ಬೀದರ್: ಶೀಲ ಶಂಕಿಸಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ, ರಾತ್ರಿ ಇಡೀ ಜಗಳವಾಡಿ ಬೆಳಗ್ಗೆ ಕಲ್ಲು ಎತ್ತಿ ಹಾಕಿ ಕೊಂದ!

Published : Mar 01, 2026, 05:41 PM IST
husband kills wife in Bidar

ಸಾರಾಂಶ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ, ಅನೈತಿಕ ಸಂಬಂಧದ ಶಂಕೆಯಿಂದ ಪತಿ ಕಿಶನ್ ತನ್ನ ಪತ್ನಿ ಅಶ್ವಿನಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾತ್ರಿಯಿಡೀ ಜಗಳವಾಡಿದ ನಂತರ ನಸುಕಿನ ಜಾವ ಈ ಕೃತ್ಯ ಎಸಗಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಬೀದರ್: ಅನೈತಿಕ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮನ್ನಳ್ಳಿ ಗ್ರಾಮದ ನಿವಾಸಿ ಅಶ್ವಿನಿ (28) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಕಿಶನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ನಡೆದ ಜಗಳ – ನಸುಕಿನ ಜಾವ ಕೊಲೆ

ಪೊಲೀಸ್ ಮೂಲಗಳ ಪ್ರಕಾರ, ಶನಿವಾರ ಇಡೀ ರಾತ್ರಿ ಕಿಶನ್ ತನ್ನ ಪತ್ನಿ ಅಶ್ವಿನಿಯೊಂದಿಗೆ ಶೀಲ ಶಂಕೆಯ ವಿಚಾರವಾಗಿ ಜಗಳವಾಡಿದ್ದನು. ಪತ್ನಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಕಿಶನ್‌ನನ್ನು ಕಾಡುತ್ತಿತ್ತು. ಇದೇ ಕಾರಣದಿಂದಾಗಿ ಗಂಡ-ಹೆಂಡತಿಯ ನಡುವೆ ಪದೇಪದೇ ಕಲಹ ನಡೆಯುತ್ತಿತ್ತು. ನಸುಕಿನ ಜಾವ ಸುಮಾರು 4 ಗಂಟೆ ಸುಮಾರಿಗೆ, ಕೋಪ ಮಿತಿಮೀರಿ ಕಿಶನ್ ತನ್ನ ಪತ್ನಿಯ ಮುಖ ಮತ್ತು ತಲೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿಹಾಕಿ ಹತ್ಯೆಗೈದಿದ್ದಾನೆ. ಘಟನೆಯಲ್ಲಿ ಅಶ್ವಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಪೋಷಕರಿಗೆ ತಿಳಿಸಿದ್ದ ಅಶ್ವಿನಿ

ಅಶ್ವಿನಿ ತನ್ನ ಪತಿ ಶೀಲ ಶಂಕೆಯಿಂದ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ವಿಷಯವನ್ನು ಕೆಲ ದಿನಗಳ ಹಿಂದೆಯೇ ತನ್ನ ತಂದೆ ಹಾಗೂ ಕುಟುಂಬಸ್ಥರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಿಶನ್‌ಗೆ ಬುದ್ಧಿವಾದ ಹೇಳಿ, ದಂಪತಿಯ ನಡುವೆ ಸಂಧಾನಕ್ಕೆ ಪ್ರಯತ್ನಿಸಿದ್ದರೂ, ಗಂಡ-ಹೆಂಡತಿಯ ನಡುವಿನ ಜಗಳ ಶಮನವಾಗಿರಲಿಲ್ಲ. ಕೊನೆಗೆ ಈ ದೀರ್ಘಕಾಲದ ಅನುಮಾನ ಮತ್ತು ಕಲಹ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.

ಮಹಾರಾಷ್ಟ್ರದಲ್ಲಿ ಕೆಲಸ ಊರಲ್ಲಿ ಪತ್ನಿ ವಾಸ

ಆರೋಪಿ ಕಿಶನ್ ಮಹಾರಾಷ್ಟ್ರದ ದಾಬಾದೊಂದರಲ್ಲಿ ಕೆಲಸ ಮಾಡುತ್ತಿದ್ದನು. ಪತ್ನಿ ಅಶ್ವಿನಿ ತನ್ನ ಮೂವರು ಮಕ್ಕಳೊಂದಿಗೆ ಮನ್ನಳ್ಳಿ ಗ್ರಾಮದಲ್ಲಿಯೇ ವಾಸವಾಗಿದ್ದಳು. ಕೆಲಸದ ನಿಮಿತ್ತ ದೂರವಿದ್ದರೂ, ಶೀಲ ಶಂಕೆಯ ವಿಚಾರವಾಗಿ ಕಿಶನ್ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದನು.

ಪೊಲೀಸ್ ಅಧಿಕಾರಿಗಳ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳಾದ ಪ್ರದೀಪ್ ಗುಂಟೆ, ಮಡಿವಾಳಪ್ಪ ಹಾಗೂ ಸುವರ್ಣಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಮಂಠಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಕಿಶನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

PREV
Read more Articles on
click me!

Recommended Stories

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ, ದೇವರ ದರ್ಶನ ಪಡೆದ ನವಜೋಡಿ ಮನೆ ಸೇರಲೇ ಇಲ್ಲ!
ದುಬೈ ಏರ್​ಪೋರ್ಟ್​ ಮೇಲೂ ದಾಳಿ- ಸಾವು, ನೋವು: Bigg Boss Drone Pratap ಇನ್ನೊಂದು ವಿಡಿಯೋ