ಗರ್ಭಿಣಿಗೆ ಆಹಾರ, ಸೀರೆ, ಕುಪ್ಪಸ ಹಾಗೂ ಆರು ಸಾವಿರ ನೆರವು

By Kannadaprabha NewsFirst Published Mar 24, 2023, 5:23 AM IST
Highlights

ಮುಂದಿನ ಒಂದು ವರ್ಷದಲ್ಲಿ ಸೂಯೇಜ್‌ ಫಾರಂ ಕಸದ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

ಮೈಸೂರು :  ಮುಂದಿನ ಒಂದು ವರ್ಷದಲ್ಲಿ ಸೂಯೇಜ್‌ ಫಾರಂ ಕಸದ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

ಕೆ.ಆರ್‌. ಕ್ಷೇತ್ರ ವ್ಯಾಪ್ತಿಯ 63ನೇ ವಾರ್ಡಿನ ಜೆಪಿ ನಗರದ ಗೊಬ್ಬಳಿ ಮರದ ಸಮೀಪದ ದೇವಸ್ಥಾನದ ಬಳಿ ಆಯೋಜಿಸಿದ್ದ ಯೋಗಕ್ಷೇಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಶಕಗಳ ಕಾಲದಿಂದ ಸುಯೇಜ್‌ ಫಾರಂನಲ್ಲಿ ಕಸ ಸಂಗ್ರಹವಾಗಿ ಈ ಭಾಗದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ನಂತರ ನಡೆದ ಸತತ ಪ್ರಯತ್ನದ ಫಲವಾಗಿ ಪ್ರಧಾನಿ ನರೇಂದ್ರ ಮೋದಿ ಅವರು . 56 ಕೋಟಿ ಅನುದಾನ ನೀಡಿದ್ದಾರೆ. ಪರಿಣಾಮ, ಮುಂದಿನ ಒಂದು ವರ್ಷದೊಳಗೆ ಇಡೀ ಕಸ ಸಿಮೆಂಟ್‌ ಕಾರ್ಖಾನೆಗೆ ಹೋಗಲಿದೆ. ಮಾತ್ರವಲ್ಲ, ಇದೇ ತಿಂಗಳು ಕೆಸರೆ ಬಡಾವಣೆಯ ಪ್ಲಾಂಟ್‌ ಕಾರ್ಯಾರಂಭ ಮಾಡಲಿದೆ. ನಂತರದ ಕೆಲ ದಿನಗಳಲ್ಲಿ ರಾಯನಕೆರೆ ಪ್ಲಾಂಟ್‌ ಆರಂಭವಾಗಲಿದೆ ಎಂದು ಹೇಳಿದರು.

ಇಡೀ ಕ್ಷೇತ್ರದಲ್ಲಿ ನಾನಾ ಕಾಮಗಾರಿಗಳಿಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದ್ದು, ಮಾಚ್‌ರ್‍ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ನಮ್ಮ ಕ್ಷೇತ್ರ ವ್ಯಾಪ್ತಿಯ 482 ಕಿಮೀ ಗಳು ಸಂಪೂರ್ಣವಾಗಿ ಡಾಂಬರೀಕರಣವಾಗಲಿದೆ. ಮಾತ್ರವಲ್ಲ, ಒಳಚರಂಡಿ ಮತ್ತು ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಸರಿಪಡಿಸಲಾಗುತ್ತಿದೆ ಎಂದರು.

ಕ್ಷೇತ್ರವನ್ನು ಅಪಘಾತ ಮುಕ್ತ ವಲಯವಾಗಿ ಮಾಡುವ ನಿಟ್ಟಿನಲ್ಲಿ ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕ್ಷೇತ್ರ ಇತಿಹಾಸದಲ್ಲಿ ಈ ಪ್ರಮಾಣದ ಕಾಮಗಾರಿ ಯಾವ ವೇಳೆಯಲ್ಲೂ ಆಗಿಲ್ಲ. ನಾವು ಇಲ್ಲಿ ಎಷ್ಟುದಿನ ಇರಲು ಸಾಧ್ಯ? ನಮ್ಮ ನಂತರದಲ್ಲೂ ಈ ಕ್ಷೇತ್ರ ಮಾದರಿಯಾಗಿ ಇರಬೇಕು ಎಂಬ ಕಾರಣಕ್ಕಾಗಿ ಅತ್ಯಂತ ವ್ಯವಸ್ಥಿತವಾಗಿ ಎಲ್ಲಾ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

 34 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 584 ಬೋರ್ವೆಲ್‌ ಗಳನ್ನು ಇನ್ನೊಂದು ತಿಂಗಳಲ್ಲಿ ನಿಲ್ಲಿಸಿ ಇಡೀ ಕ್ಷೇತ್ರಕ್ಕೆ ಕಾವೇರಿ ಹಾಗೂ ಕಬಿನಿ ನೀರು ನೀಡಲಾಗುತ್ತಿದೆ. 120 ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ. 13 ಸ್ಮಶಾನಗಳ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಬೀದಿ ನಾಯಿಗೂ ನೆಮ್ಮದಿ ಕಲ್ಪಿಸುವ ಉದ್ದೇಶದಿಂದ ಪುನರ್ವಸತಿ ಕೇಂದ್ರ ತೆರೆಯಲಾಗುತ್ತಿದೆ ಎಂದು ಅವರು ವಿವರಿಸಿದರು.

ಸಕ್ಕರೆ ಕಾಯಿಲೆ ಅತಿ ವೇಗವಾಗಿ ಹೆಚ್ಚುತ್ತಿದೆ. ಅದರ ನಿಯಂತ್ರಣಕ್ಕಾಗಿ ಮುಂದಿನ ಐದು ವರ್ಷಗಳ ಯೋಜನೆ ರೂಪಿಸಲಾಗಿದೆ. ಕ್ಷೇತ್ರದಲ್ಲಿರುವ 70 ಮನೆಗಳಲ್ಲಿ 60 ಸಾವಿರ ಮಂದಿ ಸಕ್ಕರೆ ಕಾಯಿಲೆ ಹೊಂದಿದ್ದಾರೆ. ಇದು ನಮ್ಮೆದುರಿಗಿರುವ ದೊಡ್ಡ ಸವಾಲು. ಈಗಾಗಲೇ 19 ವಾರ್ಡುಗಳಲ್ಲಿ ತಪಾಸಣೆ ನಡೆಸಿ ವರದಿ ತೆಗೆದುಕೊಳ್ಳಲಾಗಿದೆ ಎಂದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಸಮರ್ಪಕ ಅನುಷ್ಠಾನ ನಡೆದಿದೆ. ಮಾತ್ರವಲ್ಲ, ಈ ಶ್ರಮ್‌ ಕಾರ್ಡ್‌ ಪಟ್ಟಿತಯಾರಿಸಲಾಗಿದೆ. ಈ ಮೂಲಕ ಪ್ರತಿ ವ್ಯಕ್ತಿಗೆ . 10 ಸಾವಿರ ಬಡ್ಡಿ ರಹಿತ ಬಂಡವಾಳ ಒದಗಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇದನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಿದ ದೇಶದ ಮೊದಲ ನಗರ ಹಾಗೂ ಮೊದಲ ಕ್ಷೇತ್ರ ನಮ್ಮದಾಗಲಿದೆ ಎಂದು ಅವರು ಹೇಳಿದರು.

ಕೇಂದ್ರದ ವಸತಿ ಇಲಾಖೆ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ವಸತಿ ಯೋಜನೆಯಲ್ಲಿ ಸಾಧಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮೂಲಕ ಮತ್ತಷ್ಟುಯೋಜನೆ ತರುವ ಕಾರ್ಯ ಸಾಗಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಂತಹ ಯೋಜನೆಗಳ ಪೈಕಿ ನನಗೆ ಅತಿ ಇಷ್ಟವಾದ ಯೋಜನೆ ಎಂದರೆ ಮಾತೃವಂದನಾ ಯೋಜನೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಯಾಗಿದ್ದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ. ಆ ಕಾರಣಕ್ಕಾಗಿಯೇ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಬೆನ್ನಿನ ಮೇಲೆ ಗುದ್ದಿ ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ಮಾಡು ಎಂದು ಹುರಿದುಂಬಿಸಿದರು. ಅದರ ಪರಿಣಾವೇ ಇಂದು ನಮ್ಮ ಕ್ಷೇತ್ರದಲ್ಲಿ 9200 ಗರ್ಭಿಣಿ ಮಹಿಳೆಯರು ಈ ಯೋಜನೆಯ ಫಲ ಪಡೆದರು. ಈ ಮೂಲಕ ಭವಿಷ್ಯದ ಮಗು ಆರೋಗ್ಯವಂತವಾಗಲು ಹಾಗೂ ತಾಯಿ ಸೌಖ್ಯದಿಂದಿರಲು ಸಾಧ್ಯವಾಯಿತು ಎಂದರು.

ಕ್ಷೇತ್ರದ 9200 ಗರ್ಭಿಣಿ ಮಹಿಳೆಯರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಮಡಿಲು ತುಂಬುವ ಸೌಭಾಗ್ಯ ನನ್ನ ಪಾಲಿಗೆ ಬಂದಿದೆ. ಇಲ್ಲಿ ಯಾವುದೇ ರೀತಿಯ ಜಾತಿ, ಧರ್ಮ ಇಲ್ಲ. ಎಲ್ಲಾ ಜಾತಿ, ಧರ್ಮಗಳ ನನ್ನ ಸಹೋದರಿಯರು ಈ ಯೋಜನೆಯ ಭಾಗವಾಗಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು.

ಯೋಜನೆಯಲ್ಲಿ ಫಲಾನುಭವಿಯಾದ ಗರ್ಭಿಣಿಗೆ ನಾಲ್ಕು ತಿಂಗಳ ಕಾಲ ಆಹಾರ, ಸೀರೆ, ಕುಪ್ಪಸ ಹಾಗೂ ಆರು ಸಾವಿರ ರೂಪಾಯಿ ಆರ್ಥಿಕ ನೆರವು ಸಿಗಲಿದೆ. ಆಕೆ ಹಾಗೂ ತನ್ನೊಡಲಲ್ಲಿರುವ ಮಗು ಆನಂದವಾಗಿರಬೇಕು ಎಂಬುದೇ ಈ ಯೋಜನೆಯ ಉದ್ದೇಶ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ನಮ್ಮ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಬ್ಬ ಗರ್ಭಿಣಿಯಾಗಲಿ ಅಥವಾ ನವಜಾತ ಶಿಶುವಾಗಲಿ ಸಾವಿಗೀಡಾಗಬಾರದು ಎಂಬ ಸಂಕಲ್ಪ ನಮ್ಮದಾಗಿದೆ. ಆ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅರಿಯುವ ಸಲುವಾಗಿಯೇ ದೇಶದ ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿ 510 ಪುಟಗಳ ವಿಷನ್‌ ಡಾಕ್ಯುಮೆಂಟ್‌ ಸಿದ್ದಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ಕೊಡಲಾಗಿದೆ. ಅಂದು ಆರಂಭವಾದ ಈ ಕಾರ್ಯ ಇಂದು ಕ್ಷೇತ್ರದಲ್ಲಿರುವ 80 ಸಾವಿರ ಮನೆಗಳ ಪೈಕಿ 70 ಸಾವಿರ ಮನೆಗಳಿಗೆ ಒಂದಲ್ಲಾ ಒಂದು ಯೋಜನೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಅವರು ತಿಳಿಸಿದರು.

click me!