Mysur : ರಾಜ್ಯದಲ್ಲಿ ಶಾಲಾ ಶಿಕ್ಷಣ ದಿಕ್ಕು ತಪ್ಪುತ್ತಿದೆ

By Kannadaprabha NewsFirst Published Oct 23, 2022, 4:52 AM IST
Highlights

ಶಾಲಾ ಶ್ರೇಯೋಭಿವೃದ್ಧಿಗಾಗಿ ಪೋಷಕರಿಂದ . 100 ಹಣ ಸಂಗ್ರಹಿಸಿವು ಆದೇಶವನ್ನು ಸರ್ಕಾರವು ಈ ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಆಗ್ರಹಿಸಿದರು.

ಮೈಸೂರು (ಅ.23): ಶಾಲಾ ಶ್ರೇಯೋಭಿವೃದ್ಧಿಗಾಗಿ ಪೋಷಕರಿಂದ . 100 ಹಣ ಸಂಗ್ರಹಿಸಿವು ಆದೇಶವನ್ನು ಸರ್ಕಾರವು ಈ ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, (Covid)  ಬಂದಾಗಿನಿಂದ ಮಕ್ಕಳು ಸರಿಯಾಗಿ ಶಾಲೆಗೆ (School) ಬರ್ತಿಲ್ಲ.

ಅವರನ್ನ ಕರೆತರೋ ಕೆಲಸ ಆಗ್ತಿಲ್ಲ. ಇಲಾಖೆಯೂ ಯಾವ ಕೆಲಸ ಮಾಡ್ತಿಲ್ಲ. ಕನ್ನಡ ಭಾಷೆ ಮುಗಿದು ಹೋಗುತ್ತಿದೆ. ಕನ್ನಡ ಶಾಲೆಗಳು ಮುಚ್ಚೊಗ್ತಿವೆ. ಮಕ್ಕಳಿಗೆ ಶಿಕ್ಷಣ ಕೋಡೋದು ಸರ್ಕಾರದ ಕೆಲಸ. ಅಂತದ್ರಲ್ಲಿ ಮಕ್ಕಳ ಶಿಕ್ಷಣ ನೀವೇ ಕಿತ್ಕೊತೀರಾ? ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತೆ, ಕನ್ನಡ ಶಾಲೆಗಳಿಗೆ ಕಂಟಕ. ಯಾವುದೇ ಕಾರಣಕ್ಕೂ ಈ ಆದೇಶ ಇರಬಾರದು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಶಾಲಾ ಶಿಕ್ಷಣ ದಿಕ್ಕು ತಪ್ಪುತ್ತಿದೆ. ಸರ್ಕಾರಿ ಶಾಲೆಗೆ . 100 ಶುಲ್ಕ ಯಾಕೆ? ಸರ್ಕಾರಿ ಶಾಲೆಗಳಲ್ಲಿ ಓದೋರು ಆರ್ಥಿಕವಾಗಿ ಹಿಂದೆ ಇರೋರು, ಶೋಷಿತರ ಮಕ್ಕಳು. ಇವತ್ತು ಸರ್ಕಾರಿ ಶಾಲೆಗಳನ್ನ ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಶಾಲೆ ಮುಚ್ಚೊದಕ್ಕೆ ಏನೇನು ಹುನ್ನಾರು ಬೇಕು ಅದೆಲ್ಲಾ ನಡೆಯುತ್ತಿದೆ ಎಂದರು.

ಹಿಂದೆ ಸರ್ಕಾರದಿಂದಲೇ ಶಾಲಾ ನಿರ್ವಹಣೆಗೆ ವರ್ಷಕ್ಕಿಷ್ಟುಅಂತಾ ಅನುದಾನ ನೀಡಲಾಗಿತ್ತು. ಈಗ ಅದೆಲ್ಲವನ್ನು ನಿಲ್ಲಿಸಿದ್ದಾರೆ. ಈಗ ನಿರ್ವಹಣಾ ವೆಚ್ಚ ಅಂತೆ . 100 ನಿಗದಿ ಮಾಡಿದ್ದಾರೆ. ಸರ್ಕಾರಿ ಶಿಕ್ಷಣ ಹಳಿ ತಪ್ಪಿದೆ. ಇದಕ್ಕೆ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಹೊಣೆಗಾರರು, ಕೂಡಲೇ ಈ ಸುತ್ತೋಲೆ ವಾಪಸ್‌ ಪಡೆಯಬೇಕು ಎಂದರು.

ಸರ್ಕಾರದಲ್ಲಿ ಹಣ ಇಲ್ಲದಿದ್ದರೇ ದಾನಿಗಳನ್ನು ಹಿಡಿಯಿರಿ. ಅದನ್ನು ಬಿಟ್ಟು ಬಡ ಪೋಷಕರಿಗೆ ನಿರ್ವಹಣೆಗೆ ಹಣ ಕೊಡಿ ಎಂದರೆ?. ಇದರ ಪರಿಣಾಮ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಇದೆ ತಾನೇ ಸರ್ಕಾರಕ್ಕೂ ಬೇಕಾಗಿರುವುದು ಎಂದು ಅವರು ಕುಟುಕಿದರು.

ಕೋವಿಡ್‌ ಸಂದರ್ಭದಲ್ಲಿ ಸಾವಿರಾರು ಮಕ್ಕಳು ಶಾಲೆಗಳಿಂದ ಹೊರಗುಳಿದರು. ನಂತರ ಹೊಟ್ಟೆಪಾಡಿಗಾಗಿ ಮಕ್ಕಳು ಕಾರ್ಖಾನೆ, ಹೋಟೆಲ್‌ ಮತ್ತಿತರ ಕಡೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೋವಿಡ್‌ ನಂತರವೂ ಆ ಮಕ್ಕಳು ಶಾಲೆಗಳ ಕಡೆ ಮುಖ ಹಾಕಿಲ್ಲ. ಇನ್ನೂ ಕೆಲಸಕ್ಕೆ ಹೋಗುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ? ಅದಕ್ಕೆ ಜವಾಬ್ದಾರಿ ಇಲ್ಲವೇ? ಒಂದು ಕಡೆ ಕನ್ನಡ ಭಾಷೆ ನಶಿಸುತ್ತಿದೆ ಮತ್ತೊಂದು ಕಡೆ ಸರ್ಕಾರವೇ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ. ಆರ್‌ಟಿಐ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.

ಹಣ ವಸೂಲಿ ಕಡ್ಡಾಯ ಮಾಡಿ ಆದೇಶ ಹೊರಡಿಸಿಲ್ಲ, ಕೇವಲ ಎಸ್‌ಡಿಎಂಸಿ ಒಪ್ಪಿಗೆ ಮೇರೆಗೆ ಸುತ್ತೋಲೆ ಹೊರಡಿಸಿದೆ ಎಂಬ ಶಿಕ್ಷಣ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌. ವಿಶ್ವನಾಥ್‌ ಅವರು, ಸುತ್ತೋಲೆ ಎನ್ನುವುದು ಆಡಳಿತ ಭಾಷೆ. ಒಮ್ಮೆ ಹೊರಡಿಸಿದರೆ ವಸೂಲಿ ಕಡ್ಡಾಯ ಮಾಡಿದಂತೆ ಎಂದರು.

ಬಾಕ್ಸ್‌...

ಪ್ರತಾಪ್‌ ಸಿಂಹ ಬಗ್ಗೆ ವ್ಯಂಗ್ಯ

ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌. ವಿಶ್ವನಾಥ್‌ ಅವರು, ಪ್ರತಾಪ್‌ ಸಿಂಹ ಮೈಸೂರು ಮಹಾರಾಜರಿಗಿಂತ ದೊಡ್ಡವರು. ಅವರಿಗಿಂತ ನಾನೇ ಜಾಸ್ತಿ ಕೆಲಸ ಮಾಡಿದ್ದೇನೆ ಅಂತಾ ಹೇಳಿದ್ದಾರೆ. ಅವರ ಬಗ್ಗೆ ನಾನೇನು ಮಾತಾಡಲಿ. ಅವರು ದೊಡ್ಡ ವ್ಯಕ್ತಿ ಎಂದು ವ್ಯಂಗ್ಯವಾಡಿದರು.

ಅಕ್ಷರ, ಅನ್ನ, ಆರೋಗ್ಯ ನೀಡುವುದು ಸರ್ಕಾರದ ಆದ್ಯತೆ ಆಗಬೇಕು. ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕಾಗಿದೆ. ಎತ್ತರದ ಪ್ರತಿಮೆಗಳನ್ನು ನಿಲ್ಲಿಸುವದರಿಂದ ಯಾವುದೇ ದೇಶ ಪ್ರಗತಿ ಹೊಂದುವುದಿಲ್ಲ. ಶಿಕ್ಷಣ ಮತ್ತು ಆರೋಗ್ಯದ ಮೇಲೆ ಆ ದೇಶದ ಪ್ರಗತಿ ನಿಂತಿದೆ.

- ಎಚ್‌. ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯರು

click me!