ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್ : ಉಚಿತ ಸೌಲಭ್ಯ

By Kannadaprabha NewsFirst Published Jan 7, 2020, 3:51 PM IST
Highlights

ಬಿಪಿಎಲ್ ಕಾರ್ಡುದಾರರಿಗೆ ಇಲ್ಲಿದೆ ಗುಡ್ ನ್ಯೂಸ್, ಬಿಪಿಎಲ್ ಕಾರ್ಡು ಹೊಂದಿವರಿಗೆ ಇಂತಹ ಸೌಲಭ್ಯಗಳು ಉಚಿತವಾಗಿ ದೊರೆಯಲಿದೆ.

ಯಾದಗಿರಿ [ಜ.07]: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ 5 ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯ ಪ್ರತಿಯೊಬ್ಬರೂ ಆಯುಷ್ಮಾನ್ ಕಾರ್ಡ್ ಮಾಡಿಸಿ, ಯೋಜನೆಯ ಲಾಭ ಪಡೆಯುವಂತಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾರಾವ್ ಸೂಚಿಸಿದರು. 

ಜಿಪಂ ಸಭಾಂಗಣದಲ್ಲಿ ಸೋಮವಾರ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿ, ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ವರ್ಷದಲ್ಲಿ 1.50 ಲಕ್ಷ ರು.ಗಳರೆಗೂ ಸಹ ಪಾವತಿ (ಶೆ.70 ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೆ.30ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಬಾಪೂಜಿ ಸೇವಾ ಕೇಂದ್ರಗಳಲ್ಲಿ ವಿತರಣೆ:  ಎಬಿಎಆರ್‌ಕೆ ಕಾರ್ಡ್ ಅನ್ನು ಗ್ರಾಪಂಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಲು ಈಗಾಗಲೇ ಶಹಾಪುರ ಮತ್ತು ಸುರಪುರ ತಾಲೂಕಿನ ಪಿಡಿಒ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನ ಎಲ್ಲಾ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಜನವರಿ ೮ರಂದು ಬೆಳಿಗ್ಗೆ 11 ಗಂಟೆಗೆ ಯಾದಗಿರಿ ನಗರದ ತಾಪಂ ಸಭಾಂಗಣ ದಲ್ಲಿ ತರಬೇತಿ ಆಯೋಜಿಸಬೇಕು. ಅಲ್ಲದೇ, ಅಂದು ಸಂಜೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಸಾರಬೇಕು. ಜ.9ರಿಂದ ಎಲ್ಲಾ ಗ್ರಾಪಂಗಳಲ್ಲಿ ನೋಂದಣಿ ಆರಂಭಿಸಿ, ಪ್ರತಿದಿನ ಕನಿಷ್ಠ 200 ಕಾರ್ಡ್‌ಗಳನ್ನು ನೋಂದಣಿ ಮಾಡುವಂತೆ
ನಿರ್ದೇಶಿಸಿದರು. 

ಜಿಪಂ ಸಿಇಓ ಅಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪೂರ ಮತ್ತು ಸುರಪೂರ ತಾಲೂಕು ಆಸ್ಪತ್ರೆಗಳು, ವಡಿಗೇರಾ, ಸೈದಾಪೂರ, ಗುರು ಮಠಕಲ್, ಅರಕೇರಾ ಬಿ., ಹುಣಸಗಿ, ದೋರ ನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಯಾದಗಿರಿ, ಶಹಾಪೂರ, ಸುರಪೂರ ನಗ ರ ಆರೋಗ್ಯ ಕೇಂದ್ರಗಳಲ್ಲಿ 10 ರೂ. ಶುಲ್ಕ ಪಡೆದು ನೀಡಲಾಗುವುದು. ಅಲ್ಲದೆ, ಸೇವಾ ಸಿಂಧು ಕೇಂದ್ರ ಗಳಲ್ಲಿ ಕಾಗದದ ಕಾರ್ಡ್‌ಗೆ 10 ರೂ. ಹಾಗೂ ಪ್ಲಾಸ್ಟಿಕ್ ಕಾರ್ಡ್‌ಗೆ 35 ರೂ. ನೀಡಿ ಪಡೆದುಕೊ ಳ್ಳಬಹುದು. ಯಾದಗಿರಿ ತಹಸೀಲ್ ಕಚೇರಿ ಆವರ ಣದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಕೂಡ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಬಿಪಿಎಲ್‌ ಕಾರ್ಡ್‌ ವಾಪಸ್‌ ನೀಡಲು ಮಾಸಾಂತ್ಯದವರೆಗೆ ಗಡುವು!...  

ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಜಿಲ್ಲಾ ನೋಡಲ್ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, ಈ ಯೋಜನೆಯಲ್ಲಿ 1650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯ ಇವೆ. ಸಾಮಾನ್ಯ ದ್ವಿತೀಯ ಹಂತದ 294 ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ಕ್ಲಿಷ್ಟಕರ ದ್ವಿತೀಯ ಹಂತದ 251 ಮತ್ತು ತೃತೀಯ ಹಂತದ 935 ಚಿಕಿತ್ಸಾ ವಿಧಾನಗಳು ಹಾಗೂ 170 ತುರ್ತು ಚಿಕಿತ್ಸೆಗಳನ್ನು ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು. 170 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲ.

ಏಕ ದೇಶ, ಏಕ ಪಡಿತರ ಚೀಟಿ: ಕರ್ನಾಟಕದಲ್ಲಿ ಚಾಲನೆ...

ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು. ಎಬಿಎಆರ್‌ಕೆ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ, ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು, ಉಚಿತ ಸಹಾಯವಾಣಿ ಸಂಖ್ಯೆ 104 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

click me!