ವಿಜಯಪುರ: 50 ವರ್ಷದ ಬಳಿಕ ಬತ್ತಿದ ಭೀಮೆಯ ಒಡಲು, ನೀರಿಗಾಗಿ ಹಾಹಾಕಾರ..!

By Kannadaprabha NewsFirst Published Feb 24, 2024, 10:00 PM IST
Highlights

ಭೀಮಾನದಿಯ ಮೇಲೆ ಅವಲಂಬಿಸಿದ್ದ ನದಿ ತೀರದ ಮಿರಗಿ, ರೋಡಗಿ, ಖೇಡಗಿ, ನಾಗರಳ್ಳಿ, ಖೇಡಗಿ, ಬುಯ್ಯಾರ, ಹಿಂಗಣಿ, ಧೂಳಖೇಡ, ಅಣಚಿ, ಗುಬ್ಬೇವಾಡ ಸೇರಿದಂತೆ ಹಲವು ಗ್ರಾಮಗಳ ರೈತರು ನೀರಿಲ್ಲದೆ ರೈತರು ಬೆಳೆ ಬೆಳಯಲು ಸಾಧ್ಯವಾಗುತ್ತಿಲ್ಲ. ಬೆಸಿಗೆಯ ಮುನ್ನವೇ ಭೀಮಾನದಿ ಬತ್ತಿರುವುದರಿಂದ ನದಿ ತೀರ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳು ಕುಡಿಯುವ ನೀರಿನ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. 
 

ಖಾಜು ಸಿಂಗೆಗೋಳ

ಇಂಡಿ(ಫೆ.24):  ಕಳೆದ 50 ವರ್ಷಗಳ ಹಿಂದೆ ಅಂದ್ರೆ 1972 ರಲ್ಲಿ ಸಂಭವಿಸಿದ ಭೀಕರ ಬರದ ಛಾಯೆ ಈ ವರ್ಷವೂ ಕಾಣಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿದೆ. ಪ್ರಸಕ್ತ ವರ್ಷ ಹಿಂಗಾರು ಮತ್ತು ಮುಂಗಾರು ಮಳೆಯ ಕೊರತೆಯಿಂದಾಗಿ ಅಂತರ್ಜಲಮಟ್ಟ ಕುಸಿದು ಹಳ್ಳಕೊಳ್ಳ, ನದಿಗಳು ಬತ್ತಿಹೋಗಿದ್ದು, ನದಿ ತೀರದ ಗ್ರಾಮಗಳ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಲಕ್ಷಣಗಳು ಕಂಡುಬರುತ್ತಿದೆ. 

ಭೀಮಾನದಿಯ ಮೇಲೆ ಅವಲಂಬಿಸಿದ್ದ ನದಿ ತೀರದ ಮಿರಗಿ, ರೋಡಗಿ, ಖೇಡಗಿ, ನಾಗರಳ್ಳಿ, ಖೇಡಗಿ, ಬುಯ್ಯಾರ, ಹಿಂಗಣಿ, ಧೂಳಖೇಡ, ಅಣಚಿ, ಗುಬ್ಬೇವಾಡ ಸೇರಿದಂತೆ ಹಲವು ಗ್ರಾಮಗಳ ರೈತರು ನೀರಿಲ್ಲದೆ ರೈತರು ಬೆಳೆ ಬೆಳಯಲು ಸಾಧ್ಯವಾಗುತ್ತಿಲ್ಲ. ಬೆಸಿಗೆಯ ಮುನ್ನವೇ ಭೀಮಾನದಿ ಬತ್ತಿರುವುದರಿಂದ ನದಿ ತೀರ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳು ಕುಡಿಯುವ ನೀರಿನ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಭೀಕರ ಬರಗಾಲ ಆವರಿಸಿರುವದರಿಂದ ಜನತೆ ತತ್ತರಿಸಿ ಹೋಗಿದ್ದು, ಗಡಿ ಭಾಗದ ಜೀವಜಲ ಅಷ್ಟೆ ಅಲ್ಲದೆ ಕರ್ನಾಟಕ, ಮಹಾರಾಷ್ಟ್ರ ಗಡಿ ಸಂಧಿಸುವ ಭೀಮಾನದಿಯಲ್ಲಿ ಎಲ್ಲಿ ನೋಡಿದರು ಹನಿ ನೀರು ಕಾಣುತ್ತಿಲ್ಲ. ಇದರಿಂದ ಜನ, ಜಾನುವಾರುಗಳು ಕುಡಿಯುವ ನೀರಿನ ತೊಂದರೆ ಅನುಭವಿಸುವಂತಾಗಿದೆ. ಹಿಂದೆಂದೂ ಬತ್ತದ ಈ ನದಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಳಕಂಡಿದೆ. ಈ ಭಾಗದಲ್ಲಿ ಮಳೆ ಬಾರದಿದ್ದರೂ, ಮಹಾರಾಷ್ಟ್ರದಲ್ಲಿ ಸುರಿವ ಮಳೆಯಿಂದ ಉಕ್ಕಿ ಹರಿದು ನೀರಿನ ಕೊರತೆಯನ್ನು ನಿಗಿಸುತ್ತಿತ್ತು. ಆದರೆ, ಈ ಬಾರಿ ಅಲ್ಲಿಯೂ ಮಳೆ ಇಲ್ಲ, ಇಲ್ಲಿಯೂ ಮಳೆಯಿಲ್ಲದಂತಾಗಿ ಭೀಮೆ ಬರಿದಾಗಿದೆ.

ಸಂಸದ ಅನಂತಕುಮಾರ್ ಹೆಗ್ಡೆನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು: ಸಚಿವ ಎಂಬಿ ಪಾಟೀಲ್ ವಾಗ್ದಾಳಿ

ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ ಅಲ್ಲಲ್ಲಿ ಬೆಳೆಯಲಾಗುತ್ತಿದ್ದ ತರಕಾರಿ ಬೆಳೆ ಕೂಡ ಇಲ್ಲದಂತಾಗಿ, ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕೂಡ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಭೀಮಾನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹೇರಬೇಕಿರುವುದು ಅನಿವಾರ್ಯವಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರುವ ಮುನ್ನವೇ ಭೀಮಾ ನದಿಗೆ ನೀರು ಬಂದರೆ ಜನರು ನಿಟ್ಟುಸಿರುವ ಬಿಟ್ಟಂತಾಗುತ್ತದೆ. ಹಳ್ಳ, ಕೊಳ್ಳ, ನದಿಗಳು ಹಾಗೂ ಬೋರ್ ವೆಲ್ ಗಳು ಪಾತಾಳ ಕಂಡಿರುವುದರಿಂದ ರೈತರು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ನೀರಿಲ್ಲದೇ ಕೃಷಿ ಚಟುವಟಿಕೆಗಳು ಇಲ್ಲದೇ ಬಡವರು, ಕೂಲಿ ಕಾರ್ಮಿಕರಿಗೆ ಗೂಳೆ ಹೋಗುವುದು ಅನಿವಾರ್ಯವಾಗತ್ತಿದೆ. ಒಂದೆಡೆ ಕೃಷಿ ಚಟುವಟಿಕೆ, ಇನ್ನೊಂದೆಡೆ ಕುಡಿಯುವ ನೀರು, ಆಹಾರ ಮತ್ತು ತಮ್ಮ ಜಾನುವಾರುಗಳ ಮೇವಿಗಾಗಿಯೂ ಜನರು ಪರದಾಟವನ್ನು ನಡೆಸಿದ್ಧಾರೆ.

ಇಂಡಿ ತಾಲೂಕಿನಲ್ಲಿ ಹರಿದಿರುವ ಭೀಮಾನದಿ ಈ ಭಾಗದ ಜನರ ಜೀವನದಿ. ಕೃಷಿ ಸೇರಿದಂತೆ ಕುಡಿಯುವ ನೀರು ಸಹ ಭೀಮಾನದಿಯಿಂದಲೇ ಉಪಯೋಗಿಸಿಕೊಳ್ಳಲಾಗುತ್ತದೆ. ಮಳೆಯ ಕೊರತೆಯಿಂದ ಸಧ್ಯ ಭೀಮಾನದಿ ಬತ್ತಿ ಹೋಗಿದೆ. ಜನ ಜಾನುವಾರುಗಳಿಗೂ ನೀರಿನ ಬರ ಕಾಡುತ್ತಿದೆ. ಟ್ಯಾಂಕರ್‌ ಮೂಲಕ ಒದಗಿಸುವ ನೀರು ಸಾಕಾಗುವುದಿಲ್ಲ. ಹೀಗಾಗಿ ಭೀಮಾನದಿ ಹಾಗೂ ಹಳ್ಳಕೊಳ್ಳಗಳಿಗೆ ಕಾಲುವೆ ಮೂಲಕ ನೀರು ಹರಿಸಬೇಕು. ಇಲ್ಲವೇ ಉಜನಿ ಜಲಾಶಯದಿಂದ ಭೀಮಾನದಿಗೆ ಇಂಡಿ ತಾಲೂಕಿನವರೆಗೆ ತಲುಪುವ ಹಾಗೆ ನೀರು ಹರಿಸಿದರೆ ಅನುಕೂಲವಾಗುತ್ತದೆ ಎಂದು ರೈತ ಮುಖಂಡ ಹುಚ್ಚಪ್ಪ ತಳವಾರ ತಿಳಿಸಿದ್ದಾರೆ. 

ಗೋಳಸಾರ ಹಾಗೂ ನಾದ, ಮಿರಗಿ ಗ್ರಾಮದ ಬಳಿ ಹಾದು ಹೊಗಿರುವ ದೊಡ್ಡಹಳ್ಳ ಕೂಡ ಒಣಗಿರುವುದರಿಂದ ಈ ಗ್ರಾಮಗಳ ಜನ ಜಾನುವಾರುಗಳು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಜಾನುವಾರುಗಳ ಮೇಲಿನ ಕರುಣೆಯಿಂದಾದರೂ ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಬೇಕು. ಎಂ.ಆರ್‌.ಪಾಟೀಲ(ಗೋಳಸಾರ), ರೈತ ಮುಖಂಡರು.

click me!