಯ ಅಣ್ಣಿಗೇರಿ (ಪ್ರಥಮ), ಗೀತ ಗಾಯನ ಸ್ಪರ್ಧೆಯಲ್ಲಿ ಅನುಷ್ಕಾ ರಾಘವೇಂದ್ರ (ಪ್ರಥಮ) ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಭಾಷಣ ಸ್ಪರ್ಧೆಯಲ್ಲಿ ಚೈತನ್ಯ ಪಾಟೀಲ (ಪ್ರಥಮ), ಪ್ರಬಂಧ ಸ್ಪರ್ಧೆಯಲ್ಲಿ ಸುಧಾ ದಾನಮ್ಮನವರ (ಪ್ರಥಮ), ಗೀತ ಗಾಯನ ಸ್ಪರ್ಧೆಯಲ್ಲಿ ಸುಪ್ರಜಾ ಕಾಮತ್‌ (ಪ್ರಥಮ) ಅವರಿಗೆ ಸನ್ಮಾನಿಸಲಾಯಿತು. ಅದೇ ರೀತಿ ಪಿಯು ಇಲಾಖೆಯಿಂದ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಸಾನಿಕಾ ರವಿಶಂಕರ ಗುಂಡುರಾವ್‌, ಕವಿತಾ ಮಂಜುನಾಥ ಇನಾಮತಿ, ಶ್ರೀಕಾಂತ ಶಂಕರ ಸುಲದಾಳ ಮತ್ತು ವಿನಾಯಕ ಬಿ.ಎಂ. ಅವರನ್ನು ಸನ್ಮಾನಿಸಲಾಯಿತು.

Independece Day: ಸ್ವಾತಂತ್ರ್ಯ ಹೋರಾಟದಲ್ಲಿ ಮೊರಬ ಪಾತ್ರ

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿ​ಕಾರಿ ಗುರುದತ್ತ ಹೆಗಡೆ, ಪೊಲೀಸ್‌ ಆಯುಕ್ತ ಲಾಬೂರಾಮ್‌, ಜಿಪಂ ಸಿಇಒ ಡಾ. ಸುರೇಶ ಇಟ್ನಾಳ, ಎಸ್ಪಿ ಲೋಕೇಶ ಜಗಲಾಸರ್‌, ಅಪರ ಜಿಲ್ಲಾ​ಧಿಕಾರಿ ಶಿವಾನಂದ ಭಜಂತ್ರಿ, ಉಪ ಪೊಲೀಸ್‌ ಆಯುಕ್ತ ಸಾಹಿಲ್‌ ಬಾಗ್ಲಾ, ಉಪವಿಭಾಗಾಧಿ​ಕಾರಿ ಅಶೋಕ ತೇಲಿ, ಡಿಡಿಪಿಐ ಎಸ್‌.ಎಸ್‌. ಕೆಳದಿಮಠ, ತಹಸೀಲ್ದಾರ್‌ ಸಂತೋಷ ಹಿರೇಮಠ ಇದ್ದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣಗೊಂಡು 76ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಮುಂಬರುವ 25 ವರ್ಷಗಳ ಅವ​ಧಿಯನ್ನು ಅಭಿವೃದ್ಧಿಯ ಅಮೃತ ಕಾಲ ಎಂದು ಕರೆದಿದ್ದಾರೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವ ಕರ್ನಾಟಕದ ಮೂಲಕ ನವಭಾರತ ನಿರ್ಮಾಣದ ಧ್ಯೇಯದೊಂದಿಗೆ ಮುನ್ನಡೆಯುತ್ತಿದ್ದಾರೆ ಅಂತ  ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ. 
 

click me!