ಕೊಡಗಿನ ಹೋಂಮೇಡ್‌ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..‌!

Kannadaprabha News   | Asianet News
Published : Apr 26, 2020, 08:28 AM IST
ಕೊಡಗಿನ ಹೋಂಮೇಡ್‌ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..‌!

ಸಾರಾಂಶ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದು, ಈಗ ಕೊಡಗಿನ ಹೋಂ ಮೇಡ್‌ ವೈನ್‌ಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಇದ್ದರೂ ಮಾರಾಟ ಮಾಡಲಾಗದ ಪರಿಸ್ಥಿತಿ ಎದುರಾಗಿದೆ. ಹಲವು ಕಡೆ ಮಾಡಿಟ್ಟ ವೈನ್ ಚೆಲ್ಲಿ ನಾಶ ಮಾಡಲಾಗಿದೆ.  

ಮಡಿಕೇರಿ(ಏ.26): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದು, ಈಗ ಕೊಡಗಿನ ಹೋಂ ಮೇಡ್‌ ವೈನ್‌ಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಇದ್ದರೂ ಮಾರಾಟ ಮಾಡಲಾಗದ ಪರಿಸ್ಥಿತಿ ಎದುರಾಗಿದೆ. ಮಾರಾಟ ನಿಷೇಧವಾಗಿರುವ ಪರಿಣಾಮ ಬಹುತೇಕ ಮಂದಿ ವೈನ್‌ ತಯಾರಿಕೆಯನ್ನು ಕೈಬಿಟ್ಟಿದ್ದಾರೆ. ಆದರೆ ಕೆಲವರು ಸಿಕ್ಕಿದ್ದೇ ಚಾನ್ಸ್‌ ಎಂಬಂತೆ ದುಪ್ಪಟ್ಟು ಬೆಲೆಗೆ ವೈನ್‌ ಮಾರಾಟ ಮಾಡಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ.

ಮದ್ಯ ಸಿಗದ ಪರಿಣಾಮ ಮದ್ಯ ಪ್ರಿಯರು ವೈನ್‌ನತ್ತ ಮುಖ ಮಾಡುತ್ತಿದ್ದಾರೆ. ಕೆಲವು ವೈನ್‌ ತಯಾರಕರು ಈಗಲೂ ವೈನ್‌ ತಯಾರಿಸುತ್ತಿದ್ದು, ಸ್ಥಳೀಯವಾಗಿಯೇ ಅದನ್ನು ಮಾರಾಟ ಮಾಡುತ್ತಿದ್ದಾರೆ. ಮದ್ಯದಂಗಡಿಗಳು ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ತಯಾರಾಗುತ್ತಿರುವ ವೈನ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಕೆಲವರು ಉತ್ತಮ ಹಣ ಕೂಡ ಮಾಡಿಕೊಳ್ಳುತ್ತಿದ್ದಾರೆ. ಅಬಕಾರಿ ಇಲಾಖೆಯ ಸಿಬ್ಬಂದಿಗಳು ದಾಳಿಯಲ್ಲಿ ತೊಡಗಿದ್ದು, ಅಂಥವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

ಕಳ್ಳಭಟ್ಟಿ ಕುಡಿಯೋರಿಗೆ ಸಚಿವ ನಾಗೇಶ್ ಸಲಹೆ..!

ಸ್ವ ಉದ್ಯೋಗಕ್ಕೆ ಕುತ್ತು: ಕೊಡಗು ಜಿಲ್ಲೆಯ ಬಹುತೇಕ ಮಹಿಳೆಯರು ಸ್ವ ಉದ್ಯೋಗದ ಮೂಲಕ ಹೋಂ ಮೇಡ್‌ ವೈನ್‌ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದಾಯವನ್ನು ಗಳಿಸುತ್ತಿದ್ದರು. ಆದರೆ ಇದೀಗ ಮದ್ಯ ಮಾರಾಟ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹೋಂ ಮೇಡ್‌ ವೈನ್‌ಗೆ ಬೇಡಿಕೆ ಹೆಚ್ಚಿದ್ದರೂ ಮಾರಾಟ ಮಾಡಲಾಗದ ಪರಿಸ್ಥಿತಿಯಿದೆ. ಇದರಿಂದಾಗಿ ವೈನ್‌ ತಯಾರಕರು ಕೂಡ ಸಂಕಷ್ಟಎದುರಿಸುತ್ತಿದ್ದಾರೆ. ಸ್ಪೈಸಸ್‌ ಅಂಗಡಿಗಳಲ್ಲಿ ಕೂರ್ಗ್‌ ಹೋಂ ಮೇಡ್‌ ವೈನ್‌ ಮಾರಾಟ ಮಾಡಲಾಗುತ್ತದೆ. ಕೊಡಗಿನ ವೈನ್‌ಗೆ ಉತ್ತಮ ಬೇಡಿಕೆಯಿದ್ದು, ಪ್ರವಾಸಿಗರು ಹೆಚ್ಚು ಕೊಂಡುಕೊಳ್ಳುತ್ತಾರೆ. ಆದರೆ ಪ್ರವಾಸೋದ್ಯಮ ಸೇರಿದಂತೆ ಎಲ್ಲವೂ ಲಾಕ್‌ಡೌನ್‌ ಆಗಿರುವುದರಿಂದ ಕೆಲವರು ವೈನ್‌ ತಯಾರಿಸುವುದನ್ನೇ ಸದ್ಯಕ್ಕೆ ನಿಲ್ಲಿಸಿದ್ದಾರೆ.

ಇನ್ನೂ ಎರಡು ತಿಂಗಳು ಮದ್ಯ ಸಿಕ್ಕಿಲ್ಲಾಂದ್ರೆ ಕುಡಿತ ಬಿಡ್ತಾರಂತೆ ಶೇ.50ರಷ್ಟು ಜನ

ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೆ ವಿವಿಧ ಬಗೆಯ ಹಣ್ಣಿನಿಂದ ನೈಸರ್ಗಿಕವಾಗಿ ಹೋಂ ಮೇಡ್‌ ವೈನ್‌ ತಯಾರಿಸಲಾಗುತ್ತದೆ. ಇದಕ್ಕೆ ಆಹಾರ ಇಲಾಖೆಯಿಂದ ಪರವಾನಗಿ ಪಡೆದುಕೊಂಡು ಜಿಲ್ಲೆಯಲ್ಲಿ ವೈನ್‌ ಉದ್ಯಮವನ್ನು ನಡೆಸಲಾಗುತ್ತಿತ್ತು. ಆದರೆ ಕೆಲವರು ಈಗ ಲಾಕ್‌ಡೌನ್‌ ನಿಷೇಧದ ನಡುವೆಯೂ ವೈನ್‌ ತಯಾರಿಸಿ ಮಾರಾಟ ಮಾಡುತ್ತಿದ್ದವರನ್ನು ಅಬಕಾರಿ ಇಲಾಖೆಯವರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ತಯಾರಿಸಿದ್ದ ವೈನ್‌ ಚೆಲ್ಲಿದರು: ಕೆಲವು ಕಡೆಗಳಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಹಿಂದೆಯೇ ತಯಾರಿಸಲಾಗಿದ್ದ ವೈನ್‌ನ್ನು ಚೆಲ್ಲಿರುವ ಘಟನೆಗಳು ಈ ಹಿಂದೆ ನಡೆದಿದೆ. ಕೆಲವರು ಸಾಲ ಪಡೆದುಕೊಂಡು ವೈನ್‌ ತಯಾರಿಕಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಲಾಕ್‌ಡೌನ್‌ನಿಂದಾಗಿ ನಷ್ಟಕ್ಕೆ ಒಳಗಾಗಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡುವ ಭಯದಿಂದಾಗಿ ಬಹುತೇಕರು ವೈನ್‌ ತಯಾರಿಕೆ ಹಾಗೂ ಮಾರಾಟ ಮಾಡುತ್ತಿಲ್ಲ.

ಹುಬ್ಬಳ್ಳಿ: ಮದ್ಯ ಸಿಗದ್ದಕ್ಕೆ ಸಾನಿಟೈಸರ್ ಕುಡಿದವನ ಕತೆ ಏನಾಯ್ತು ನೋಡಿ

ಸಾಲ ಮಾಡಿ ವೈನ್‌ ಉದ್ಯಮ ನಡೆಸುತ್ತಿದ್ದೆವು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವೈನ್‌ ತಯಾರಿಕೆ ಹಾಗೂ ಮಾರಾಟ ಮಾಡುತ್ತಿಲ್ಲ. ಇದೀಗ ಹೋಂ ಮೇಡ್‌ ವೈನ್‌ಗೆ ಬೇಡಿಕೆಯೂ ಹೆಚ್ಚಿದೆ. ಹಣ್ಣಿನ ರಸದಿಂದ ನಾವು ನೈಸರ್ಗಿಕವಾಗಿ ವೈನ್‌ ತಯಾರಿಕೆ ಮಾಡುತ್ತೇವೆ. ಇದರಿಂದ ಯಾವುದೇ ತೊಂದರೆ ಇಲ್ಲ. ಆದರೂ ನಿಷೇಧಿಸಲಾಗಿದ್ದು, ನಷ್ಟಎದುರಿಸುತ್ತಿದ್ದೇವೆ ಎಂದು ಮಡಿಕೇರಿ ವೈನ್‌ ತಯಾರಿಸುವ ಅಕ್ಕಮ್ಮ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ವಾರದಲ್ಲಿ ಎರಡು ದಿನ ಮದ್ಯ ಮಾರಾಟ..?

ಮನೆಯಲ್ಲೇ ವಿವಿಧ ಬಗೆಯ ಹಣ್ಣಿನಿಂದ ವೈನ್‌ ತಯಾರಿಸಿ ಅಂಗಡಿಗಳಿಗೆ ವಿತರಣೆ ಮಾಡುತ್ತಿದ್ದೆವು. ಆದರೆ ಲಾಕ್‌ಡೌನ್‌ ಆದಾಗಿನಿಂದ ಮತ್ತೆ ನಾವು ವೈನ್‌ ತಯಾರಿಸಿಲ್ಲ. ತಯಾರಿಸಿದ್ದ ವೈನ್‌ ಚೆಲ್ಲಿದೆವು ಎನ್ನುತ್ತಾರೆ ಮಡಿಕೇರಿ ವೈನ್‌ ತಯಾರಕರು ಯೋಗಿತಾ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೋಂ ಮೇಡ್‌ ವೈನ್‌ ಕೂಡ ಮಾರಾಟ ಮಾಡುವಂತಿಲ್ಲ. ಈಗಾಗಲೇ ಅಕ್ರಮವಾಗಿ ವೈನ್‌ ಮಾರಾಟ ಮಾಡುತ್ತಿದ್ದ ಕೆಲವೆಡೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತೆ ಪಿ. ಬಿಂದುಶ್ರೀ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

PREV
click me!

Recommended Stories

Yogesh Gowda murder case : ಕೊಲೆ ದೋಷಿ ವಿನಯ್ ಕುಲಕರ್ಣಿಗೆ ಮತ್ತೊಂದು ಶಾಕ್; ಶಾಸಕತ್ವ ರದ್ದು!
Kalaburagi heatwave record: ಕಲಬುರಗಿಯಲ್ಲಿ ಈ ಬೇಸಿಗೆಯ ದಾಖಲೆ 45 ಡಿಗ್ರಿ ತಾಪಮಾನ; ಸುರಪುರದಲ್ಲಿ ಕಾರ್ಮಿಕ ಸಾವು!