ಕೊಪ್ಪಳ: ಹಿರಿಯರ ಸ್ಮರಣಾರ್ಥ ಉಚಿತ ಆಕ್ಸಿಜನ್ ಕಾನಸಂಟ್ರೇಟರ್ ಕೊಡುಗೆ

By Suvarna NewsFirst Published May 23, 2021, 12:30 PM IST
Highlights

* ಡಾ.ವಿಷ್ಣು ಹಯಗ್ರೀವ ಅವರ ಹಿರಿಯರ ಸ್ಮರಣಾರ್ಥ ಉಚಿತವಾಗಿ ಆಕ್ಸಿಜನ್ ಕಾನಸಂಟ್ರೇಟರ್ ಕೊಡುಗೆ
* ನಮ್ಮ ಹನುಮಸಾಗರ ವಾಟ್ಸ್ಆಪ್ ಗ್ರೂಪ್‌ ಯುವಕರು ಹಾಗೂ ಊರಿನ ಪ್ರಮುಖರಿಂದ ಆಕ್ಸಿಜನ್‌ಗೆ ಸಹಾಯಹಸ್ತ 
* ಜನರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಆಕ್ಸಿಜನ್ ಕಾನಸಂಟ್ರೇಟರ್ ಕೊಡುಗೆ
 

ಏಕನಾಥ ಜಿ ಮೆದಿಕೇರಿ

ಕೊಪ್ಪಳ(ಮೇ.23): ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ.ವಿಷ್ಣು ಹಯಗ್ರೀವ ಅವರ ಹಿರಿಯರ ಸ್ಮರಣಾರ್ಥ ಉಚಿತವಾಗಿ ನೀಡಿದ ಮತ್ತು ನಮ್ಮ ಹನುಮಸಾಗರ ವಾಟ್ಸ್ಆಪ್ ಗ್ರೂಪ್‌ನ ಯುವಕರು ನೀಡಿದ ಆಮ್ಲಜನಕ ಪೂರೈಸುವ ಆಕ್ಸಿಜನ್ ಕಾನಸಂಟ್ರೇಟರ್ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಶನಿವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಮ್ಲಜನಕ ಪೂರೈಸುವ ಆಕ್ಸಿಜನ್ ಕಾನಸಂಟ್ರೇಟರ್ ಯಂತ್ರಗಳನ್ನು ಹಸ್ತಾಂತರಿಸಲಾಗಿದೆ.

"

ಬೆಂಗಳೂರಿನ ಹೃದಯರೋಗ ತಜ್ಞ ಮೂಲತಃ ಹನುಮಸಾಗರದ ಡಾ.ವಿಷ್ಣು ಹಯಗ್ರೀವ ಅವರು ಹಿರಿಯರ ಸ್ಮರಣಾರ್ಥವಾಗಿ ಆಮ್ಲಜನಕ ಪೂರೈಸುವ ಆಕ್ಸಿಜನ್ ಕಾನಸಂಟ್ರೇಟರ್ ಯಂತ್ರಗಳನ್ನು ಉಚಿತವಾಗಿ ನೀಡಿದ್ದಾರೆ. 
ಯಾವುದೇ ವ್ಯಾಟ್ಸ್ ಆಪ್ ಗ್ರುಪ್ ಕೇವಲ ಇತರೆ ಮೆಸೇಜ್‌ಗಳನ್ನು ರವಾನಿಸಲು, ಮನರಂಜನೆಗಾಗಿ ಇರುತ್ತದೆ. ಆದರೆ ನಮ್ಮ ಹನುಮಸಾಗರ ವ್ಯಾಟ್ಸ್ಆಪ್ ಗ್ರೂಪ್ ಇಂಥ ಜನರಿಗೆ ಅನುಕೂಲವಾಗುವ ಕಾರ್ಯದಲ್ಲಿ ತೊಡಗಿದ್ದುದು ಪ್ರಶಂಸೆಗೆ ಕಾರಣವಾಗಿದೆ. ನಂತರ ಗ್ರೂಪ್‌ನಲ್ಲಿರುವ ಬಹುತೇಕ ಜನರು ಸಹಾಯಹಸ್ತ ಚಾಚಿದ್ದಾರೆ. 

ಗಂಗಾವತಿ: ಕೋವಿಡ್‌ ಕೇಂದ್ರದಿಂದ ಮನೆಗೆ ಹೋಗಲು ಸೋಂಕಿತರ ನಿರಾಕರಣೆ

ವೈದ್ಯಾಧಿಕಾರಿ ಡಾ.ವಿನಾಯಕ ಪಟ್ಟಣಶೆಟ್ಟಿ, ಡಾ.ಶರಣು ಹವಾಲ್ದಾರ ಸೇರಿದಂತೆ ವ್ಯದ್ಯರ ತಂಡವೂ, ಗ್ರಾಮ ಪಂಚಾಯತಿ, ಪತ್ರಕರ್ತರ ಬಳಗ, ನಮ್ಮ ಹನುಮಸಾಗರ ವ್ಯಾಟ್ಸ್ಆಪ್ ಗ್ರುಪ್, ಗ್ರಾಮದ ಗಣ್ಯರು ಸಹಕಾರ ನೀಡಿದರು. ಒಟ್ಟಿನಲ್ಲಿ ಕೊರೋನಾ ಸೋಂಕಿತರಿಗೆ ಆಮ್ಲಜನಕ ಪೂರೈಸುವ ಇಂಥ ಜನಹಿತ ಕಾರ್ಯ ಪ್ರಶಂಸೆಗೆ ಕಾರಣವಾಯಿತು. ವ್ಯಾಟ್ಸಆಪ್ ಗ್ರೂಪ್‌ನ ಯುವಕರ, ಗ್ರಾಮದ ಹಿರಿಯರ ಈ ಕಾರ್ಯ ಇತರೆ ಯುವಕ ಸಂಘದವರಿಗೆ, ಗ್ರೂಪ್‌ಗಳಿಗೆ, ಇತರೆ ಗ್ರಮಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಪಿಎಸ್‌ಐ ಅಶೋಕ ಬೇವೂರ, ಪಿಡಿಓ ನಿಂಗಪ್ಪ ಮೂಲಿಮನಿ, ಡಾ.ಶರಣು ಹವಾಲ್ದಾರ, ಸೂಚಪ್ಪ ಭೋವಿ ಸೇರಿದಂತೆ ಗ್ರಾ.ಪಂ. ಸದಸ್ಯರು, ಗ್ರಾಮದ ಗಣ್ಯರು ಯುವಕರು ಇತರರು ಇದ್ದರು. 

ತಂದೆ ತಾಯಿ ಸ್ಮರಣಾರ್ಥ ಕೊಡುಗೆ

ಬೆಂಗಳೂರಿನಲ್ಲಿ ನೆಲೆಸಿರುವ ಹನುಮಸಾಗರದ ಹೃದಯರೋಗ ತಜ್ಞ ಡಾ.ವಿಷ್ಣು ಹಯಗ್ರೀವ ಅವರು ತಮ್ಮ ತಂದೆ ದಿ.ನರಸಿಂಹಾಚಾರ್ಯ ಹಯಗ್ರೀವಾಚಾರ್ಯ, ತಾಯಿ ದಿ.ಸುಂದರಾಬಾಯಿ ಚಿಕ್ಕಪ್ಪ ರಾಘವೇಂದ್ರಾಚಾರ್ಯ ಅವರ ನೆನಪಿಗಾಗಿ ಆಕ್ಸಿಜನ್ ಪೂರೈಸುವ ಕಾನ್ಸಂಟ್ರೇಟರ್‌ಗಳನ್ನು ನೀಡಿದ್ದಾರೆ. ಮಾರುತಿ ಆಸ್ಪತ್ರೆ, ಸೇವಾ ಸಂಸ್ಥೆ, ಸರ್ವಮೂಲ ಫೌಂಡೇಷನ್ ಸಾಥ್ ನೀಡಿವೆ.

ನಮ್ಮೂರಿನ ಜನಕ್ಕೆ ಅನುಕೂಲವಾಗಲಿ, ಆಕ್ಸಿಜನ್ ಕೊರತೆಯಿಂದ ಸಂಭವಿಸಬಹುದಾದ ಸಾವನ್ನು ತಪ್ಪಿಸುವ ಸದುದ್ದೇಶದಿಂದ ಈ ಕಾನ್ಸಂಟ್ರೇಟರ್‌ಗಳನ್ನು ನೀಡುತ್ತಿದ್ದು, ಇದರ ಉಪಯೋಗವನ್ನು ಸದ್ವಿನಿಯೋಗ ಮಾಡಿಕೋಳ್ಳಬೇಕು ಎಂದು ಹೃದಯರೋಗ ತಜ್ಞ ಡಾ.ವಿಷ್ಣು ಹಯಗ್ರೀವ ಅವರು ತಿಳಿಸಿದ್ದಾರೆ. 

ಸ್ಥಳೀಯ ಗ್ರಾಮವು ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿದೆ. ಗ್ರಾಮೀಣ ಪ್ರದೇಶ ಇರುವುದರಿಂದ ಕೋವಿಡ್ ಸಮಯದಲ್ಲಿ ಜನರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಹಣವನ್ನು ಸಂಗ್ರಹಿಸಿ ಆಕ್ಸಿಜನ್ ಕಾನ್ಸೆಸಂಟೆರ್‌ನ್ನು ನೀಡಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ರಾಜೇಂದ್ರ ಪಂತ ಹೇಳಿದ್ದಾರೆ. 

ಗ್ರಾಮದಲ್ಲಿ ಯಾವುದೇ ರೀತಿಯ ಘಟನೆಗಳು ನಡೆದರೂ ಬೇರೆ ಕಡೆ ನೆಲೆಸಿರುವ ಸ್ಥಳೀಯರಿಗೆ ಮಾಹಿತಿ ಲಭ್ಯವಾಗಲಿ ಎನ್ನುವ ಉದ್ದೇದಿಂದ ಗ್ರೂಪ್‌ನ್ನು ರಚಿಸಲಾಗಿದೆ. ಗ್ರೂಪನ ಪ್ರಮುಖರ ಮಾರ್ಗದರ್ಶದಲ್ಲಿ ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದು ಗ್ರೂಪ್ ಅಡ್ಮಿನ್‌ ರಾಜಶೇಖರ ವಸ್ತ್ರದ ತಿಳಿಸಿದ್ದಾರೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!