Hampi Utsav: ಹಂಪಿ ಉತ್ಸವಕ್ಕೆ ಮೆರುಗು ನೀಡಿದ ಫಲಪುಷ್ಪ ಪ್ರದರ್ಶನ

By Kannadaprabha NewsFirst Published Jan 28, 2023, 11:53 AM IST
Highlights

ವಿಜಯನಗರ ಸಾಂಸ್ಕೃತಿಕ ಹಬ್ಬವಾದ ಹಂಪಿ ಉತ್ಸವದಲ್ಲಿ ಮಾತಂಗ ಪರ್ವತ ಮೈದಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಪ್ರೇಕ್ಷಕರ ಕಣ್ಮನ ತಣಿಸಿತು.

ಬಿ.ರಾಮಪ್ರಸಾದಗಾಂಧಿ

ಹಂಪಿ (ಜ.28) : ವಿಜಯನಗರ ಸಾಂಸ್ಕೃತಿಕ ಹಬ್ಬವಾದ ಹಂಪಿ ಉತ್ಸವದಲ್ಲಿ ಮಾತಂಗ ಪರ್ವತ ಮೈದಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಪ್ರೇಕ್ಷಕರ ಕಣ್ಮನ ತಣಿಸಿತು.

ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನದ ಗೋಪುರ, ಕಾಂತಾರ ದೈವ ಚಿತ್ರ, ಪುನೀತ್‌ ರಾಜಕುಮಾರ, ಗ್ರಾಮೀಣ ಸೋಗಡನ್ನು ಬೀರುವ ನೈಸರ್ಗಿಕ ಗುಡಿಸಲು, ವರ್ಟಿಕಲ್‌ ಗಾರ್ಡನ್‌, ಹೂವಿನ ಅಲಂಕಾರದಲ್ಲಿ ಬಾತುಕೋಳಿ, ಒಂದು ಜಿಲ್ಲೆ, ಒಂದು ಉತ್ಪನ್ನ, ಹನಿ ನೀರಾವರಿ, ನೈಸರ್ಗಿಕ ರಂಗೋಲಿ, ಹೀಗೆ ವೈವಿಧ್ಯಮಯ ಫಲಪುಷ್ಪ ಪ್ರದರ್ಶನಗೊಂಡಿತು.

ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ, ಗದುಗಿನ ಪುಟ್ಟರಾಜ ಗವಾಯಿಗಳು, ಸಿದ್ದಗಂಗಾ ಶಿವಕುಮಾರ ಸ್ವಾಮಿಗಳು ವಿಶೇಷ ರಂಗೋಲಿಯಲ್ಲಿ ಅರಳಿದ ಚಿತ್ರಗಳು ಅತ್ಯಾಕರ್ಷಕವಾಗಿದ್ದವು. ವಿಜಯನಗರ ಜಿಲ್ಲೆಯಲ್ಲಿ ಬರುವ ಆರು ತಾಲೂಕುಗಳಲ್ಲಿ ಬೆಳೆಯುವ ಬೆಳೆಗಳ ಪ್ರದರ್ಶನ ಸಹ ನೋಡುಗರಿಗೆ ಮುದ ನೀಡಿದವು. ಹಡಗಲಿಯ ಮಲ್ಲಿಗೆ, ಹರಪನಹಳ್ಳಿ ಟೊಮೋಟೊ, ಮೆಣಸಿನಕಾಯಿ, ಹೊಸಪೇಟೆಯ ಬಾಳೆ, ಕೊಟ್ಟೂರಿನ ಈರುಳ್ಳಿ, ಕೂಡ್ಲಿಗಿಯ ಹುಣಸೆ, ಬೆಲ್ಲ, ಹಗರಿಬೊಮ್ಮನಹಳ್ಳಿಯ ದಾಳಿಂಬೆ ಬೆಳೆಗಳ ಪ್ರದರ್ಶನ ವಿಜಯನಗರ ಜಿಲ್ಲೆಯ ನೆಲದ ಸೊಗಡನ್ನು ಬಿತ್ತರಿಸುತ್ತಿದ್ದವು.

Hampi Utsav: ಹಂಪಿ ಆಗಸದಲ್ಲಿ ಲೋಹದ ಹಕ್ಕಿಯ ಹಾರಾಟ!

ಅರಳಿ ಎಲೆಯಲ್ಲಿ ದ.ರಾ.ಬೇಂದ್ರೆ, ಕಾಂತಾರ, ಅಂಬೇಡ್ಕರ, ರಾಜಕುಮಾರ, ಚಿತ್ರಾಕೃತಿಗಳು ಮತ್ತೊಮ್ಮೆ ನೋಡಬೇಕು ಎನಿಸುತ್ತಿದ್ದವು. ಭೂತಕೋಲ ನಿಸರ್ಗ ದೈವದ ಕಾಂತಾರ ಪ್ರೇಕ್ಷಕರ ಅಚ್ಚುಮೆಚ್ಚುಗೆಗೆ ಪಾತ್ರವಾಯಿತು.

ಗತಕಾಲದ ವಜ್ರ, ವೈಢೂರ್ಯ ಸಾಲು ಮಂಟಪದಲ್ಲಿ ರಾರಾಜಿಸುತ್ತಿದ್ದವು. ಒಣ ತೆಂಗಿನ ಕಾಯಿಯಲ್ಲಿ ಮೂಡಿದ ವಿವಿಧ ಕಲಾಕೃತಿಗಳು ಹಾಗೂ ಉಗ್ರನರಸಿಂಹ, ಕೃಷ್ಣದೇವರಾಯ ಮೂರ್ತಿಗಳು ಕಣ್ಣಿಗೆ ಕಟ್ಟುತ್ತಿದ್ದವು, ಕಲ್ಲಂಗಡಿಯಲ್ಲಿ ಅರಳಿದ ವಿವಿಧ ಕಲಾಕೃತಿಗಳು ಸಹ ಆಕರ್ಷಕವಾಗಿದ್ದವು. ಹೂವಿನ ಅಲಂಕಾರದಲ್ಲಿ ಪುರಂದರ ದಾಸರ ಮಂಟಪ ನೋಡಬೇಕು ಎನಿಸುತ್ತಿದ್ದವು.

ಫಲಪುಷ್ಪ ಪ್ರದರ್ಶನ ಮಳಿಗೆಗಳಿಗೆ ಆಗಮಿಸಿದ ಸಾರ್ವಜನಿಕರು ಹಾಗೂ ಪ್ರವಾಸಿಗರು ಒಂದು ಸುತ್ತು ಸುತ್ತಿ ಹೋಗುವಾಗ ವಿಜಯನಗರ ಜಿಲ್ಲೆಯ ವೈಭವವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದರು. ತೋಟಗಾರಿಕೆ ಇಲಾಖೆಯ ಬಳ್ಳಾರಿ, ವಿಜಯನಗರ ಜಿಲ್ಲೆ ಉಪನಿರ್ದೇಶಕ ಎಸ್‌.ಪಿ.ಭೋಗಿರವರು ಫಲಪುಷ್ಪ ಪ್ರದರ್ಶನದ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುತ್ತಿದ್ದರು. ಒಟ್ಟಿನಲ್ಲಿ ಹಂಪಿ ಉತ್ಸವದ ಫಲಪುಷ್ಪ ಪ್ರದರ್ಶನ ಉತ್ಸವಕ್ಕೆ ಕಳೆಕಟ್ಟಿದ್ದಂತು ನಿಜ.

Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

ಫಲಪುಷ್ಪ ನೋಡಿ ಖುಷಿಯಾಗಿದೆ, ವಿರುಪಾಕ್ಷೇಶ್ವರ ಗೋಪುರ, ಭೂತಕೋಲ ನಿಸರ್ಗ ದೈವದ ಕಾಂತರ ಮನಸ್ಸಿಗೆ ಖುಷಿ ಕೊಟ್ಟವು.

ರಾಜೇಶ್ವರಿ, ಧಾರವಾಡ.

click me!