Mysuru: ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ಅಧಿಕಾರಿಗಳಿಂದ ಕಿರುಕುಳ

By Govindaraj SFirst Published Aug 4, 2022, 12:59 PM IST
Highlights

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಬುಧವಾರ ಅನಾವರಣಗೊಂಡಿತು. ಜಿಪಂ ಸಭಾಂಗಣದಲ್ಲಿ ನಡೆದ ಕುಂದುಕೊರತೆ ಆಲಿಸುವ ಸಭೆಯಲ್ಲಿ ಗ್ರಾಪಂ ಪೌರ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು. 

ಮೈಸೂರು (ಆ.04): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಬುಧವಾರ ಅನಾವರಣಗೊಂಡಿತು. ಜಿಪಂ ಸಭಾಂಗಣದಲ್ಲಿ ನಡೆದ ಕುಂದುಕೊರತೆ ಆಲಿಸುವ ಸಭೆಯಲ್ಲಿ ಗ್ರಾಪಂ ಪೌರ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನೀಡುತ್ತಿಲ್ಲ. ಕಡಿಮೆ ಸಂಬಳವೂ ಸಕಾಲದಲ್ಲಿ ದೊರೆಯುತ್ತಿಲ್ಲ. ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ದುಡಿಸಿಕೊಳ್ಳಲಾಗುತ್ತಿದೆ. ವರ್ಷದಲ್ಲಿ ಐದು ರಜೆಯನ್ನೂ ನೀಡದೇ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ 256 ಗ್ರಾಪಂಗಳಿವೆ. ಇಲ್ಲಿ 323 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 95 ನೌಕರರು ಮಾತ್ರ ಅನುಮೋದನೆ ದೊರೆತಿದೆ. ಉಳಿದವರು ಅನುಮೋದನೆ ದೊರೆತಿಲ್ಲ. ಅನುಮೋದನೆ ನೀಡಲು ಏನು ತೊಂದರೆ ಎಂದು ಪೌರಕಾರ್ಮಿಕ ಸಂಘದ ಮುಖಂಡ ರಾಜು ಪ್ರಶ್ನಿಸಿದರು. ನಗರ ಪಾಲಿಕೆಯಲ್ಲಿ 700 ಜನರಿಗೆ ಒಬ್ಬ ಪೌರಕಾರ್ಮಿಕ ಇದ್ದರೆ, ಗ್ರಾಪಂಗಳಲ್ಲಿ 5 ಸಾವಿರ ಜನರಿಗೆ ಒಬ್ಬ ಪೌರಕಾರ್ಮಿಕ ಕೆಲಸ ಮಾಡುತ್ತಿದ್ದಾರೆ. ಒಂದು ಪಂಚಾಯಿತಿಗೆ 5-6 ಗ್ರಾಮಗಳು ಬರುತ್ತಿವೆ. ಒಬ್ಬ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸಬಹುದೇ? ಎಂದು ಪ್ರಶ್ನಿಸಿದರು.

ನಾಗರಹೊಳೆ ಅರಣ್ಯದಲ್ಲಿ 8 ವರ್ಷದ ಹುಲಿ ಶವ ಪತ್ತೆ

ಬಿಬಿಎಂಪಿ, ನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ವಿದ್ಯಾರ್ಹತೆ ನಿಗದಿಪಡಿಸಿಲ್ಲ. ಆದರೆ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಓದಿದವರು ಪೌರಕಾರ್ಮಿಕ ವೃತ್ತಿಗೆ ಬರುವರೇ? ಇದನ್ನು ರದ್ದುಪಡಿಬೇಕು ಎಂದು ರಾಜು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಪೂರ್ಣಿಮಾ ಅವರು, ವಿದ್ಯಾರ್ಹತೆ ರದ್ದುಪಡಿಸುವ ಸಂಬಂಧ ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ವಿದ್ಯಾರ್ಹತೆಯ ಮಾನದಂಡ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಪಿಡಿಒ ಕಿರುಕುಳ: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಪಿಡಿಒ ಕಿರುಕುಳ ನೀಡುತ್ತಿದ್ದಾರೆ. ಭಾನುವಾರವೂ ಕೆಲಸಕ್ಕೆ ಬರಲು ತಿಳಿಸುತ್ತಾರೆ. ಬೆಳಗ್ಗೆ 5 ರಿಂದ ಸಂಜೆ 5ರವರೆಗೆ ಕೆಲಸ ಮಾಡುವಂತೆ ಸೂಚಿಸುತ್ತಾರೆ. ವರ್ಷದಲ್ಲಿ ಐದು ದಿನಗಳ ರಜೆಯನ್ನೂ ನೀಡುತ್ತಿಲ್ಲ ಪೌರಕಾರ್ಮಿಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಕೃಷ್ಣಂ ರಾಜು, 8 ಗಂಟೆ ಮಾತ್ರ ಕೆಲಸ ಮಾಡಬೇಕು. ಹೆಚ್ಚುವರಿಯಾಗಿ ಕೆಲಸ ಮಾಡಿದರೆ ಅಧಿಕ ಭತ್ಯೆ ನೀಡಬೇಕಾಗುತ್ತದೆ. ಈ ಬಗ್ಗೆ ಪರಿಶೀಲಿಸುವಂತೆ ನಂಜನಗೂಡು ಇಒಗೆ ಸೂಚಿಸಿದರು.

ಚಾಮುಂಡಿ ಬೆಟ್ಟದಲ್ಲಿ ವಾಸಿಸುವ ಪೌರಕಾರ್ಮಿಕರಿಗ ಮನೆಗಳ ಹಕ್ಕುಪತ್ರ ನೀಡಿಲ್ಲ. ಇದರಿಂದಾಗಿ ಬಹಳ ತೊಂದರೆ ಅನುಭವಿಸುತ್ತಿರುವುದಾಗಿ ಅವಲತ್ತುಕೊಂಡರು. ಜಿಪಂ ಸಿಇಒ ಪೂರ್ಣಿಮಾ ಅವರು, ಚಾಮುಂಡಿಬೆಟ್ಟಮೀಸಲು ಅರಣ್ಯವಾಗಿದ್ದು, ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಒಂದು ವೇಳೆ ಚಾಮುಂಡಿಬೆಟ್ಟದಲ್ಲಿ ಜಾಗ ದೊರೆಯದಿದ್ದರೆ ಪಯಾರ್ಯವಾಗಿ ಜಾಗ ಗುರುತಿಸಿ ನೀಡುವಂತೆ ಮೈಸೂರು ಇಒ ರಮೇಶ್‌ ಅವರಿಗೆ ನಿರ್ದೇಶನ ನೀಡಿದರು.

ಸರ್ಕಾರ ನಡೆಸಲು ಆಗದಿದ್ದರೆ ರಿಸೈನ್‌ ಆ್ಯಂಡ್‌ ಗೆಟ್‌ಔಟ್‌: ಸಿದ್ದರಾಮಯ್ಯ

ಮನೆ ಕೊಡಿ: ಮೈಸೂರು ತಾಲೂಕಿನ ಬೀರಿಹುಂಡಿ ಗ್ರಾಪಂಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್‌, ತಮಗೊಂದು ಸೂರು ಒದಗಿಸುವಂತೆ ಮನವಿ ಮಾಡಿದರು. ಬೋಗಾದಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದೇನೆ. ಬರುವ ಅಲ್ಪಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ದಯಮಾಡಿ ಬೀರಿಹುಂಡಿ ವ್ಯಾಪ್ತಿಯಲ್ಲಿ ವಾಸಕ್ಕೊಂದು ಮನೆ ನಿರ್ಮಿಸಿಕೊಡಬೇಕೆಂದು ಕೋರಿದರು.

click me!