ಒಂದು ಸಾವಿರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಶೀಘ್ರ ಹಾಸ್ಟೆಲ್‌: ಕೋಟ ಶ್ರೀನಿವಾಸ ಪೂಜಾರಿ

By Govindaraj SFirst Published Sep 19, 2022, 9:16 PM IST
Highlights

ಮೈಸೂರಿನಲ್ಲಿ ದೀನ ದಯಾಳ್‌ ಉಪಾಧ್ಯಾಯ ಅವರ ಹೆಸರಿನಲ್ಲಿ ಹಿಂದುಳಿದ ವರ್ಗದ ಒಂದು ಸಾವಿರ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ತೆರೆಯಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಮೈಸೂರು (ಸೆ.19): ಮೈಸೂರಿನಲ್ಲಿ ದೀನ ದಯಾಳ್‌ ಉಪಾಧ್ಯಾಯ ಅವರ ಹೆಸರಿನಲ್ಲಿ ಹಿಂದುಳಿದ ವರ್ಗದ ಒಂದು ಸಾವಿರ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ತೆರೆಯಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಕೆ.ಆರ್‌. ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಮೋದಿ ಯುಗ ಉತ್ಸವ್‌-22 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು 2,239 ಬಿಸಿಎಂ ಹಾಸ್ಟೆಲ್‌, 1,860 ಪ.ಜಾತಿಯ ಹಾಸ್ಟೆಲ್‌, 830 ವಸತಿ ಶಾಲೆಗಳಿವೆ. ಆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಕೊರೆತೆ ಇದೆ. 

ಈಗ ದೀನ ದಯಾಳ್‌ ಉಪಾಧ್ಯಾಯ ಅವರ ಹೆಸರಿನಲ್ಲಿ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದ್ದು ಸ್ವಂತ ಕಟ್ಟಡ ದೊರೆಯದಿದ್ದರೂ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದರು. ರಾಜ್ಯದ ನಾನಾ ಪ್ರತಿಷ್ಠಿತ ಶಾಲೆಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಇದಕ್ಕೆ . 36 ಕೋಟಿ ವೆಚ್ಚವಾಗುತ್ತಿದೆ. ಇದರಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುವವರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು, ವಿಧವೆಯರ ಮಕ್ಕಳು, ಒಳಚರಂಡಿ ಕಾರ್ಮಿಕರ ಮಕ್ಕಳು, ಏಡ್ಸ್‌ ಪಿಡೀತರ ಮಕ್ಕಳು ಸೇರಿ ಹೀಗೆ ನಾನಾ ಸ್ತರದಲ್ಲಿ ಹಿಂದುಳಿದ ಮಕ್ಕಳು ಮುನ್ನಲೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಮೈಸೂರಿನಿಂದ ಹೆಚ್ಚಿನ ಜನ ಪಾಲ್ಗೊಳ್ಳಿ, ರಾಹುಲ್‌ ಗಾಂಧಿ ಕೈ ಬಲಪಡಿಸಿ - ಸಿದ್ದರಾಮಯ್ಯ ಮನವಿ

ಪ್ರಧಾನಿ ನರೇಂದ್ರಮೋದಿ ಅವರ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಕೃಷ್ಣರಾಜ ಕ್ಷೇತ್ರ ಮಾತ್ರ. ಅಂತಹ ರಾಜಕಾರಣಿ ಎಸ್‌.ಎ. ರಾಮದಾಸ್‌ ಅವರನ್ನು ಮರು ಆಯ್ಕೆ ಮಾಡಬೇಕು. ದೀನ್‌ದಯಾಳ್‌ ಉಪಾಧ್ಯಾಯ ಅವರ ಮಾತಿನಂತೆ ರಾಮದಾಸ್‌ ಅವರು ರಾಜಕೀಯವನ್ನು ವ್ರತವಾಗಿ ಸ್ವೀಕರಿಸಿದ್ದಾರೆ ಎಂದರು. ಸಮಾಜದಲ್ಲಿ ಸರ್ವರಿಗೂ ಸಮಾನತೆ ದೊರೆಯಲು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ನೀಡಿದ ಸಂವಿಧಾನವೇ ಕಾರಣ. ಮುಂದಿನ ಜನಾಂಗವೂ ಅವರನ್ನು ಸ್ಮರಿಸಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್‌ ಯಾವ ಯಾವ ದೇಶದಲ್ಲಿ ತಂಗಿರುವ, ಉಪನ್ಯಾಸ ಮಾಡಿರುವ ಪುಸ್ತಕಗಳು ಹಾಗೂ ಅವರ ಕೆಲವು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವ ಯೋಜನೆ ಜಾರಿಗೆ ತಂದಿದ್ದಾಗಿ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ಬಲಿಷ್ಠ ವಾಗುತ್ತಿದೆ. ಇದರಿಂದ ವಿಶ್ವಮಟ್ಟದಲ್ಲಿ ಭಾರತೀಯರಿಗೆ ಗೌರವವೂ ಹೆಚ್ಚುತ್ತಿದೆ. ಇದಕ್ಕೆ ಉಕ್ರೇನ್‌ನಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದ ವಿದ್ಯಾರ್ಥಿಗಳೇ ಸಾಕ್ಷಿ. ಅನೇಕ ಮಂದಿ ವಿದ್ಯಾರ್ಥಿಗಳು ತಮಗಾದ ಅನುಭವವನ್ನು ಹೇಳುತ್ತಾ, ತ್ರಿವರ್ಣ ಧ್ವಜವನ್ನು ಹಿಡಿದು ನಾಲ್ಕು ಗಂಟೆಗಳ ಕಾಲ ನಡೆದುಕೊಂಡು ನಾವು ಗಡಿ ತಲುಪಿದಾಗ ರಷ್ಯಾದ ಸೈನಿಕರು ಬಂದೂಕುಗಳನ್ನು ಕೆಳಗಿಟ್ಟು ನಮ್ಮನ್ನು ಕಳುಹಿಸಿಕೊಟ್ಟರು. ಆ ಪರಿಸ್ಥಿತಿಯಲ್ಲಿ ಭಾರತದವರನ್ನು ನೋಡಿಕೊಂಡ ರೀತಿಗೆ ನಮ್ಮ ದೇಶಕ್ಕೆ ವಿಶ್ವಮನ್ನಣೆ ದೊರೆಯುತ್ತಿದೆ ಎಂಬ ಹೆಮ್ಮೆ ನಮಗಿದೆ ಎಂದಉ ಹೇಳಿರುವುದಾಗಿ ಸ್ಮರಿಸಿದರು.

ದೇಶವೇ ಬದಲಾಗುತ್ತಿರುವ ವೇಳೆ ನಾವು ಹಾಗೂ ಅಧಿಕಾರಿಗಳು ಬದಲಾಗಬೇಕಿದೆ. ನಮ್ಮ ಆಡಳಿತ ವೈಖರಿ ಬದಲಾಗಬೇಕಿದೆ. ರಾಜ್ಯದಲ್ಲಿ 2 ಕೋಟಿಗೂ ಪ.ಜಾತಿ ಮತ್ತು ಪ.ಪಂಗಡದ ಕುಟುಂಬದವರಿದ್ದಾರೆ. ಅವರೆಲ್ಲರೂ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು. ಆ ಕುಟುಂಬದ ಮಕ್ಕಳು ವೈದ್ಯರ, ಎಂಜಿನಿಯರ್‌ಗಳಾಗಬೇಕು, ಅವರಿಗೆ ತಲುಪಬೇಕಿರುವ ಪ್ರತಿ ರೂಪಾಯಿಯನ್ನು ನಾವು ತಲುಪಿಸಬೇಕಿದೆ. ಇಲಾಖೆಗಳ ಕಾರ್ಯವೈಖರಿ ಸುಧಾರಿಸಬೇಕಿದೆ ಎಂದು ಅವರು ತಿಳಿಸಿದರು.

ಶಾಸಕ ಎಸ್‌.ಎ. ರಾಮದಾಸ್‌ ಪ್ರಸ್ತಾವಿಕವಾಗಿ ಮಾತನಾಡಿ, ಮೂರನೇ ವರ್ಷದ ಮೋದಿಯುಗ ಉತ್ಸವದಲ್ಲಿ ವಿಶೇಷವಾಗಿ ಪ.ಜಾತಿ, ಪ.ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಮತ್ತು ಯೋಜನೆಗಳ ವಿಚಾರವನ್ನು ಜನ ಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತಿದೆ. ಸ್ವಾತಂತ್ರ್ಯ ಭಾರತದ 75ನೇ ವರ್ಷದಿಂದ 100ನೇ ವರ್ಷದವರೆಗೆ ಎಲ್ಲಾ ಸಮಾಜದ ಅಭಿವೃದ್ಧಿ ಆಗಬೇಕೆಂಬ ದೂರದೃಷ್ಟಿಯ ಕಲ್ಪನೆಯನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿರುವುದಾಗಿ ಅವರು ಹೇಳಿದರು.

ಸ್ವಂತ ಉದ್ಯೋಗ ಮಾಡುವವರಿಗೆ ವೇದಿಕೆ ನಾವು ನೀಡುತ್ತೇವೆ. 13 ಬ್ಯಾಂಕ್‌ಗಳು ಸಾಲ ನೀಡಿದ್ದು, ಸ್ಟಾಂಡಪ್‌ ಯೋಜನೆ, ಮುದ್ರಾ ಯೋಜನೆ, ಸ್ಟಾರ್ಚ್‌ಅಪ್‌ ಯೋಜನೆ ಸೌಲಭ್ಯ ಒದಗಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಇಂದಿನ ಹಾಗೂ ನಾಳೆಯ ಭವಿಷ್ಯ ರೂಪಿಸುವ ಮೂಲಕವೇ ಮೋದಿ ಹುಟ್ಟುಹಬ್ಬದ ಕೊಡುಗೆ ನೀಡಲು ಒಂಭತ್ತು ದಿನಗಳ ಕಾರ್ಯಕ್ರಮ ರೂಪಿಸಿದ್ದೇವೆ. ಕೊನೆ ದಿನ ದೀನ್‌ ದಯಾಳ್‌ ಅವರ ಹುಟ್ಟುಹಬ್ಬವಿದ್ದು, ಹೀಗಾಗಿ ಮೊಹಲ್ಲಾಗಳಲ್ಲಿ ಹೋಗಿ ಊಟ ಮಾಡುವ ಮೂಲಕ ಕಾರ್ಯಕ್ರಮ ಆಯೋಜಿಸಿ ಸರಳ ಬದುಕಿನ ಸಂದೇಶ ಸಾರಲಿದ್ದೇವೆ ಎಂದು ಅವರು ಹೇಳಿದರು.

Mysuru: ದಸರಾ ಗೋಲ್ಡ್‌ ಕಾರ್ಡ್‌ ಬಗ್ಗೆ ಶೀಘ್ರದಲ್ಲೇ ತೀರ್ಮಾನ: ಸಚಿವ ಸೋಮಶೇಖರ್‌

ನಗರಪಾಲಿಕೆ ಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್‌, ಶಾಂತ ವಡಿವೇಲು, ಪಿ.ಟಿ. ಕೃಷ್ಣ, ಕೆ.ಆರ್‌. ಕ್ಷೇತ್ರದ ಮಂಡಲದ ಅಧ್ಯಕ್ಷ ವಡಿವೇಲು, ಅಂಬೇಡ್ಕರ್‌ ನಿಗಮದ ಅಧಿಕಾರಿ ಸುಧಾಮಣಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿ.ಆರ್‌. ಮಹೇಶ್‌, ಹಿಂದುಳಿದ ಮೋರ್ಚಾದ ನಾಗರಾಜು, ಶಿವಪ್ಪ ಮೊದಲಾದವರು ಇದ್ದರು.

click me!