ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆ: ನೇತ್ರಾವತಿ ಹರಿವು ಹೆಚ್ಚಳ

By Kannadaprabha NewsFirst Published Jul 28, 2019, 1:45 PM IST
Highlights

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯು ಮೈದುಂಬಿ ಹರಿಯುತ್ತಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ 5 ಮೀಟರ್ ಗಿಂತ ಹೆಚ್ಚಿನ ನೀರನ್ನು ಹೊರಬಿಡಲಾಯಿತು.

ಮಂಗಳೂರು(ಜು.28): ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯು ಮೈದುಂಬಿ ಹರಿಯುತ್ತಿದೆ. ಇದರಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ 5 ಮೀಟರ್ ಗಿಂತ ಹೆಚ್ಚಿನ ನೀರನ್ನು ಹೊರಬಿಡಲಾಯಿತು.

ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಳ:

ವಾರದಿಂದೀಚೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗ ತೊಡಗಿದೆ. ಈ ಹಿನ್ನೆಲೆಯಲ್ಲಿ ಶಂಭೂರು ಎಎಂಆರ್ ಡ್ಯಾಂನ ಎಲ್ಲ ಬಾಗಿಲ ಮೂಲಕ ನೀರು ಬಿಡುಗಡೆ ಮಾಡಿದ್ದು, ಇದರಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಹೆಚ್ಚಿನ ಪ್ರಮಾಣದ ನೀರು ಹೊರಕ್ಕೆ:

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಂಬೆ ಡ್ಯಾಂನಲ್ಲಿ 5 ಮೀ. ನೀರು ಸಂಗ್ರಹವನ್ನು 2018ರ ಜನವರಿ ಬಳಿಕ 6 ಮೀಟರ್‌ಗೆ ಏರಿಸಿ ಸಂಗ್ರಹ ಮಾಡಲಾಗಿತ್ತು. ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಈ ಬಾರಿ ಬೇಸಿಗೆಯಲ್ಲಿ 6 ಮೀಟರ್ ನೀರು ಸಂಗ್ರಹಿಸಿದ ಬಳಿಕ ಇದೇ ಮೊದಲ ಬಾರಿಗೆ ನೀರಿನ ಪ್ರಮಾಣ ಹೆಚ್ಚಾಗಿ ನೀರನ್ನು ಹೊರಕ್ಕೆ ಹರಿಯಬಿಡಲಾಗಿದೆ.

3 ದಿನ ಕರಾವಳಿಯಲ್ಲಿ ಧಾರಾಕಾರ ಮಳೆ ಸಂಭವ

ಮೇ ತಿಂಗಳಾಂತ್ಯದಲ್ಲೂ 6 ಮೀಟರ್ ನೀರು ಸಂಗ್ರಹಿಸಿದ್ದೂ ಬೇಸಿಗೆಯ ಬಿಸಿಲ ಬೇಗೆಗೆ ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿ ರೇಶನ್ ಮೂಲಕ ನೀರು ಸರಬಾರಜು ಮಾಡಲಾಗಿತ್ತು. ಬಳಿಕ ಪೂರ್ವ ಮುಂಗಾರಿನ ಮಳೆ ಆರಂಭವಾಗುತ್ತಿದ್ದಂತೆಯೇ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ ಎಂದು ಡ್ಯಾಂನ ನಿರ್ವಾ ಹಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

7 ಮೀ. ಸಂಗ್ರಹದ ಕುರಿತು ಪ್ರಸ್ತಾಪ ಬಂದಿಲ್ಲ:

ಒಟ್ಟು 7 ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್‌ನಿಂದ 6 ಮೀಟರ್ ಎತ್ತರಕ್ಕೆ ಸಂಗ್ರಹದಿಂದ ಬಿ.ಮೂಡ, ಸಜೀಪ ಮುನ್ನೂರು ಹಾಗೂ ಪಾಣೆಮಂಗಳೂರು ಗ್ರಾಮದಲ್ಲಿ ಜಮೀನು ಮುಳುಗಡೆಯಾಗಿರುವ ಜಮೀನು ಮಾಲಕರಿಗೆ ಸೂಕ್ತ ಪರಿಹಾರ ನೀಡಲಾಗಿದೆ. ಉಳಿದ ಸಂತ್ರಸ್ತ ಭೂ ಮಾಲಕರಿಗೆ ಪರಿಹಾರ ನೀಡಲು ಸರ್ಕಾರದ ಅನುದಾನವಿದೆ.

ಆದರೆ, ಶೇ.50ರಷ್ಟು ಭೂ ಮಾಲಕರ ಜಾಗ ಪತ್ರಗಳ ಬಗ್ಗೆ ಗೊಂದಲಗಳಿದ್ದು, ಇತ್ಯರ್ಥವಾದ ಬಳಿಕ ಸಂತ್ರಸ್ಥರಿಗೆ ಪರಿಹಾರ ನೀಡಲಾಗುವುದು ಎಂದ ಅವರು, ತುಂಬೆ ವೆಂಟೆಡ್ ಡ್ಯಾಂನಲ್ಲಿ 7 ಮೀ. ನೀರು ಸಂಗ್ರಹಿಸುವ ಬಗ್ಗೆ ಇದುವರೆಗೂ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದ್ದಾರೆ. 

ನದಿ ಪಾತ್ರದ ಜನರಿಗೆ ಎಚ್ಚರಿಕೆ:

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ತುಂಬೆ ವೆಂಟೆಡ್ ಡ್ಯಾಂನಿಂದ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಹಾಗೂ ಶಂಭೂರು ಎಎಂಆರ್ ಹಾಗೂ ತುಂಬೆ ಡ್ಯಾಂನಿಂದ ನೀರಿನ ಒಳಹರಿವು ಹೆಚ್ಚಾದ ಕಾರಣ ಕೆಳಭಾಗದಲ್ಲಿರುವ ಪ್ರದೇಶಗಳಿಗೆ ಬಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳಭಾಗದ ಇಕ್ಕೆಲಗಳಲ್ಲಿ ನದಿಯ ದಡದಲ್ಲಿ ವಾಸಿಸುವ ಜನರು ಮತ್ತು ಅವರ ಸಾಕುಪ್ರಾಣಿಗಳ ಸಂರಕ್ಷಣೆಯ ವಿಷಯವಾಗಿ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

click me!