'ರೈತರ ಕೊಂದ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ'

By Kannadaprabha NewsFirst Published Oct 6, 2021, 2:45 PM IST
Highlights

*  ಮಹಾದಾಯಿ ಹೋರಾಟ ವೇದಿಕೆಯಲ್ಲಿ ಜೋಗಣ್ಣವರ ಎಚ್ಚರಿಕೆ
*  ದೆಹಲಿ ಗಡಿಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು
*  ದೇಶದ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲು ಬಿಜೆಪಿ ಸರ್ಕಾರ ನಿಂತಿದೆ 
 

ನರಗುಂದ(ಅ.06): ಉತ್ತರ ಪ್ರದೇಶ(Uttara Pradesh) ರಾಜ್ಯದಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ವಾಹನ ಹತ್ತಿಸಿ ರೈತರನ್ನು ಕೊಂದ ಸರ್ಕಾರದ ವಿರುದ್ಧ ಮುಂಬರುವ ಚುನಾವಣೆಯಲ್ಲಿ ದೇಶದ ರೈತರು ಸೇಡು ತೀರಿಸಿಕೊಳ್ಳುತ್ತೇವೆಂದು ರೈತ ಸೇನಾ ಸಂಘಟನೆ ಮುಖಂಡ ಎಸ್‌.ಬಿ. ಜೋಗಣ್ಣವರ ಎಚ್ಚರಿಕೆ ನೀಡಿದ್ದಾರೆ. 

2270ನೇ ದಿನದ ಮಹದಾಯಿ(Mahadayi) ಹಾಗೂ ಕಳಸಾ ಬಂಡೂರಿ(Kalasa Banduri) ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುವ ರೈತರನ್ನು ಕೊಂದ ಸರ್ಕಾರದ ವಿರುದ್ಧ ಹೋರಾಟಗಾರರು ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶವ್ಯಕ್ತಪಡಿಸಿ ಆನಂತರ ಮಾತನಾಡಿದರು.

ಹತ್ತು ತಿಂಗಳಿಂದ ದೇಶದ ಪಂಜಾಬ, ಹರಿಯಾಣ, ಉತ್ತರ ಪ್ರದೇಶದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ರೈತ(Farmer) ವಿರೋಧಿ ಕೃಷಿ ಕಾಯ್ದೆ ಮತ್ತು ವಿವಿಧ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಖಂಡಿಸಿ ದೆಹಲಿ ಗಡಿಯಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಈಗಾಗಲೇ 750ಕ್ಕಿಂತ ಹೆಚ್ಚು ರೈತರು ಪ್ರಾಣ ಕಳೆದುಕೊಂಡರೂ ಕೂಡ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ರದ್ದು ಮಾಡದೆ ದೇಶದ ಅನ್ನದಾತರನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಲು ಹೊರಟದೆ ಎಂದು ಗಂಭೀರವಾದ ಆರೋಪ ಮಾಡಿದರು.

'ರಾಜಕಾರಣಿಗಳ ನಿರ್ಲಕ್ಷ್ಯದಿಂದ ಮಹದಾಯಿ ಯೋಜನೆಗೆ ಹಿನ್ನಡೆ'

ಉತ್ತರ ಪ್ರದೇಶ ರಾಜ್ಯದಲ್ಲಿ ರೈತರು ಕೃಷಿ ಕಾಯ್ದೆ ರದ್ದು ಮಾಡಬೇಕೆಂದು ಹೋರಾಟ ಮಾಡುವ ಸಮಯದಲ್ಲಿ ಕೇಂದ್ರ ಬಿಜೆಪಿ(BJP) ಸರ್ಕಾರದ ರಾಜ್ಯ ಸಚಿವರ ಪುತ್ರ ಹೋರಾಟ ಮಾಡುವ ರೈತರ ಮೇಲೆ ವಾಹನ ಹತ್ತಿಸಿ 4 ಜನ ರೈತರನ್ನು ಕೊಂದಿದ್ದು ಖಂಡನೀಯ, ಮೇಲಾಗಿ ಯುಪಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನ್ಯಾಥ ವಿಪಕ್ಷದವರು ಆ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಬೇಕೆಂದರೆ ಅವಕಾಶ ನೀಡದೆ ದೇಶದ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಈ ಬಿಜೆಪಿ ಸರ್ಕಾರ ನಿಂತಿದೆ. ಆದ್ದರಿಂದ ಸದ್ಯ ಬಿಜೆಪಿ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಪೊಲೀಸರನ್ನು ಬಳಕೆ ಮಾಡಿಕೊಂಡು ರೈತ ಹೋರಾಟವನ್ನು ಹತ್ತಿಕಲು ಹೊರಟಿದೆ. ಆದರೆ ಯಾವ ಕಾಲದಿಂದಲೂ ಈ ರೈತ ಹೋರಾಟವನ್ನು ಹತ್ತಿಕ್ಕಲು ಸಾಧ್ಯ ಆಗಿಲ್ಲ ಎನ್ನುವುದನ್ನು ಅವರು ಇತಿಹಾಸದ ಮೂಲಕ ತಿಳಿದುಕೊಳ್ಳಬೇಕು. ಕೇಂದ್ರದ ಪ್ರಧಾನಿಗಳು ದೇಶದ ರೈತರ ಆರ್ಥಿಕತೆಯನ್ನು ದ್ವಿಗುಣ ಮಾಡುತ್ತೇನೆಂದು ಹೇಳಿ ರೈತ ಕುಲವನ್ನು ನಾಶ ಮಾಡಲು ನಿಂತಿದೆ. ಸರ್ಕಾರ ರೈತರಿಗೆ ಮಾಡುತ್ತಿರುವ ಅನ್ಯಾಯವನ್ನು ನಾವು ಕೂಡ ಅರಿತುಕೊಂಡಿದ್ದೇವೆ ಎಂದರು.

ಎ.ಪಿ. ಪಾಟೀಲ, ವೀರಬಸಪ್ಪ ಹೂಗಾರ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ವೆಂಕಪ್ಪ ಹುಜರತ್ತಿ, ವಿಜಯಕುಮಾರ ಹೂಗಾರ, ಮಲ್ಲೇಶ ಅಣ್ಣಿಗೇರಿ, ಯಲ್ಲಪ್ಪ ಚಲವಣ್ಣವರ, ರಾಮಚಂದ್ರ ಸಾಬಳೆ, ಅರ್ಜುನ ಮಾನೆ, ನಾಗರತ್ನ ಸವಳಭಾವಿ, ಮಲ್ಲವ್ವ ಭೋವಿ, ಈರಣ್ಣ ಗಡಗಿ, ಬಸವ್ವ ಪೂಜಾರ, ವಾಸು ಚವಾಣ, ಎಲ್‌.ಬಿ. ಮನನೇಕೊಪ್ಪ, ಚನ್ನಪ್ಪಗೌಡ ಪಾಟೀಲ, ಶಿವಪ್ಪ ಸಾತಣ್ಣವರ ಸೇರಿದಂತೆ ಮುಂತಾದವರು ಇದ್ದರು.
 

click me!