ಮರಣ ಪ್ರಮಾಣಪತ್ರ ತಿದ್ದುಪಡಿಗೆ ವಿರೋಧ

By Kannadaprabha NewsFirst Published Jul 29, 2022, 1:27 PM IST
Highlights

ಜನನ- ಮರಣ ಪ್ರಮಾಣಪತ್ರ ತಿದ್ದುಪಡಿ ಅಧಿಕಾರವನ್ನು ಜೆ.ಎಂ.ಎಫ್‌.ಸಿ. ಕೋರ್ಚ್‌ ಬದಲಾಗಿ ಉಪವಿಭಾಗಾಧಿಕಾರಿಗೆ ವರ್ಗಾಯಿಸಿದ ಸರ್ಕಾರದ ಕ್ರಮವನ್ನು  ವಿರೋಧಿಸಿ ಮತ್ತು ಮರಳಿ ಕೋರ್ಟ್ ವ್ಯಾಪ್ತಿಗೆ ಅಧಿಕಾರ ನೀಡುವಂತೆ ಆಗ್ರಹಿಸಿ ಸ್ಥಳೀಯ ನ್ಯಾಯವಾದಿಗಳ ಸಂಘ ಪ್ರತಿಭಟನೆ ನಡೆಸಿತು.

ಬ್ಯಾಡಗಿ(ಜು.29): ಜನನ- ಮರಣ ಪ್ರಮಾಣಪತ್ರ ತಿದ್ದುಪಡಿ ಅಧಿಕಾರವನ್ನು ಜೆ.ಎಂ.ಎಫ್‌.ಸಿ. ಕೋರ್ಚ್‌ ಬದಲಾಗಿ ಉಪವಿಭಾಗಾಧಿಕಾರಿಗೆ ವರ್ಗಾಯಿಸಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಮತ್ತು ಮರಳಿ ಕೋರ್ಚ್‌ ವ್ಯಾಪ್ತಿಗೆ ಅಧಿಕಾರ ನೀಡುವಂತೆ ಆಗ್ರಹಿಸಿ ಸ್ಥಳೀಯ ನ್ಯಾಯವಾದಿಗಳ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಮನವಿ ಸಲ್ಲಿಸಿದರು. ಸಂಘದ ನೂರಾರು ಸದಸ್ಯರು ನ್ಯಾಯಾಲಯದ ಅವರಣದಿಂದ ತಹಸೀಲ್ದಾರ್‌ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಹಿರಿಯ ನ್ಯಾಯವಾದಿ ವಿ.ಎಸ್‌. ಕಡಗಿ(V.N.Kadagi), ಸದರಿ ವಿಷಯದ ಅಧಿಸೂಚನೆ (ನಂ.ಪಿ.ಡಿ.ಎಸ್‌ 66/ ಎಸ್‌.ಎಸ್‌.ಎಂ2022/ ದಿ. 18-07-2022) ಹೊರಡಿಸಿರುವ ಸರ್ಕಾರ ಸಾಧನ ಬಾಧಕಗಳನ್ನು ಪರಾಮರ್ಶಿಸಿರುವುದಿಲ್ಲ. ಅಲ್ಲದೇ ಇದೊಂದು ಆತುರದ ನಿರ್ಧಾರವಾಗಿದ್ದು ಇದರ ಹಿಂದೆ ರಾಜಕೀಯ ಶಕ್ತಿಗಳ ಒತ್ತಡವಿದೆ ಎಂದು ಆರೋಪಿದರು.

ಮರಣ ಪ್ರಮಾಣಪತ್ರ ತಿದ್ದುಪಡಿಗೆ ವಿರೋಧ

ಆರ್‌.ವಿ. ಬೆಳಕೇರಿಮಠ ಮಾತನಾಡಿ, ಜನರ ಮನೆ ಬಾಗಿಲಿಗೆ ಆಡಳಿತ ನೀಡುತ್ತೇವೆ ಎಂದು ಹೇಳಿಕೊಳ್ಳುವ ಸರ್ಕಾರ ಇದೀಗ ಜನನ- ಮರಣ ತಿದ್ದುಪಡಿಗೆ ನೂರಾರು ಕಿಮೀ ಹೋಗುವಂತೆ ಮಾಡಿದ್ದು ಯಾವ ಪುರುಷಾರ್ಥಕ್ಕೆ. ಸದರಿ ತಿದ್ದುಪಡಿ ಅಧಿಸೂಚನೆ, ಬೆಂಗಳೂರು, ಬೆಳಗಾವಿ, ಬಳ್ಳಾರಿ, ಕಾರವಾರ ಇನ್ನಿತರ ಬೃಹತ್‌ ಜಿಲ್ಲೆಗಳಲ್ಲಿ ಸಾಧ್ಯವಿಲ್ಲದ ಮಾತು, ಪ್ರಾಯೋಗಿಕ ಜ್ಞಾನದವಿಲ್ಲದ ತಿಳಿಗೇಡಿ ಸರ್ಕಾರದಿಂದ ಇಂತಹ ಆದೇಶಗಳು ಹೊರ ಬೀಳಲಿವೆ ಎಂದು ಆರೋಪಿಸಿದರು.

ರಾಜಕೀಯ ಪ್ರಭಾವ ಸಾಧ್ಯತೆ:

ಹಿರಿಯ ನ್ಯಾಯವಾದಿ ಎಫ್‌.ಎಂ. ಮುಳಗುಂದ ಮಾತನಾಡಿ, ಕಂದಾಯ ಇಲಾಖೆಯು ನಡೆಸುತ್ತಿರುವ ನ್ಯಾಯಾಲಯಗಳಲ್ಲಿ ರಾಜಕೀಯ ಪ್ರಭಾವ, ಒತ್ತಡಗಳಿಂದ ಸಾರ್ವಜನಿಕರಿಗೆ ಸೂಕ್ತ ಹಾಗೂ ನ್ಯಾಯ ಸಮ್ಮತವಾದ ನಿರ್ಣಯಗಳಾಗುತ್ತಿಲ್ಲ ಎಂಬ ಆರೋಪಗಳಿವೆ, ಅಷ್ಟಕ್ಕೂ ಜನಪ್ರತಿನಿಧಿಗಳು ಹೇಳಿದಂತೆ ಆದೇಶ ಮಾಡದಿದ್ದಲ್ಲಿ ಸಂಬಂಧಿಸಿದ ಉಪವಿಭಾಗಾಧಿಕಾರಿ ಮೇಲೆಯೂ ಒತ್ತಡ ಹೇರುವ ಸಾಧ್ಯತೆಯಿದ್ದು ಸದರಿ ತಿದ್ದುಪಡಿ ಆದೇಶ ಸಹ ಉಪವಿಭಾಗಾಧಿಕಾರಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದೆ. ಈ ಮೊದಲಿನಂತೆ ಜನನ- ಮರಣ ನೋಂದಣಿ ಹಾಗೂ ತಿದ್ದುಪಡಿ ಆದೇಶವನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನೀಡುವಂತೆ ಆಗ್ರಹಿಸಿದರು.

ಜನನ ಮತ್ತು ಮರಣ ನೋಂದಾವಣೆಗೆ ಆಧಾರ್ ಕಡ್ಡಾಯವಲ್ಲ; RGIಸ್ಪಷ್ಟನೆ!

ಏಜೆಂಟರ್‌ ಹಾವಳಿ ಹೆಚ್ಚಾಗುವ ಸಾಧ್ಯತೆ:

ನ್ಯಾಯವಾದಿ ಪ್ರಭು ಶೀಗಿಹಳ್ಳಿ ಮಾತನಾಡಿ, ಒಂದು ಜಿಲ್ಲೆಯಲ್ಲಿ ಕನಿಷ್ಟ3 ರಿಂದ 4 ತಾಲೂಕಿಗೊಂದು ಉಪವಿಭಾಗಾಧಿಕಾರಿ ಕಚೇರಿÀದೆ, ಸಾರ್ವಜನಿಕರಿಗೆ ಹೋಗಿ ಬರುವುದೇ ಒಂದು ಕೆಲಸವಾಗುತ್ತದೆ. ಬಡವರಿಂದ ಇದು ಅಸಾಧ್ಯದ ಮಾತಾಗಿದ್ದು, ಸದರಿ ತಿದ್ದುಪಡಿ ಆದೇಶ ದುರ್ಬಳಕೆ ಮಾಡುವ ಜನರಿಂದ ಕಚೇರಿಯಲ್ಲಿ ಏಜೆಂಟರ್‌ ಹಾವಳಿ ಹೆಚ್ಚಾಗುವ ಸಾಧ್ಯತೆಯಿದ್ದು ಪಾರದರ್ಶಕತೆ ಮಾಯವಾಗಲಿದೆ. ಕೂಡಲೇ ಸರ್ಕಾರ ಇಂತಹ ಎಲ್ಲ ಅಂಶಗಳನ್ನು ಪರಾಮರ್ಶಿಸಿ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರಲ್ಲದೇ, ಜೆ.ಎಂ.ಎಫ್‌.ಸಿ. ನ್ಯಾಯಾಲಯದ ವ್ಯಾಪ್ತಿಗೆ ಮುಂದುವರೆಸುವುದು ಹೆಚ್ಚು ಸೂಕ್ತವಾಗಿದೆ ಎಂದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್‌.ಎಸ್‌. ಬಟ್ಟಲಕಟ್ಟಿ, ಕಾರ್ಯದರ್ಶಿ ಸುರೇಶ ಗುಂಡಪ್ಪನರ, ಸಹಕಾರ್ಯದರ್ಶಿ ಸುರೇಶ ಕಾಟೇನಹಳ್ಳಿ, ಸದಸ್ಯರಾದ ಎಸ್‌.ಎನ್‌. ಚನ್ನಗೌಡ್ರ, ಎಚ್‌.ಎಸ್‌. ಜಾಧವ, ಎಂ.ಎ. ಅಗಸರ, ಆರ್‌.ಸಿ. ಶಿಡೇನೂರ, ಎಸ್‌.ಎನ್‌. ಬಾರ್ಕಿ, ಟಿ.ಎಸ್‌. ಹಡಗಲಿ, ಮಾಲತೇಶ ಹಾವೇರಿ, ಮೃತ್ಯುಂಜಯ ಲಕ್ಕಣ್ಣನವರ, ಎಫ್‌.ಎಂ. ಮುಳಗುಂದ, ಎಸ್‌.ಎಂ. ಮುಚ್ಚಟ್ಟಿ, ಎಸ್‌.ಎಂ. ಯಲಿ, ಕೆ.ಡಿ. ಪಾಟೀಲ ಹಾಗೂ ಇನ್ನಿತರರಿದ್ದರು.

click me!