ಆಸ್ತಿ ಮಾಲೀಕರೇ ಎಚ್ಚರ! ನಕಲಿ ದಾಖಲೆ ಸೃಷ್ಟಿಸಿ ಯಾರದೋ ಆಸ್ತಿ ಮಂಗಮಾಯ ಮಾಡೋ ಗ್ಯಾಂಗ್ ಇದು!

Kannadaprabha News   | Kannada Prabha
Published : Sep 10, 2026, 08:41 AM IST
Hubballi dharwad

ಸಾರಾಂಶ

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ಹಂಚಿಕೆಯಾದ, ಮಾಲೀಕರು ಇಲ್ಲದ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿರುವ ಜಾಲ ಪತ್ತೆಯಾಗಿದೆ. ಈ ಹಗರಣವನ್ನು ತಡೆಯಲು ಮತ್ತು ಅಸಲಿ ವಾರಸುದಾರರನ್ನು ಪತ್ತೆಹಚ್ಚಲು ಹುಡಾ ಇದೀಗ ಸಮೀಕ್ಷೆ ನಡೆಸಲು ಮುಂದಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ (ಸೆ.10): ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳಿಗೆ ಮಾಲೀಕರು ಇಲ್ಲದೆ ಇರುವುದನ್ನು ಪತ್ತೆ ಹಚ್ಚಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವುದನ್ನು ತಡೆಯಲು ಸಮೀಕ್ಷೆ ನಡೆಸಲು ಹುಡಾ ಮುಂದಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಮಾರಾಟ!

ಹುಡಾದಿಂದ 20-30 ವರ್ಷಗಳ ಹಿಂದೆ ಮಹಾನಗರದಲ್ಲಿ ನಿರ್ಮಿಸಿರುವ ಲೇಔಟ್‌ಗಳ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದುಂಟು. ಈ ನಿಟ್ಟಿನಲ್ಲಿ ಅಧಿಕಾರಿಯೊಬ್ಬರ ವಿರುದ್ಧ ಕ್ರಮವೂ ಆಗಿದೆ. ಆದರೆ ಅಷ್ಟಕ್ಕೆ ಅದು ಸ್ಥಗಿತಗೊಂಡಿದೆ.

ಹುಡಾದಲ್ಲಿ ಏನಾಗುತ್ತಿದೆ?

ಹುಡಾದಿಂದ ನಿವೇಶನ ಪಡೆದರೆ 10 ವರ್ಷ ಯಾರಿಗೂ ಪರಭಾರೆ ಹಾಗೂ ಮಾರಾಟ ಮಾಡುವಂತಿಲ್ಲ ಎಂಬುದು ನಿಯಮವಿದೆ. ಈ ಹಿಂದೇ ಹುಡಾಕ್ಕೆ ಸಂಪೂರ್ಣ ಹಣ ಸಂದಾಯ ಮಾಡಿ ಸರ್ಕಾರಿ ಸಿಬ್ಬಂದಿ, ಮಧ್ಯಮ ವರ್ಗದವರು ನಿವೇಶನ ಪಡೆದಿದ್ದಾರೆ. ಇದರಲ್ಲಿ ಹಲವರು ಮೃತಪಟ್ಟಿದ್ದಾರೆ. ಮೂಲ ಮಾಲೀಕರ ವಾರಸುದಾರರು ಇದ್ದರೂ ತಮ್ಮವರ ಹೆಸರಿನಲ್ಲಿ ನಿವೇಶನ ಇದೆ ಎಂಬ ಮಾಹಿತಿಯೇ ಅವರಿಗಿಲ್ಲ. ಹೀಗಾಗಿ ಹಲವು ನಿವೇಶನಗಳಲ್ಲಿ ಗಿಡ-ಗಂಟಿ ಬೆಳೆದ ಪಾಳು ಬಿದ್ದಿವೆ.

ಖಾಲಿ ನಿವೇಶನ ಪತ್ತೆ ಹಚ್ಚಿ ಮಾರಾಟ

ಇಂತಹ ವಾರಸುದಾರರಿಗೆ ತಿಳಿಯದೇ ಇರುವ ನಿವೇಶನ ಪತ್ತೆ ಹಚ್ಚಿ ತಾವೇ ವಾರಸುದಾರರು ಎಂಬಂತೆ ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ. ಬಳಿಕ ಆ ನಿವೇಶನವನ್ನು ತಮ್ಮಲ್ಲಿಯೇ ಒಬ್ಬರ ಹೆಸರಿನಲ್ಲಿ ಖರೀದಿಸಿ ನೋಂದಣಿ ಮಾಡಿಸಿ, ಮತ್ತೊಬ್ಬರಿಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ವ್ಯವಸ್ಥಿತ ಜಾಲಕ್ಕೆ ಹುಡಾ ಸಿಬ್ಬಂದಿಯೇ ಸಾಥ್‌ ನೀಡಿದ್ದು ಬಹಿರಂಗಗೊಂಡಿದೆ. ಆ ಸಿಬ್ಬಂದಿ ವಿರುದ್ಧ ಕ್ರಮವೂ ಆಗಿದೆ.

ಬೆಳಕಿಗೆ ಬಂದಿದ್ದು ಹೇಗೆ?

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡುತ್ತಿರುವ ಕುರಿತು ಇತ್ತೀಚಿಗೆ ಮಾಜಿ ಸೈನಿಕರೊಬ್ಬರು ಬಯಲಿಗೆ ತಂದಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಸರಿಸುಮಾರು 150-200ಕ್ಕೂ ಅಧಿಕ ಸೈಟುಗಳು ಈ ರೀತಿ ಮಾಡಿರುವುದು ಬೆಳಕಿಗೆ ಬಂದಿತು. ಬಳಿಕ ಆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಆ ಸಿಬ್ಬಂದಿಯೊಬ್ಬರದೇ ತಪ್ಪಲ್ಲ. ಅದಕ್ಕೆ ಹೊರಗಿನ ಕೆಲ ಕಾಣದ ಕೈಗಳು ಕೆಲಸ ಮಾಡಿದ್ದುಂಟು. ಆದರೆ ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಜತೆಗೆ ಇನ್ನಷ್ಟು ಸಿಬ್ಬಂದಿಯೂ ಇದೆ ಎಂಬ ಆರೋಪವೂ ಕೇಳಿ ಬಂದಿದ್ದುಂಟು. ಆ ಬಗ್ಗೆ ಯಾವುದೇ ಕ್ರಮಗಳಾಗುತ್ತಿಲ್ಲ ಎಂಬ

ಶಾಕೀರ ಸನದಿ ಅಧ್ಯಕ್ಷರಾಗಿದ್ದ ವೇಳೆ ಇದರ ವಿರುದ್ಧ ಕಂಪ್ಲೆಂಟ್‌ ಕೂಡ ಕೊಡಲಾಗಿತ್ತು. ಇದೀಗ ರಾಬರ್ಟ್‌ ದದ್ದಾಪುರಿ ಅವರು ಅಧ್ಯಕ್ಷರಾಗಿದ್ದು ಅವರು ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.

ಆಗ ವಾರಸುದಾರರು ಇಲ್ಲದ ಸುಮಾರು 150ರಿಂದ 200ಕ್ಕೂ ಅಧಿಕ ನಿವೇಶನಗಳನ್ನೂ ನಕಲಿ ದಾಖಲೆ ಸೃಷ್ಟಿಸಿ ಮರು ಮಾರಾಟ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಹಾಗಾದರೆ ವಾರಸುದಾರರು ಇಲ್ಲದ ಎಷ್ಟು ನಿವೇಶನಗಳು ಇನ್ನು ಹುಡಾ ಬಳಿ ಇವೆ ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು. ಜತೆಗೆ ಮೂಲಮಾಲೀಕರ ವಾರಸುದಾರರು ಇದ್ದಲ್ಲಿ ಅವರಿಗೆ ಈ ಸೈಟು ನೀಡುವ ಪ್ರಕ್ರಿಯೆ ಆಗಬೇಕು. ಶುದ್ಧ ಕ್ರಿಯಾಪತ್ರ ನೀಡುವ ಬಗ್ಗೆ ಹುಡಾ ಯೋಚನೆ ಮಾಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ಹಿಂದೆ ನಕಲಿ ದಾಖಲೆ ಸಿದ್ಧಪಡಿಸಿ ಮರು ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಬ್ಬರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದೀಗ ಆ ರೀತಿ ಪ್ರಕರಣ ಮುಂದೆ ಆಗದಂತೆ ತಡೆಯಲು ಶೀಘ್ರದಲ್ಲಿಯೇ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ರಾಬರ್ಟ್‌ ದದ್ದಾಪುರಿ, ಅಧ್ಯಕ್ಷ, ಹುಡಾ

ವಾರಸುದಾರರು ಇಲ್ಲದ ಸೈಟ್‌ಗಳ ನಕಲಿ ದಾಖಲೆ ಸೃಷ್ಟಿಸಿ ಮರುಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿತು. ಈ ಸಂಬಂಧ ದೂರು ಕೂಡ ದಾಖಲಿಸಲಾಗಿತ್ತು. ಕ್ರಮಕೈಗೊಳ್ಳಬೇಕು ಎನ್ನುವಷ್ಟರಲ್ಲೇ ನಮ್ಮ ಅಧಿಕಾರವಧಿ ಮುಕ್ತಾಯಗೊಂಡಿತು. ಹಿಂದಿನ ಲೇಔಟ್‌ಗಳ ಶುದ್ಧ ಕ್ರಯಪತ್ರ ಮಾಡಿ ಕೊಡುವುದು ಉತ್ತಮ.

ಶಾಕೀರ ಸನದಿ, ನಿಕಟ ಪೂರ್ವ ಅಧ್ಯಕ್ಷ, ಹುಡಾ

PREV
Read more Articles on
click me!

Recommended Stories

50ನೇ ವರ್ಷದ ಗಣೇಶೋತ್ಸವಕ್ಕೆ ಬಡ ವೃದ್ಧೆಗೆ ಸೂರು ನಿರ್ಮಿಸಿಕೊಟ್ಟ ಸಮಿತಿ! ಭಾಗಿ ಅಮ್ಮ ಈಗ ಸೇಫ್!
ನಾಳೆ ಕೋಲಾರಮ್ಮನಿಗೆ 10108 ತಾವರೆ ಹೂಗಳಿಂದ ಸ್ವರ್ಣಕಮಲದ ಅಲಂಕಾರ! ವಿಮಾನದಲ್ಲಿ ತಂದಿದ್ದೇಕೆ?