ಸ್ವಾತಂತ್ರದ ಕತೆ ಹೇಳುತ್ತಿದೆ ಮೊದಲ ಧ್ವಜ: ತ್ರಿವರ್ಣದಲ್ಲಿ ಕಂಗೊಳಿಸಿದ ಉಡುಪಿ ಶ್ರೀಕೃಷ್ಣ

By Suvarna NewsFirst Published Aug 15, 2022, 12:15 PM IST
Highlights

ಅಮೃತ ಮಹೋತ್ಸವದ ವೇಳೆ ಪ್ರತಿ ಮನೆಯಲ್ಲಿ ಧ್ವಜ ಹಾರುತ್ತಿದೆ. ಪ್ರತಿ ಹೃದಯದಲ್ಲೂ ದೇಶಭಕ್ತಿ ಅನುರಣಿಸುತ್ತಿದೆ. ಕೇವಲ ಮನೆಗಳಲ್ಲಿ ಮಾತ್ರವಲ್ಲ ದೇಗುಲಗಳಲ್ಲೂ ಸ್ವತಃ ದೇವರನ್ನು ತ್ರಿವರ್ಣಗಳಿಂದ ಅಲಂಕರಿಸಲಾಗಿದೆ.

ವರದಿ ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಲವು ಹಳೆಯ ನೆನಪುಗಳನ್ನು ತಾಜಾಗೊಳಿಸಿದೆ. ಮನೆ ಮನೆಗಳಲ್ಲೂ ಧ್ವಜಾರೋಹಣ ಆಗುತ್ತಿರುವುದರಿಂದ ದೇಶಾದ್ಯಂತ ತ್ರಿವರ್ಣ ಗಮನ ಸೆಳೆಯುತ್ತಿದೆ .ಪ್ರಥಮ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಇಂದಿಗೂ ಕಲ್ಮಾಡಿಯ ಮನೆಯೊಂದರಲ್ಲಿ ಸುರಕ್ಷಿತವಾಗಿದೆ. ಈ ವಿಚಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ವೇಳೆ ಬೆಳಕಿಗೆ ಬಂದಿದೆ.

1947ರಲ್ಲಿ ಸ್ವಾತಂತ್ರ್ಯ ಹೋರಾಟಗಾರ 96ರ ಹರೆಯದ ಉಡುಪಿಯ ದಿ.ಕೆ. ಗೋಪಾಲಕೃಷ್ಣ ಗುಂಡು ನಾಯಕ್‌ ಅವರು ಸಂತೆಕಟ್ಟೆಯಲ್ಲಿರುವ ತಮ್ಮ ಅಂಗಡಿಯ ಮೇಲೆ ಅಂದು ಧ್ವಜಾರೋಹಣ ಮಾಡಿದ್ದರು. ಅವರ ಕಾಲಾನಂತರ ಪ್ರಸ್ತುತ ಮಗ ಕೆ. ಮನೋಹರ ನಾಯಕ್‌ ಪ್ರತಿ ವರ್ಷ ಆ. 15ರಂದು ಮನೆ ಮುಂದೆ ಧ್ವಜಾರೋಹಣ ಮಾಡುತ್ತಿದ್ದಾರೆ. ಈ ಬಾರಿಯೂ ತ್ರಿವರ್ಣ ಧ್ವಜ ಹಾರಿಸಿ ವಿಶೇಷವಾಗಿ ಸಂಭ್ರಮಿಸಿದ್ದಾರೆ.ಅವಿವಾಹಿತ ಮನೋಹರ್‌ಗೆ ಈಗ 88 ವರ್ಷ. ಗುಜರಾತಿನ ವಡೋದರದಲ್ಲಿ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಉದ್ಯೋಗದಲ್ಲಿದ್ದ ಅವರು ಪ್ರಸ್ತುತ ತಂಗಿ ರೇವತಿ ಶೆಣೈ ಮತ್ತು ಹೆಚ್‌.ಕೆ. ಶೆಣೈ ಅವರ ಕಲ್ಮಾಡಿಯ ಮನೆಯಲ್ಲಿ ವಾಸವಾಗಿದ್ದಾರೆ.

Independence Day 2022: ತ್ರಿವರ್ಣದಿಂದ ಗಮನ ಸೆಳೆದ ಪ್ರಧಾನಿ ಮೋದಿ ಪೇಟ

1934ರಲ್ಲಿ ಗಾಂಧೀಜಿ ಉಡುಪಿಗೆ ಬಂದ ವೇಳೆ ಅವರ ಜತೆ ಬಂದಿದ್ದ ಸ್ವಯಂಸೇವಕರಿಗೆ ನಿಲ್ಲಲು ಅಲ್ಲಲ್ಲಿ ಮನೆಗಳ ವ್ಯವಸ್ಥೆ ಮಾಡಿದರೆಂದು ಬ್ರಿಟಿಷರು ತಂದೆ ಗೋಪಾಲಕೃಷ್ಣರನ್ನು 4 ದಿನ ಜೈಲಿಗೆ ಹಾಕಿದ್ದರು ಎಂದು ಪುತ್ರ ಕೆ.ಮನೋಹರ್‌ ನಾಯಕ್‌ ನೆನಪಿಸುತ್ತಾರೆ. 1947ರ ಜುಲೈ 22ರಂದು ಸಂವಿಧಾನ ರಚನ ಸಭೆ ಅಶೋಕ ಚಕ್ರ ವಿರುವ ಧ್ವಜವನ್ನು ಅಂಗೀಕರಿಸುವ ಮುನ್ನ ಚರಕದ ಚಿಹ್ನೆ ಇರುವ ಸ್ವರಾಜ್ಯದ ಧ್ವಜವಿತ್ತು. ನಾಯಕ್‌ ಅವರು ಧ್ವಜಾರೋಹಣ ಮಾಡಿದ ಧ್ವಜ ಚರಕದ ಚಿಹ್ನೆ ಹೊಂದಿದೆ. 1947ರಲ್ಲಿ ಧ್ವಜ ಸಂಹಿತೆ ಇದ್ದಿರಲಿಲ್ಲ. ಈಗಿನಂತೆ ಧ್ವಜ ವಿತರಿಸುವ ವ್ಯವಸ್ಥೆಯೂ ಇದ್ದಿರಲಿಲ್ಲ. ಆದ್ದರಿಂದ ಸ್ವರಾಜ್ಯದ ಧ್ವಜಾರೋಹಣ ಮಾಡಿರುವ ಸಾಧ್ಯತೆ ಇದೆ ಎನ್ನುತ್ತಾರೆ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಯು.ವಿನೀತ್‌ ರಾವ್‌.

ತ್ರಿವರ್ಣಗಳಲ್ಲಿ ಕಂಗೊಳಿಸಿದ ದೇವರು

ಅಮೃತ ಮಹೋತ್ಸವದ ವೇಳೆ ಪ್ರತಿ ಮನೆಯಲ್ಲಿ ಧ್ವಜ ಹಾರುತ್ತಿದೆ. ಪ್ರತಿ ಹೃದಯದಲ್ಲೂ ದೇಶಭಕ್ತಿ ಅನುರಣಿಸುತ್ತಿದೆ. ಕೇವಲ ಮನೆಗಳಲ್ಲಿ ಮಾತ್ರವಲ್ಲ ದೇಗುಲಗಳಲ್ಲೂ ಸ್ವತಃ ದೇವರನ್ನು ತ್ರಿವರ್ಣಗಳಿಂದ ಅಲಂಕರಿಸಲಾಗಿದೆ. ಉಡುಪಿಯ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಸ್ವಾತಂತ್ರ್ಯೋತ್ಸವದ ದಿನ ದೇವರಿಗೆ ತ್ರಿವರ್ಣ ಅಲಂಕಾರ ಮಾಡಲಾಗಿದೆ. ಕೇಸರಿ ಬಿಳಿ ಹಸಿರು ಬಣ್ಣಗಳಲ್ಲಿ ಇಷ್ಟ ದೇವರನ್ನು ಕಂಡು ಭಕ್ತರು ಖುಷಿ ಪಡುತ್ತಿದ್ದಾರೆ. ಬೆಳಗ್ಗಿನ ಮಹಾಪೂಜೆಗೂ ಮುನ್ನ ಅನೇಕ ದೇವಾಲಯಗಳಲ್ಲಿ ಧ್ವಜಬಣ್ಣದ ಅಲಂಕಾರದ ಮೂಲಕ ದೇವರನ್ನು ಅಲಂಕರಿಸಲಾಯಿತು. ಕೋಟ ಮಣೂರಿನ ಶ್ರೀ ‌ಮಹಾಲಿಂಗೇಶ್ವರ ದೇವಸ್ಥಾನ, ನಾಡಿನ ಪ್ರಸಿದ್ಧ ಗಣಪತಿ ದೇಗುಲವಾದ ಆನೆಗುಡ್ಡೆ ಶ್ರೀ ಮಹಾಗಣಪತಿ ದೇವರಿಗೂ ತ್ರಿವರ್ಣ ಹೂವಿನ ಅಲಂಕಾರ ಮಾಡಲಾಗಿದೆ.

Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ

ಕಾಪುವಿನ ಕಟಪಾಡಿ ಶ್ರೀ ವೆಂಕಟರಮಣ ದೇವರ ಸನ್ನಿಧಿಯಲ್ಲಿ ವಿಶೇಷ ಹೂವಿನ ಅಲಂಕಾರ  ಮಾಡಿ, ದೇಶದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂದರ ನೋಟ ದರ್ಶಿಸಲಾಯ್ತು. ಕೇಸರಿ ಬಿಳಿ ಹಸಿರಿನೊಂದಿಗೆ ಕಂಗೊಳಿಸಿದ ಮಹಾ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನವೂ ಸಾವಿರಾರು ಭಕ್ತರ ಗಮನ ಸೆಳೆಯುತ್ತಿದೆ.

click me!