
ಪ್ರಹ್ಲಾದ ರೆಡ್ಡಿ ಕನಕಗಿರಿ
ಕೊಪ್ಪಳ: ಕನಕಗಿರಿ ತಾಲೂಕಿನಲ್ಲಿ ಇಂಥದೊಂದು ಫಲಕ ಹಾಕುವುದಷ್ಟೇ ಬಾಕಿ. ಅಷ್ಟೊಂದು ಹದಗೆಟ್ಟಿದೆ ಇಲ್ಲಿನ ಆಡಳಿತ. ಅಕ್ರಮ ಮರುಳು ದಂಧೆ ಹಾಗೂ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಗಲಲ್ಲಿ ರಾಜಾರೋಷವಾಗಿ ಇಸ್ಪೀಟ್ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.
ತಾಲೂಕಿನ ಈಚನಾಳ, ನವಲಿ, ಉದ್ಯಾಳ, ಯತ್ನಟ್ಟಿ, ಗುಡದೂರು, ಬುನ್ನಟ್ಟಿ, ಸಂಕನಾಳ, ಕ್ಯಾರಿಹಾಳ ಗ್ರಾಮಗಳ ಹಳ್ಳಗಳಲ್ಲಿ ಅಕ್ರಮ ಮರುಳು ದಂಧೆ ಎಗ್ಗಿಲ್ಲದೆ ಸಾಗಿದೆ. ಈ ದಂಧೆಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಕ್ರಮ ವಹಿಸಿದೆಯಾದರೂ ಅಧಿಕಾರಿಗಳ ಕಣ್ತಪ್ಪಿಯೂ ಅಕ್ರಮ ದಂಧೆ ನಡೆಯುತ್ತಿರುವುದು ನಿಂತಿಲ್ಲ.
ಹನುಮನಾಳ ಗ್ರಾಮದ ಅಗಸಿಯಲ್ಲಿ ಹಗಲು, ರಾತ್ರಿ ಎನ್ನದೆ ಇಸ್ಪೀಟ್ ಆಟ ರಾಜಾರೋಷವಾಗಿ ನಡೆಯುತ್ತಿದೆ. ಅಂದರ್-ಬಾಹರ್ ಆಟದ ಪೋಟೋ, ವಿಡಿಯೋಗಳು ವೈರಲ್ ಆಗಿವೆ. ಆದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮಾಮೂಲು ಪಡೆಯುವ ಪೊಲೀಸರೇ ಈ ದಂಧೆಯ ಹಿಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಕಳ್ಳತನ ಪ್ರಕರಣಗಳಂತೂ ದಿನ ನಿತ್ಯವೂ ನಡೆಯುತ್ತಿವೆ. ಅಂದರ್ ಬಾಹರ್ ಕೂಡಾ ಹಳ್ಳಿಗಳಲ್ಲಿ ಯಥೇಚ್ಛವಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳು ಮುಂದಾಗುತ್ತಿಲ್ಲ. ಬದಲಾಗಿ ಅಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗಿದ್ದರಿಂದ ದಂಧೆಗಳು ನಿತ್ಯ ನಡೆಯಲು ಕಾರಣವಾಗಿವೆ ಎನ್ನುವ ಸ್ಥಳೀಯರ ಆರೋಪ. ಕನಕಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ಇಸ್ಪೀಟ್ ಜೂಜು ಮಿತಿಮೀರಿದೆ.
ಲಕ್ಷಗಟ್ಟಲೇ ಚಿನ್ನಾಭರಣ ಹಾಗೂ ನಗದನ್ನು ಈಗಾಗಲೇ ದೋಚಿರುವ ಕಳ್ಳರ ಗುಂಪು ಪೊಲೀಸರಿಗೆ ಸವಾಲೆಸೆದು ದಿನಕ್ಕೊಂದು ಗ್ರಾಮ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ತಾಲೂಕಿನೆಲ್ಲೆಡೆ ಕಳ್ಳರ ಗುಂಪೊಂದು ರಾತ್ರಿ ಸಮಯದಲ್ಲಿ ಕೈಚಳಕ ತೋರಿಸುತ್ತಿದ್ದು, ನಗರ ಮತ್ತು ಹಳ್ಳಿ ಜನರು ತೀವ್ರ ಆತಂಕದಲ್ಲಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಇಬ್ಬರು ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಈಗಾಗಲೇ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಕೈ ತೊಳೆದುಕೊಂಡಿದ್ದಾರೆ.
ಕಳ್ಳರ ಕೈಚಳಕದಿಂದ ಪೊಲೀಸ್ ಇಲಾಖೆಗೆ ಠಾಣಾ ವ್ಯಾಪ್ತಿಯಲ್ಲಾಗುವ ಅಕ್ರಮ, ಕಳ್ಳತನ ಪ್ರಕರಣಗಳು ತಲೆನೋವಾಗಿ ಪರಿಣಮಿಸಿದ್ದು, ಮೇಲಾಧಿಕಾರಿಗಳು ಪ್ರತ್ಯೇಕ ತಂಡ ರಚಿಸಿದ್ದು, ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆನ್ನಲಾಗಿದೆ.
ಇದನ್ನೂ ಓದಿ: ಪ್ರತಿ ಎಕರೆಗೆ 160 ರಿಂದ 170 ಟನ್ವರೆಗೆ ಕಬ್ಬು ಬೆಳೆಯುವ ವಿಧಾನ ಹೇಳಿದ ಸಾಂಗ್ಲಿ ಮೂಲದ ಕೃಷಿ ಸಾಧಕ ಡಾ.ಸಂಜೀವ ಮಾನೆ
ತಾಲೂಕಿನ ನವಲಿ ವಿಎಸ್ಎಸ್ಎನ್ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಬೂಬುಸಾಬ್ ಪಿಂಜಾರ ಎಂಬಾತನ ಮನೆಯಲ್ಲಿದ್ದ 50 ಗ್ರಾಂ ಚಿನ್ನಾಭರಣ ಹಾಗೂ ₹1.50 ಲಕ್ಷ ನಗದನ್ನು ಫೆ.3ರ ಮಂಗಳವಾರ ತಡರಾತ್ರಿ ಕಳ್ಳರು ದೋಚಿ ಪರಾರಿಯಾಗಿದ್ದಾರೆ. ನೆಕ್ಲೆಸ್, ಉಂಗುರ, ಮಂಗಳಸೂತ್ರ, ತಾಳಿ, ಎರಡು ಜೊತೆ ಕಿವಿಯೋಲೆ ಆಭರಣಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ: ರೈತರು ಖುಷ್
ಕನಕಗಿರಿ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್, ಕಳ್ಳತನ ಹಾಗೂ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲಾಗುವುದು. ಅಕ್ರಮದಲ್ಲಿ ಯಾರೇ ಇರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಡಿವೈಎಸ್ಪಿ ಜಿ.ಎಸ್.ನ್ಯಾಮಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಹಳದಿ ಚಿನ್ನ ಬೆಳೆಯುತ್ತಿರುವ ತುಂಗಭದ್ರೆ ಒಡಲಿನ ರೈತರು; ಕಡಿಮೆ ನೀರು, ಅಧಿಕ ಲಾಭ