ಹಗರಿಬೊಮ್ಮನಹಳ್ಳಿ: ಹನಸಿ-ಕಣವಿನಾಯಕನಹಳ್ಳಿ ರಸ್ತೆ ಯಾವ ಇಲಾಖೆಗೆ ಸಂಬಂಧಿಸಿದ್ದು?

By Suvarna NewsFirst Published Dec 14, 2019, 11:34 AM IST
Highlights

ಹಗರಿಬೊಮ್ಮನಹಳ್ಳಿ ತಾಪಂ ಸಭೆಯಲ್ಲಿ ಪ್ರಸ್ತಾಪ| ಅಧಿಕಾರಿಗಳ ಉತ್ತರದಿಂದ ತಬ್ಬಿಬ್ಬಾದ ಅಧ್ಯಕ್ಷರು|ಈ ರಸ್ತೆ ಸುಮಾರು 1955ಕ್ಕೂ ಮುಂಚಿತವಾಗಿ ಹಗರಿಬೊಮ್ಮನಹಳ್ಳಿಗೆ ಕೂಡ್ಲಿಗಿಯಿಂದ ಒಳರಸ್ತೆಯಾಗಿ ನಿರ್ಮಾಣವಾಗಿತ್ತು| ಹತ್ತಾರು ವರ್ಷಗಳ ಕೆಳಗೆ ಅಭಿವೃದ್ಧಿಕೂಡ ಕಂಡಿತ್ತು| ಇಂದು ಸಂಪೂರ್ಣ ಹದಗೆಟ್ಟು ಅಸ್ತಿ ಪಂಜರದಂತಾಗಿದೆ|

ಹಗರಿಬೊಮ್ಮನಹಳ್ಳಿ[ಡಿ.14]: ತಾಲೂಕಿನ ಹನಸಿ-ಕಣವಿನಾಯಕನಹಳ್ಳಿ ಗ್ರಾಮಗಳ ಮಧ್ಯೆದಲ್ಲಿರುವ ಪ್ರಮುಖ ರಸ್ತೆ ದುರಸ್ತಿಯಲ್ಲಿದ್ದು, ವಾಹನಗಳ ಓಡಾಟಕ್ಕೂ ತೊಂದರೆಯಾಗಿರುವ ಈ ರಸ್ತೆ ಯಾವ ಇಲಾಖೆಗೆ ಸೇರಿದ್ದು ಎನ್ನುವುದೇ ಒಂದು ಯಕ್ಷಪ್ರಶ್ನೆಯಾಗಿದೆ!

ತಾಪಂ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ನಾಗಮ್ಮ ಹದಗೆಟ್ಟಿರುವ ರಸ್ತೆಯ ಕುರಿತು ಪ್ರಸ್ತಾಪಿಸಿ ಅಧಿಕಾರಿಗಳ ಗಮನ ಸೆಳೆದರು. ಇದ್ದಕ್ಕಿದ್ದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ಆ ರಸ್ತೆ ಎಲ್ಲಿ ಬರುತ್ತೆ, ನಮ್ಮ ಇಲಾಖೆಗೆ ಬರಲ್ಲ, ನಮಗೆ ಒಳಪಡುವುದಿಲ್ಲ ಎಂದು ಹೇಳುವ ಮಾತನ್ನು ಕೇಳಿದ ಅಧ್ಯಕ್ಷರು ತಬ್ಬಿಬ್ಬಾದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ರಸ್ತೆ ಸುಮಾರು 1955ಕ್ಕೂ ಮುಂಚಿತವಾಗಿ ಹಗರಿಬೊಮ್ಮನಹಳ್ಳಿಗೆ ಕೂಡ್ಲಿಗಿಯಿಂದ ಒಳರಸ್ತೆಯಾಗಿ ನಿರ್ಮಾಣವಾಗಿತ್ತು. ಹತ್ತಾರು ವರ್ಷಗಳ ಕೆಳಗೆ ಅಭಿವೃದ್ಧಿಕೂಡ ಕಂಡಿತ್ತು. ಇಂದು ಸಂಪೂರ್ಣ ಹದಗೆಟ್ಟು ಅಸ್ತಿ ಪಂಜರದಂತಾಗಿದೆ. ಈ ರಸ್ತೆ ಪಟ್ಟಣದಿಂದ ಮಾದೂರು ಗ್ರಾಮದ ಮೂಲಕ ಉಪ್ಪಾರಗಟ್ಟಿಗೆ ಹೋಗಿ, ಮುಂದೆ ಕಣವಿನಾಯಕನಹಳ್ಳಿ ಹಾಗೂ ಹನಸಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಹನಸಿಯಿಂದ ತಾಲೂಕು ಕೇಂದ್ರಕ್ಕೆ ಸುಮಾರು ಐದಾರು ಕಿಮೀಗೂ ಹೆಚ್ಚು ಉಳಿತಾಯವಾಗುತ್ತದೆ. ಅದೇ ಹನಸಿಯಿಂದ ದಶಮಾಪುರ ಮೂಲಕ ಪಟ್ಟಣಕ್ಕೆ ಬಂದರೆ ಸುತ್ತುಹಾಕಿಕೊಂಡು ಬರುವಂತ ಪರಿಸ್ಥಿತಿ ಇದೆ.

ಈ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಈ ಭಾಗದ ಸಾರ್ವಜನಿಕರು ಅನಿವಾರ್ಯವಾಗಿ ಸುತ್ತುಹಾಕಿಕೊಂಡು ಪಟ್ಟಣಕ್ಕೆ ತಲುಪುತ್ತಾರೆ. ಇದರಿಂದ ಕಣವಿನಾಯಕನಹಳ್ಳಿ ಸಾರ್ವಜನಿಕರಿಗೆ ಹನಸಿ ಆಸ್ಪತ್ರೆಗೆ ಹೋಗಬೇಕಾದರೂ ತೊಂದರೆಯಾಗುತ್ತಿದೆ. ರಸ್ತೆ ಹದಗೆಟ್ಟಿರುವ ಜೊತೆಗೆ ಸಂಪೂರ್ಣ ಜಂಗಲ್‌ ಬೆಳೆದು ಅಪಾಯ ತಂದೊಡ್ಡುವಂತಿದೆ. ಇದರಿಂದ ಶಾಲಾ-ಕಾಲೇಜ್‌ ವಿದ್ಯಾರ್ಥಿಗಳೂ ಪರದಾಡುವಂತಾಗಿದೆ. ಜೊತೆಗೆ ಸರ್ಕಾರಿ ಬಸ್‌ ಹಾಗೂ ಖಾಸಗಿ ವಾಹನಗಳ ಸಂಚಾರವೂ ಇಲ್ಲದಂತಾಗಿ ಸುತ್ತುಹಾಕುವುದು ಯಮಯಾತನೆಯಾಗಿದೆ.

ಪರಿಸ್ಥಿತಿ ಹೀಗಿರುವಾಗ ಇಲ್ಲಿಯ ಲೋಕೋಪಯೋಗಿ ಇಲಾಖೆ ಈ ರಸ್ತೆ ನಮಗೆ ಸೇರಿದ್ದಲ್ಲ ಎಂದು ಹೇಳುತ್ತಿದೆ. ಜಿಪಂ ಅಧಿಕಾರಿಗಳು ಈ ರಸ್ತೆ ಎಲ್ಲಿ ಬರುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅಲ್ಲದೆ, ಇದು ನಮಗೆ ಸೇರಿದ್ದಲ್ಲ ಎಂದು ತಳ್ಳಿ ಹಾಕುತ್ತಾರೆ. ಅದರಂತೆ ಗ್ರಾಪಂ ಆಡಳಿತ ಅಧಿಕಾರಿ ನಮಗೆ ಈ ಪ್ರಮುಖ ರಸ್ತೆ ಒಳಪಡುವುದಿಲ್ಲ ಎಂದು ತಳ್ಳಿ ಹಾಕುತ್ತಾರೆ. ಹಾಗಾದರೆ ಈ ರಸ್ತೆ ಯಾರಿಗೆ ಸೇರಿದ್ದು ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಶಾಸಕರು ಇತ್ತ ಗಮನ ಹರಿಸಲಿ:

ಇಂಥ ಹದಗೆಟ್ಟರಸ್ತೆಗಳು ಪಟ್ಟಣ ಸೇರಿದಂತೆ, ತಾಲೂಕಿನೆಲ್ಲೆಡೆ ಸಾಕಷ್ಟಿವೆ. ಕ್ಷೇತ್ರದ ಶಾಸಕ ಎಸ್‌. ಭೀಮಾನಾಯ್ಕ ಈ ಬಗ್ಗೆ ಗಮನ ಹರಿಸಬೇಕಾಗಿದೆ. ರಸ್ತೆಗಳ ಅಭಿವೃದ್ಧಿ ಕೂಡ ಶಾಸಕರ ಸಾಧನೆ ಸಾರುತ್ತದೆ. ಆದರೆ, ಕ್ಷೇತ್ರದ ಜನಪ್ರತಿನಿಧಿಗಳ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತಿದ್ದಾರೆ. ಕೂಡಲೆ ತಾಲೂಕಿನೆಲ್ಲೆಡೆ ಇರುವ ಹಡಗೆಟ್ಟರಸ್ತೆಗಳ ರಿಪೇರಿ, ಅಭಿವೃದ್ಧಿಗೊಳ್ಳಬೇಕಿದೆ.

ಈ ರಸ್ತೆ ವಾಹನಗಳ ಸಂಚಾರಕ್ಕೂ ಮೊದಲು ನಿರ್ಮಾಣವಾಗಿದ್ದು, ನಂತರದ ದಿನಗಳಲ್ಲಿ ಪ್ರಮುಖ ರಸ್ತೆಯಾಗಿ ಮಾರ್ಪಟ್ಟಿತು. ಇತ್ತೀಚಿಗೆ ರಸ್ತೆ ಸಂಪೂರ್ಣ ತಗ್ಗು-ಗುಂಡಿಗಳಿಂದ ತುಂಬಿ ಈ ಭಾಗದವರಿಗೆ ತೊಂದರೆಯಾಗಿದೆ. ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಇಲಾಖೆಗಳ ಸಂಪೂರ್ಣ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ. ಕೂಡಲೆ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಹನಸಿ  ಮುಖಂಡ ಯು. ಸಿದ್ದೇಶ ಅವರು ಆಗ್ರಹಿಸಿದ್ದಾರೆ. 

click me!