ಸಚಿವ ಶೆಟ್ಟರ್‌ ಹೇಳಿಕೆ ಬೇಜವಾಬ್ದಾರಿತನದ್ದು: ಎಚ್‌.ಕೆ. ಪಾಟೀಲ

By Kannadaprabha NewsFirst Published Aug 16, 2020, 12:14 PM IST
Highlights

ಬಿಜೆಪಿ ಪಕ್ಷದಲ್ಲಿ ವೈಮನಸ್ಸುಗಳು ಹೆಚ್ಚಾಗಿದ್ದು, ಯಡಿಯೂರಪ್ಪನವರನ್ನು ಕೆಳಗೆ ಇಳಿಸಬೇಕೋ, ಉಳಿಸಬೇಕೋ ಎಂಬ ಗೊಂದಲದಲ್ಲಿ ಅವರಿದ್ದಾರೆ. ಇಷ್ಟೆಲ್ಲಾ ಇದ್ದುಕೊಂಡು ಕಾಂಗ್ರೆಸ್‌ ಮೇಲೆ ದೂರು ಕೂರಿಸುವಂತಹ ಪ್ರಯತ್ನ ಅತ್ಯಂತ ವಿವೇಕ ಹೀನವಾದದ್ದು: ಎಚ್‌.ಕೆ. ಪಾಟೀಲ 

ಗದಗ(ಆ.16): ಬೆಂಗಳೂರಿನಲ್ಲಿ ನಡೆದ ಗಲಾಟೆ ಹಿಂದೆ ಕಾಂಗ್ರೆಸ್‌ ಕುಮ್ಮಕ್ಕು ಇದೆ ಎಂದು ಹೇಳಿಕೆ ನೀಡಿರುವ ಸಚಿವ ಜಗದೀಶ ಶೆಟ್ಟರ್‌ ಹೇಳಿಕೆ ಬೇಜವಾಬ್ದಾರಿತನದ್ದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಎಚ್‌.ಕೆ. ಪಾಟೀಲ ಖಂಡಿಸಿದ್ದಾರೆ. 

ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಓರ್ವ ಹಿರಿಯ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಆಗಿರುವ ಶೆಟ್ಟರ್‌ ಈ ರೀತಿ ಬೇಜವಾಬ್ದಾರಿಯ ಹೇಳಿಕೆಯನ್ನು ಹೇಗೆ ನೀಡಿದ್ದಾರೆ? ಕಾಂಗ್ರೆಸ್‌ ಶಾಸಕರೇನು ಬಿಜೆಪಿ ಶಾಸಕರು ಎಂದು ತಿಳಿದುಕೊಂಡಿದ್ದಾರಾ? ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವೇ ಸೂಕ್ತ ತನಿಖೆಗೆ ವ್ಯವಸ್ಥೆ ಮಾಡಲಿ. ಹಾಲಿ ಹೈಕೋರ್ಟ್‌ ಜಡ್ಜ್‌ಗಳಿಂದ ತನಿಖೆ ಮಾಡಿಸಿ. ಯಾರು ಕುಮ್ಮಕ್ಕು ಕೊಟ್ಟಿದ್ದಾರೆ? ಯಾರು ಕಾರಣ? ಎಂದು ತಿಳಿದ ನಂತರ ಅವರ ವಿರುದ್ಧ ಉಗ್ರವಾದ ಕ್ರಮಕೈಗೊಳ್ಳಲಿ.

'ಬೆಂಗಳೂರು ಘಟನೆ ಖಂಡಿಸುವಷ್ಟು ನೈತಿಕ ಧೈರ್ಯ ಕಾಂಗ್ರೆಸ್‌ಗಿಲ್ಲ'

ಘಟನೆಯಲ್ಲಿ ಕಾಂಗ್ರೆಸ್‌ ಶಾಸಕನೇ ಏಟು ತಿಂದಿರುವಾಗ ಅದು ಹೇಗೆ ಕಾಂಗ್ರೆಸ್‌ ಕುಮ್ಮಕ್ಕು ಎಂದು ಹೇಳುತ್ತಾರೆ? ಕಾಂಗ್ರೆಸ್‌ ಪಕ್ಷ ಇಂತಹ ಯಾವುದೇ ಘಟನೆಗಳಿಗೆ ಕೈ ಹಾಕುವುದಿಲ್ಲ. ಇಂತಹ ಹೆಜ್ಜೆಯನ್ನು ನಾವು ತುಳಿದವರಲ್ಲ. ಹೀಗಿರುವಾಗ ಕಾಂಗ್ರೆಸ್‌ ಮೇಲೆ ಈ ರೀತಿ ಆಪಾದನೆ ಮಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದಲ್ಲಿ ವೈಮನಸ್ಸುಗಳು ಹೆಚ್ಚಾಗಿದ್ದು, ಯಡಿಯೂರಪ್ಪನವರನ್ನು ಕೆಳಗೆ ಇಳಿಸಬೇಕೋ, ಉಳಿಸಬೇಕೋ ಎಂಬ ಗೊಂದಲದಲ್ಲಿ ಅವರಿದ್ದಾರೆ. ಇಷ್ಟೆಲ್ಲಾ ಇದ್ದುಕೊಂಡು ಕಾಂಗ್ರೆಸ್‌ ಮೇಲೆ ದೂರು ಕೂರಿಸುವಂತಹ ಪ್ರಯತ್ನ ಅತ್ಯಂತ ವಿವೇಕ ಹೀನವಾದದ್ದು ಎಂದು ಎಚ್‌.ಕೆ. ಪಾಟೀಲ ಹೇಳಿದ್ದಾರೆ. 
 

click me!