ಸಿಎಂ ಬರ ವೀಕ್ಷಣೆ ನಂತರ ಅಳಿದುಳಿದ ಬೆಳೆಯೂ ಹಾಳಾಯ್ತು ಅಂತ ರೈತನ ಗೋಳಾಟ

Published : Sep 01, 2026, 06:01 PM IST
dk shivakumar

ಸಾರಾಂಶ

ಗದಗ ಜಿಲ್ಲೆಯಲ್ಲಿ ಸಿಎಂ ಬರ ವೀಕ್ಷಣೆ ವೇಳೆ ಅಧಿಕಾರಿಗಳು ಮತ್ತು ಪೊಲೀಸರ ಕಾಲ್ತುಳಿತಕ್ಕೆ ರೈತನ ಅಳಿದುಳಿದ ಸೂರ್ಯಕಾಂತಿ ಬೆಳೆ ನಾಶವಾಗಿದೆ ಎಂದು ರೈತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ.

ಗದಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇವತ್ತು ಗದಗ ಜಿಲ್ಲೆಯ ಬರಗಾಲ ಪರಿಸ್ಥಿತಿಯನ್ನು ಅವಲೋಕಿಸಿದರು. ಬರಪೀಡಿತ ಸ್ಥಳಗಳಿಗೆ ಅಧಿಕಾರಿಗಳ ಜೊತೆ ಖುದ್ದು ಭೇಟಿ ನೀಡಿ, ರೈತರ ಸಂಕಷ್ಟಗಳನ್ನು ಆಲಿಸಿದರು. ಈ ವೇಳೆ ಸೂರ್ಯಕಾಂತಿ ಬೆಳೆಯುವ ರೈತರೊಬ್ಬರು ಗಂಭೀರ ಆರೋಪ ಮಾಡಿದರು.

ಬರದಿಂದ ಕಂಗಾಲಾಗಿದ್ದ ರೈತನ ಜಮೀನಿಗೆ ಸಿಎಂ ಮತ್ತು ಅಧಿಕಾರಿಗಳ ದಂಡು ಲಗ್ಗೆ ಇಟ್ಟಿದ್ದರಿಂದ, ಕೈಗೆ ಬರಬೇಕಿದ್ದ ಅಲ್ಪಸ್ವಲ್ಪ ಬೆಳೆಯೂ ನಾಶವಾಗಿದೆ ಅನ್ನೋದು ಈ ರೈತನ ಆರೋಪವಾಗಿದೆ. ಜಿಲ್ಲೆಯ ಕದಾಂಪೂರದ ರೈತ ಮಂಜುನಾಥ ಗಾವರವಾಡ ಮಾಡಿದ ಆರೋಪದ ಪ್ರಕಾರ, ಮಂಜುನಾಥ್ ಅವರು ಮೂರು ಎಕರೆಯಲ್ಲಿ ಸೂರ್ಯಕಾಂತಿ ಬೆಳೆದಿದ್ದರು. ಮಳೆ ಇಲ್ಲದೆ ಬೆಳೆ ಒಣಗುತ್ತಿದ್ದರೂ, ಕನಿಷ್ಠ 4 ಕ್ವಿಂಟಲ್ ಆದರೂ ಫಸಲು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ ಸಿಎಂ ಬರ ವೀಕ್ಷಣೆ ವೇಳೆ ಅವರ ಜೊತೆ ಬಂದಿದ್ದ ಅಧಿಕಾರಿಗಳು ಮತ್ತು ಪೊಲೀಸರ ಕಾಲ್ತುಳಿತಕ್ಕೆ ಸಿಕ್ಕಿ ಸೂರ್ಯಕಾಂತಿ ಬೆಳೆಗೆ ಹಾನಿಯಾಗಿದೆ. ಬರದಿಂದ ಈಗಾಗಲೇ ಬೆಳೆ ಕಳೆದುಕೊಂಡಿದ್ದೇವೆ. ಈಗ ಅಳಿದುಳಿದ ಬೆಳೆಯೂ ಇವರ ಕಾಲ್ತುಳಿತಕ್ಕೆ ಸಿಕ್ಕಿ ಹೋಯಿತು ಎಂದು ರೈತ ಮಂಜುನಾಥ್ ಗೋಳು ತೋಡಿಕೊಂಡಿದ್ದಾರೆ. ಅಚ್ಚರಿಯೆಂದರೆ.. ಜಮೀನಿಗೆ ಭೇಟಿ ನೀಡಿದ ಡಿಕೆಶಿ ಅವರು ಅಲ್ಲಿನ ರೈತರೊಂದಿಗೆ ಮಾತನಾಡದೆ ತೆರಳಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

ಅಧಿಕಾರಿಗಳ ಜೊತೆ ಸಭೆ

ಬರ ವೀಕ್ಷಣೆಯ ನಂತರ ಸಿಎಂ ಗದಗ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರು ಮತ್ತು ಮೇವಿನ ಲಭ್ಯತೆಯ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಉಸ್ತುವಾರಿ ಸಚಿವ ಬಸವರಾಜ್ ರಾಯರೆಡ್ಡಿ, ಶಾಸಕರಾದ ಎಚ್.ಕೆ. ಪಾಟೀಲ್, ಸಿ.ಸಿ. ಪಾಟೀಲ್, ಚಂದ್ರು ಲಮಾಣಿ, ಎನ್.ಎಚ್. ಕೋನರೆಡ್ಡಿ ಹಾಗೂ ಎಸ್.ವಿ. ಸಂಕನೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಒಂದೆಡೆ ಅಧಿಕಾರಿಗಳು ಸಭೆಯಲ್ಲಿ ಅಂಕಿ-ಅಂಶಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಬೆಳೆ ಕಳೆದುಕೊಂಡ ರೈತ ಮಂಜುನಾಥ್ ತನ್ನ ಜಮೀನಿನ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಬರ ವೀಕ್ಷಣೆಗೆ ಬಂದ ಸರ್ಕಾರ ರೈತರಿಗೆ ನ್ಯಾಯ ಒದಗಿಸುತ್ತದೆಯೇ ಅಥವಾ ಕೇವಲ ಪ್ರಚಾರಕ್ಕೆ ಸೀಮಿತವಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

Traffic Sign Board: ಬೆಂಗಳೂರಿನಲ್ಲಿ ಅಳವಡಿಸಿರುವ ಈ ಟ್ರಾಫಿಕ್ ಸೈನ್ ಬೋರ್ಡ್ ಅರ್ಥವೇನು ಗೊತ್ತಾ?
ಆಪ್ತ ಗೆಳೆಯನ ಭೇಟಿಗಾಗಿ ಜೈಲಿಗೆ ಬಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್