ಬೆಂಗಳೂರು (ಅ.30): ಪವರ್ ಸ್ಟಾರ್ (Power star) ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಕಾಲಿಕ ಮರಣ ಹೊಂದಿದ್ದು ಇಂದು ಅಂತ್ಯಕ್ರಿಯೆ ನಡೆಯಲಿದ್ದು, ನಗರ ವ್ಯಾಪ್ತಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಎರಡು ದಿನಗಳ ಕಾಲ ಬಿಗಿ ಪೊಲೀಸ್ ಬಂದೋಬಸ್ತ್ (Police security) ಕಲ್ಪಿಸಲಾಗಿದೆ.
ಹೃದಯಾಘಾತದಿಂದ (Heart attack) ಪುನೀತ್ ಮೃತಪಟ್ಟಸುದ್ದಿ ತಿಳಿದ ಕೂಡಲೇ ರಾಜಧಾನಿಯ ಬಹುತೇಕ ಕಡೆ ‘ಅಘೋಷಿತ ಬಂದ್’ (bandh) ವಾತಾವರಣ ನೆಲೆಸಿತು. ಅಲ್ಲದೆ, ವಸಂತನಗರದ ವಿಕ್ರಂ ಆಸ್ಪತ್ರೆ (Vikram hospital) ಸಮೀಪ ಪವರ್ ಸ್ಟಾರ್ ಹಾಗೂ ಡಾ.ರಾಜ್ ಕುಮಾರ್ (Dr Rajkumar) ಕುಟುಂಬದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ನಟನ ಅಂತಿಮ ಯಾತ್ರೆ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Panth) ಅವರು, ಸಮವಸ್ತ್ರದೊಂದಿಗೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ತಕ್ಷಣವೇ ಕರ್ತವ್ಯಕ್ಕೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹಾಜರಾಗುವಂತೆ ಸಂದೇಶ ರವಾನಿಸಿದರು.
ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!
ನಟನ ಅಂತ್ಯಕ್ರಿಯೆ ಮುಗಿಯುವರೆಗೆ ತಮ್ಮ ಠಾಣಾ ಸರಹದ್ದಿನಲ್ಲಿ ಗಸ್ತು ಹೆಚ್ಚಿಸಬೇಕು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಡೆ ಹೆಚ್ಚಿನ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಜನ ಸೇರುವ ಮಾರುಕಟ್ಟೆಗಳು, ಪ್ರಮುಖ ಜಂಕ್ಷನ್ಗಳು ಹಾಗೂ ಮಾಲ್ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ವದಂತಿಗಳಿಗೆ ಕಿವಿಕೊಡಬೇಡಿ:
ಇನ್ನು ವದಂತಿಗಳಿಗೆ ಕಿವಿಗೊಡದಂತೆ ನಗರದಲ್ಲಿ ಶಾಂತಿ ಕಾಪಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರು ಮನವಿ ಸಹ ಮಾಡಿದರು.
‘ದಯವಿಟ್ಟು ಯಾವುದೇ ವದಂತಿಗಳನ್ನು ನಂಬಬೇಡಿ ಹಾಗೂ ಯಾವುದೇ ರೀತಿಯ ವದಂತಿಗಳನ್ನು ಪ್ರಚಾರ ಮಾಡಬೇಡಿ. ಬೆಂಗಳೂರು ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಗಳೂರು ಪೊಲೀಸರಾದ ನಾವು ನಗರದಲ್ಲಿ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಭರವಸೆಯನ್ನು ನೀಡುತ್ತೇವೆ ಎಂದು ಇಲಾಖೆ ಟ್ವೀಟ್ ಮಾಡಿತ್ತು.
ಮದ್ಯ ಮಾರಾಟ ನಿಷೇಧ
ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಒಟ್ಟು ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶುಕ್ರವಾರ ಆದೇಶಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದಿಂದ ಭಾನುವಾರ ರಾತ್ರಿ 12 ಗಂಟವರೆಗೆ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್ಗಳ ವಹಿವಾಟು ನಿರ್ಬಂಧಿಸಲಾಗಿದೆ.
ಕೆಲವು ಕಿಡಿಗೇಡಿಗಳು ಸಾಮಾಜಿಕ ತಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ಸಾಧ್ಯತೆಗಳಿವೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವು ದುಷ್ಕರ್ಮಿಗಳು ಮದ್ಯಪಾನದ ಅಮಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.