Chikkamagaluru;ಕುದುರೆಮುಖ ವ್ಯಾಪ್ತಿಯಲ್ಲಿ ಭಾರೀ ಮಳೆ ಹಿನ್ನೆಲೆ, ಹೆಬ್ಬಾಳೆ ಸೇತುವೆ ಮುಳುಗಡೆ

By Gowthami KFirst Published Aug 8, 2022, 10:39 PM IST
Highlights

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದರೆ, ನಗರ, ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ, ವಹಿವಾಟು ಇನ್ನಿತರೆ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಆ.8): ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇಂದು ಕೂಡ ಮುಂಗಾರಿನ ಆರ್ಭಟ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದರೆ, ನಗರ, ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ, ವಹಿವಾಟು ಇನ್ನಿತರೆ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ. ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಆತಂಕವನ್ನು ಸೃಷ್ಠಿಸಿದೆ. ತುಂಗ-ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು.ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳ ಸೇತುವೆ ಮುಳುಗಿತ್ತು. ಸೇತುವೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕುದುರೆಮುಖ ವ್ಯಾಪ್ತಿಯಲ್ಲಿ ಭಾರೀ ಮಳೆ ಹಿನ್ನೆಲೆ ಹೆಬ್ಬಾಳೆ ಸೇತುವೆ ಮೇಲೆ ಭದ್ರ ನದಿಯ ನೀರು ಉಕ್ಕಿ ಹರಿಯುತ್ತಿದೆ.ಇದರ ನಡುವೆಯೂ ಅಪಾಯವನ್ನೇ ಲೆಕ್ಕಸಿದೇ ಸೇತುವೆ ಮೇಲೆ ಕೆ ಎಸ್ ಆರ್ ಟಿ ಸಿ ಬಸ್ ವೊಂದು ಸಂಚಾರಿಸಿದೆ.

ಈ ಭಾರೀ ಮಳೆಗಾಲದಲ್ಲಿ 3ನೇ ಭಾರೀ ಗೆ ಹೆಬ್ಬಾಳೆ ಸೇತುವೆ ಮಳುಗಡೆಯಾಗಿದೆ. ಸೇತುವೆ ಮಳುಗಡೆಯಾದ ಹಿನ್ನೆಲೆ ಹೊರನಾಡು ಕಳಸ ಸಂಪರ್ಕ ಕಡಿತಗೊಂಡಿದೆ. ಇನ್ನು ಕಳಸ ತಾಲೂಕಿನ ನೆಲ್ಲಿಬೀಡು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗಿ ಕುದುರೆಮುಖ ದಿಂದ  ಮಂಗಳೂರು ಸಂಚಾರ ಬಂದ್ ಆಗಿತ್ತು.ರಸ್ತೆ ಸಂಚಾರ ಬಂದ್ ಆಗಿರೋದ್ರಿಂದ ಜನಸಾಮಾನ್ಯರು, ವಿದ್ಯಾರ್ಥಿಗಳ ಪರದಾಟ ನಡೆಸಿದರು.ಎರಡು ಗಂಟೆ ಕಾಲ ರಸ್ತೆ ಸಂಚಾರ  ಬಂದ್ ಆಗಿತ್ತು.ಸತತ ಮಳೆ ಕಾರಣ ಯಾವ ಸಂದರ್ಭದಲ್ಲಿ ಧರೆ, ರಸ್ತೆ, ಸೇತುವೆಗಳು ಕುಸಿಯುತ್ತದೋ ಎನ್ನುವ ಭೀತಿ ಎದುರಾಗಿರುವುದರಿಂದ ಜನರ ಮನೆಯಿಂದ ಹೊರಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ. 

Chikkamagaluru Rains; ಸರ್ಕಾರದ ನಡೆಯಿಂದ ಸಂತ್ರಸ್ಥರು ಬದುಕು ಬೀದಿಪಾಲು

ಧಾರಾಕಾರ ಮಳೆಯಿಂದಾಗಿ ಕಳಸದ ರುದ್ರಪಾದದಲ್ಲಿರುವ ಶ್ರೀ ವಿನಾಯಕ ಸ್ವಾಮಿ ದೇವರು ಮುಳುಗಡೆಯಾಗಿದೆ. ಭದ್ರಾ ನದಿ ನೀರು ಈ ವರ್ಷ ಪ್ರಥಮ ಬಾರಿಗೆ ಗರಿಷ್ಠ ಮಟ್ಟ ತಲುಪಿದ್ದು, ನದಿ ದಡದ ರುದ್ರಪಾದ ಅಶ್ವಥನಾರಾಯಣ, ವಿನಾಯಕ ಸ್ವಾಮಿ ಸೇರಿದಂತೆ ನಾರಕಟ್ಟೆ ಗುರುಪೀಠ ಮುಳುಗಡೆಗೊಂಡಿದೆ.ಕಳಸಾದ ಮರಸಣಿಗೆ ಗ್ರಾ.ಪಂ.ವ್ಯಾಪ್ತಿಯ ಗಾಳಿಗಂಡಿ ಗ್ರಾಮದಲ್ಲಿ ಮಂಜುಳಾ ಎಂಬುವವರ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದೆ. ನಿರಂತರ ಮಳೆಯಿಂದಾಗಿ ಕಳಸದ ಕಳಸೇಶ್ವರ ದೇವಸ್ಥಾನದ ತಡೆಗೋಡೆ ಕುಸಿತಕ್ಕೊಳಗಾಗಿದೆ. ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಗೋಡೆ ಕುಸಿಯುತ್ತಿದ್ದು, ಆಂತಂಕ ಸೃಷ್ಠಿಸಿದೆ.

ಮಳೆ ಅಬ್ಬರದಿಂದ ತತ್ತರಿಸಿರುವ ಮಲೆನಾಡಿಗೆ ಮತ್ತೊಂದು ಶಾಕ್, 48ಗಂಟೆಯಲ್ಲಿ 8 ಅಪಘಾತ!

ರಾಷ್ಟ್ರೀಯ ವಿಪತ್ತು ಪ್ರದೇಶ ಘೋಷಣೆಗೆ ಆಗ್ರಹ
ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದ ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ ಅವರಿಗೆ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು ನೆರೆಹಾವಳಿ ಹಾಗೂ ಭೂಕುಸಿತದಿಂದ ಮಲೆನಾಡು ಭಾಗದ ಜನರು ತತ್ತರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಲು ಆಗ್ರಹಿಸಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಯಿಂದಾಗಿ ಮಲೆನಾಡಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಕಾಫಿ, ಅಡಿಕೆ ಬೆಳೆಗಳು ನೆಲಕಚ್ಚಿದೆ. ಕಾಫಿಗಿಡಗಳಿಗೆ ಕೊಳೆರೋಗ ಆವರಿಸಿದೆ. ಬೆಳೆಗಾರರ ಸಂಕಷ್ಟ ನಿವಾರಣೆಗೆ ಕಾಫಿಮಂಡಳಿ, ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡುವ ಮೂಲಕ ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

click me!