ರಾತ್ರಿ ವೇಳೆ ಕಲಬುರಗಿಯಿಂದ ವಿಮಾನ ಸೇವೆ ಆರಂಭ

By Kannadaprabha NewsFirst Published Feb 24, 2024, 11:00 PM IST
Highlights

ಕಲ್ಬುರ್ಗಿಯಿಂದ ಬೆಂಗಳೂರಿಗೆ ಪ್ರಾರಂಭಗೊಂಡ 70 ಆಸನಗಳ ಅಲಯನ್ಸ್ ಏರ್ ವಿಮಾನದಲ್ಲಿ 68 ಪ್ರಯಾಣಿಕರು ಮುಂಗಡ ಟಿಕೆಟ್ ಕಾದಿರಿಸಿ ವಿಮಾನ ವಿಳಂಬವಾದುದರಿಂದ 11 ಟಿಕೆಟುಗಳು ಕೊನೆಯ ಕ್ಷಣದಲ್ಲಿ ರದ್ದುಗೊಂಡಿತ್ತು. 57 ಜನರು ಬೆಂಗಳೂರಿಗೆ ಪ್ರಯಾಣಿಸಿದರು. 

ಕಲಬುರಗಿ(ಫೆ.24):  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹಾನ್ ಕನಸಿನ ಉಡಾನ್ ಯೋಜನೆಯಡಿ ನಿರ್ಮಾಣಗೊಂಡ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಯುವ ಸೇವೆ ಪ್ರಾರಂಭವಾಗಿದ್ದು, ಅಭಿವೃದ್ಧಿಯ ಮೈಲಿಗಲ್ಲು ಮತ್ತು ಕಲ್ಬುರ್ಗಿಗೆ ಐತಿಹಾಸಿಕ ದಿನವಾಗಿದೆ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ಸಂತಸ ವ್ಯಕ್ತಪಡಿಸಿದರು. ಫೆ.22ರಂದು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಸೇವೆಯ ಪ್ರಾರಂಭೋತ್ಸವ ನಿಮಿತ್ತ ಅಲಯನ್ಸ್ ಏರ್ ವಿಮಾನವನ್ನು ಸ್ವಾಗತಿಸಿದ ನಂತರ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ವಿಭಾಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವಿಮಾನ ಯಶಸ್ವಿಯಾಗಿ ಇಳಿದು ಸೇವೆ ಪ್ರಾರಂಭಗೊಳಿಸಿದ್ದಕ್ಕೆ ಸಂತಸವಾಗಿದೆ. ಇದು ಅಭಿವೃದ್ಧಿಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದಂತಾಗಿದೆ. ಮೊದಲ ವಿಮಾನದಲ್ಲಿ ಬೆಂಗಳೂರಿಂದ ಇತರ 46 ಪ್ರಯಾಣಿಕರ ಜೊತೆ ಆಗಮಿಸುವುದರ ಮೂಲಕ ಹಾಗೂ ಇಲ್ಲಿಂದ 57 ಜನರನ್ನು ಬೆಂಗಳೂರಿಗೆ ಕಳುಹಿಸುವ ಮೂಲಕ ಈ ಸಂಭ್ರಮಕ್ಕೆ ಕಳೆ ಕಟ್ಟಿದೆ ಎಂದು ಹೇಳಿದರು. ಬಹುದಿನಗಳ ಕನಸು ಈಗ ಸಾಕಾರಗೊಂಡು ಸಂಸದನಾಗಿ ಧನ್ಯತಾ ಭಾವ ಬಂದಿದೆ. ಈ ಸೇವೆ ನಿರಂತರವಾಗಿ ಯಶಸ್ವಿ ಹೊಂದಲು ಪ್ರಯಾಣಿಕರು ಸಹಕರಿಸಬೇಕು.

ಮೂವರು ಕನ್ನಡಿಗರು ಸೇರಿ 60 ಭಾರತೀಯರಿಗೆ ರಷ್ಯಾ ಸೇನೆ ವಂಚನೆ, ಶೀಘ್ರ ಬಿಡುಗಡೆಗೆ ಭಾರತ ಮನವಿ

ಮುಂದಿನ ದಿನಗಳಲ್ಲಿ ಮುಂಬೈ, ಮಂಗಳೂರು, ದೆಹಲಿ ಮುಂತಾದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಪ್ರಾರಂಭಿಸಲು ವಿಮಾನಯಾನಖಾತೆಯ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯ ಅವರೊಂದಿಗೆ ಬುಧವಾರವಷ್ಟೇ ಮಾತುಕತೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಅಭಿವೃದ್ಧಿ ಕೆಲಸವನ್ನು ಸಾಧಿಸಲು ನೆರವಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಸಿಂಧ್ಯಾ ಅವರಿಗೆ ಅಭಿನಂದನೆ ವ್ಯಕ್ತಪಡಿಸುವುದಾಗಿ ಹೇಳಿ ಸದ್ಯ ಪ್ರತಿ ಗುರುವಾರ ಸಂಚರಿಸುವ ವಿಮಾನಸೇವೆಯನ್ನು ವಾರಪೂರ್ತಿ ಸಂಚರಿಸುವಂತೆ ಪ್ರಯತ್ನಿಸಲಾಗುವುದು ಎಂದು ಜಾಧವ್ ಭರವಸೆ ನೀಡಿದರು.

ತಾಂತ್ರಿಕ ವಿಳಂಬ ಖುದ್ದು ಪ್ರಯತ್ನ:

ತಾಂತ್ರಿಕ ಸಮಸ್ಯೆ ಎದುರಿಸಿದ ಎಲಿಯನ್ಸ್ ಏರ್ ವಿಮಾನವು ರಾತ್ರಿ 8 ಗಂಟೆಗೆ ಬೆಂಗಳೂರಿಂದ ಹೊರಡಲು ಅಡಚಣೆ ಉಂಟಾಗಿ ಕೂಡಲೇ ಖುದ್ದಾಗಿ ಸಂಸ್ಥೆಯ ನಿರ್ದೇಶಕರಿಗೆ ಸಂಪರ್ಕ ಮಾಡಿ ಉದ್ಘಾಟನೆ ದಿನದ ವಿಮಾನ ರದ್ದಾಗದಂತೆ ನೋಡಿಕೊಳ್ಳಲು ಯಶಸ್ವಿಯಾದೆ ಹಾಗೂ ಕೊಚ್ಚಿ - ಬೆಂಗಳೂರು ನಡುವಣ ವಿಮಾನವನ್ನು ಕರೆಸಿ ರಾತ್ರಿ 10.40ಕ್ಕೆ ಬೆಂಗಳೂರಿಂದ ಹೊರಟು 11.40ಕ್ಕೆ ಕಲ್ಬುರ್ಗಿಯಲ್ಲಿ ಇಳಿಯುವಂತಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ಸಂಸದನಾಗಿ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಜಾಧವ್ ಹೇಳಿದರು.

ಗುತ್ತೇದಾರ್‌ಗೆ ಮೊದಲ ಬೋರ್ಡಿಂಗ್ ಪಾಸ್:

ಕಲಬುರಗಿಯಿಂದ ಬೆಂಗಳೂರಿಗೆ ಮೊದಲ ಸಂಚಾರ ಪ್ರಾರಂಭಿಸಿದ ಪ್ರಯಾಣಿಕರ ಮೊದಲ ಬೋರ್ಡಿಂಗ್ ಪಾಸ್ ಅನ್ನು ಮಾಜಿ ಸಚಿವರು ಮತ್ತು ಬಿಜೆಪಿಯ ಹಿರಿಯ ನಾಯಕ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸಂಸದ ಡಾ. ಉಮೇಶ್ ಜಾದವ್ ಹಸ್ತಾಂತರಿಸಿ ಪ್ರಯಾಣಕ್ಕೆ ಚಾಲನೆ ನೀಡಿದರು. ನಂತರ ಕೇಕ್ ಕತ್ತರಿಸಿ ಸಂಸದರು ಎಲ್ಲರಿಗೂ ಸಿಹಿ ತಿನ್ನಿಸಿ ಐತಿಹಾಸಿಕ ದಿನದ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಬೋರ್ಡಿಂಗ್ ಪಾಸ್ ಸ್ವೀಕರಿಸಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್ "ಕೊಟ್ಟ ಮಾತು ಉಳಿಸಿದ ಸಂಸದ" ಎಂಬ ಹೆಗ್ಗಳಿಕೆಗೆ ಜಾಧವ್ ಪಾತ್ರರಾಗಿದ್ದಾರೆ ಎಂದರು.

ಕಲಬುರಗಿ: ಕೊಡ ನೀರಿಗಾಗಿ ರಾತ್ರಿಪೂರಾ ನಿದ್ದೆಗೆಡುವ ಜನರು..!

ಭರ್ತಿಯಾದ ವಿಮಾನ- ವಿಐಪಿ ಪ್ರಯಾಣಿಕರು:

ಕಲ್ಬುರ್ಗಿಯಿಂದ ಬೆಂಗಳೂರಿಗೆ ಪ್ರಾರಂಭಗೊಂಡ 70 ಆಸನಗಳ ಅಲಯನ್ಸ್ ಏರ್ ವಿಮಾನದಲ್ಲಿ 68 ಪ್ರಯಾಣಿಕರು ಮುಂಗಡ ಟಿಕೆಟ್ ಕಾದಿರಿಸಿ ವಿಮಾನ ವಿಳಂಬವಾದುದರಿಂದ 11 ಟಿಕೆಟುಗಳು ಕೊನೆಯ ಕ್ಷಣದಲ್ಲಿ ರದ್ದುಗೊಂಡಿತ್ತು. 57 ಜನರು ಬೆಂಗಳೂರಿಗೆ ಪ್ರಯಾಣಿಸಿದರು. ಬೆಂಗಳೂರಿಂದ ಕಲಬುರ್ಗಿಗೆ ಲೋಕಸಭಾ ಸದಸ್ಯರಾದ ಜಾಧವ್ ಜೊತೆಗೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್, ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ, ಅಮರೇಶ್ವರಿ ಚಿಂಚನಸೂರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಮದ್ ಪಟೇಲ್, ಉದ್ಯಮಿ ಸಂಜೀವ್ ಗುಪ್ತಾ ಮುಂತಾದವರಿದ್ದರು.

ಮೊದಲ ವಿಮಾನಕ್ಕೆ ನೀರಿನೋಕುಳಿ ಸಂಭ್ರಮ

ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಝಗಮಗಿಸುವ ಬೆಳಕಿನ ನಡುವೆ ಮುಖ್ಯ ಕ್ಯಾಪ್ಟನ್ ಮರ್ವಿನ್ ವಿಲ್ಲಾಲಾಬೋಸ್ ಹಾಗೂ ಎರಡನೇ ಪೈಲೆಟ್ ಅಕ್ಷಯ್ ಭೂಪ್ತಾನಿ ವಿಮಾನವನ್ನು ಭೂಸ್ಪರ್ಶ ಮಾಡಿದಾಗ ವಿಮಾನದ ಮೇಲೆ ಎರಡು ಕಡೆಗಳಿಂದ ನೀರಿನ ಓಕುಳಿಯೊಂದಿಗೆ ಸಂಭ್ರಮದಿಂದ ಸ್ವಾಗತಿಸಲಾಯಿತು . ವಿಮಾನ ನಿಲ್ದಾಣವನ್ನು ಬಣ್ಣ ಬಣ್ಣದ ಬಲೂನುಗಳಿಂದ ಶೃಂಗರಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣ ನಿರ್ದೇಶಕರಾದ ಮಹೇಶ್ ಚಿಲ್ಕಾ ಎಲ್ಲರನ್ನು ಸ್ವಾಗತಿಸಿದರು. 

click me!