
ಕಲಬುರಗಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಬಹುದಿನಗಳ ಬಳಿಕ ವಿಮಾನ ಸೇವೆಗಳು ಪುನರಾರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಿಕರ ಸಾರ್ವಜನಿಕ ಸಾರಿಗೆಯ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ವತಿಯಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.
ಕೆಕೆಆರ್ಟಿಸಿ ಅಧ್ಯಕ್ಷರಾದ ಅರುಣಕುಮಾರ ಪಾಟೀಲ ಅವರು ಈ ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ವಿಮಾನ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನಿಗದಿತ ಸಮಯಕ್ಕೆ ನಿಲ್ದಾಣ ತಲುಪಿಸಲು ಈ ಬಸ್ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಅಗತ್ಯಕ್ಕೆ ತಕ್ಕಂತೆ ಟ್ರಿಪ್ಗಳ ಸಂಖ್ಯೆಯನ್ನು ಹೆಚ್ಚಿಸಲು ಸಂಸ್ಥೆ ಯೋಜಿಸಿದೆ" ಎಂದು ತಿಳಿಸಿದರು.
ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಬಸ್ ಪ್ರತಿದಿನ ಮುಂಜಾನೆಯೇ ತನ್ನ ಸೇವೆಯನ್ನು ಆರಂಭಿಸಲಿದೆ.
ಬಸ್ ಸೇವೆಗೆ ಚಾಲನೆ ನೀಡುವ ಈ ಮಹತ್ವದ ಸಂದರ್ಭದಲ್ಲಿ ಕಲಬುರಗಿ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಜಿ. ಗಂಗಾಧರ್, ಕಲಬುರಗಿ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಬಸಂತಪ್ಪ ಬಿ. ಎಮ್., ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಶೇಖ್ ಹುಸೇನಿ, ಪ್ರಶಾಂತ, ಡಿಪೋ ಮ್ಯಾನೇಜರ್ ಅನಿಲ, ಆಡಳಿತಾಧಿಕಾರಿ ಗುರುಲಿಂಗಪ್ಪ, ಡಿಟಿಓ ಹೊಸಮನಿ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಂಗಳೂರಿನಿಂದ ನಿರ್ಗಮನ ಬೆಳಗ್ಗೆ 06:30
ಕಲಬುರಗಿಗೆ ಆಗಮನ ಬೆಳಿಗ್ಗೆ 7:40
ಬೆಂಗಳೂರಿಗೆ ಆಗಮನ: ಬೆಳಿಗ್ಗೆ 9:20
ಕಲಬುರಗಿಯಿಂದ ನಿರ್ಗಮನ: ಬೆಳಿಗ್ಗೆ 8:10
ಬೆಳಗ್ಗೆ 7:40ಕ್ಕೆ ಬೆಂಗಳೂರಿನಿಂದ ಬರುವ ವಿಮಾನದ ಪ್ರಯಾಣಿಕರು ಮತ್ತು 8:10ಕ್ಕೆ ಬೆಂಗಳೂರಿಗೆ ಹೊರಡುವ ಪ್ರಯಾಣಿಕರು, ಇಬ್ಬರಿಗೂ ಅನುಕೂಲವಾಗುವಂತೆ ಕೆಕೆಆರ್ಟಿಸಿ ಬಸ್ ಸಮಯವನ್ನು (ಬೆಳಗ್ಗೆ 7:00 ರಿಂದ 8:00) ಅತ್ಯಂತ ಅಚ್ಚುಕಟ್ಟಾಗಿ ಹೊಂದಾಣಿಕೆ ಮಾಡಲಾಗಿದೆ.