Shivamogga: ಹಸು ಹಾಲು ಕೊಡ್ತಿಲ್ಲ, ಒದೀತಿದೆ ಎಂದು ಪೊಲೀಸರಿಗೆ ರೈತನ ದೂರು..!

By Kannadaprabha NewsFirst Published Dec 5, 2021, 6:52 AM IST
Highlights

*  ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ನಡೆದ ಘಟನೆ
*  ಪೋಲಿಸ್ರೇ, ಹಾಲು ಕೊಡದೇ ಒದೆಯುವ ಹಸುಗಳಿಗೆ ಬುದ್ಧಿ ಹೇಳ್ರೀ
*  ಗಂಡ, ಹೆಂಡತಿಗೆ ಹಾಲು ಕೊಡದಕ್ಕೆ ಹಸುಗಳ ಮೇಲೆ ಕಂಪ್ಲೆಂಟ್‌
 

ಹೊಳೆಹೊನ್ನೂರು(ಡಿ.05):  ‘ಪೋಲಿಸ್ರೇ, ಹಾಲು ಕೊಡದೇ ಒದೆಯುವ ನಮ್ಮ ಹಸಗಳಿಗೆ ಸ್ವಲ್ಪ ಬುದ್ಧಿ ಹೇಳ್ರೀ..’ ಹೀಗಂತ ಹೇಳಿದ್ರೆ ಪೋಲಿಸ್ನೋರು ಏನು ಮಾಡಬೇಕು! ಶನಿವಾರ ಹೀಗೊಂದು ದೂರು ಹೇಳಿಕೊಂಡು ಬಂದವನ ನೋಡಿ ನಗಬೇಕೋ, ಆತನ ಮಂಡೆಯೊಳಗೆ ಬುದ್ಧಿ ಇದೆಯೋ, ಲದ್ದಿ ಇದೆಯೋ ಎಂದುಕೊಳ್ಳಬೇಕೋ!?

ಇಂಥ ಉಭಯ ಸಂಕಟಕ್ಕೆ ಒಳಗಾಗಿದ್ದು ಹೊಳೆಹೊನ್ನೂರು(Holehonnuru) ಠಾಣೆಯ ಪೊಲೀಸರು(Police). ಪ್ರತಿದಿನ ಕೊಲೆ, ಸುಲಿಗೆ, ದರೋಡೆ, ಹೊಡೆದಾಟ, ಕಳ್ಳತನ ಎಂದೆಲ್ಲ ಪೊಲೀಸರು ತಲೆಕೆಡಿಸಿಕೊಳ್ಳುತ್ತಾರೆ. ಆ ಕೇಸು ಏನಾಯ್ತು, ಈ ಕೇಸು ಏನಾಯ್ತು ಅನ್ನೋದೇ ಪ್ರತಿದಿನ ತಲೆನೋವಾಗಿರುತ್ತದೆ. ಅಂಥ ಸಂದರ್ಭದಲ್ಲಿ ಹೀಗೆ ತಲೆಬುಡವಿಲ್ಲದ ಸಮಸ್ಯೆ ಹೇಳಿಕೊಂಡು ಶನಿವಾರ ಠಾಣೆಗೆ ಬಂದರೆ ಅಂಥವರ ಬಗ್ಗೆ ಪಾಪ ಪೊಲೀಸರು ಏನು ಮಾಡಬೇಕು.

Shivamogga: ಅಧಿಕಾರಿಗಳ ಎಡವಟ್ಟು: ರಾಜ್ಯಪಾಲರಿಗೆ ಸಿಗದ ‘ಜೋಗ್‌ಫಾಲ್ಸ್‌’ ವೈಭವ

ತನ್ನ ಹಸುಗಳು(Cow) ಹಾಲು(Milk) ಕೊಡುತ್ತಿಲ್ಲ, ಕೆಚ್ಚಲಿಗೆ ಕೈ ಹಾಕಿದರೆ ಕ್ರಿಕೆಟಲ್ಲಿ ಸಿಕ್ಸು, ಫೋರು ಬಾರಿದ್ದಂಗೆ ಗಂಡ, ಹೆಂಡ್ರು ಇಬ್ಬರಿಗೂ ಒದೆಯುತ್ತಿವೆ ಅಂತ ಠಾಣೆಗೆ ಬಂದ ರೈತ(Farmer) ಹೇಳಿಕೊಂಡಿದ್ದಾನೆ. ಆತನಿಗೆ ಇಂಥ ಪ್ರಚಂಡ ಐಡಿಯಾ ಕೊಟ್ಟ ಬುದ್ಧಿವಂತ ಯಾರು ಎಂಬುದು ಅತ್ತಟ್ಟಿಗಿರಲಿ. ಆದರೆ, ಹಸಗಳು ಮನುಷ್ಯರ ಮಾತು ಕೇಳ್ತಾವಾ? ಅಂತಾನೂ ಯೋಚಿಸಿದ ಈ ರೈತ ಠಾಣೆ ಮೆಟ್ಟಿಲೇರಿ ಒಳಗೆ ಬರುವವರೆಗೂ ಬುದ್ಧಿ ನೆಟ್ಟಗಾಗೇ ಇಲ್ಲ.
ಹಾಗೆ ಠಾಣೆಗೆ ಬಂದೋನೇ, ಪೊಲೀಸರ ಮುಂದೆ ‘ಸಾಕಿದ್ದ 4 ಹಸುಗಳನ್ನು ದಿನಾ ಬೆಳಗ್ಗೆ 8 ಗಂಟೆಯಿಂದ 11 ಗಂಟೆವರೆಗೂ ಹಾಗೂ ಸಂಜೆ 4 ಗಂಟೆಯಿಂದ 6 ಗಂಟೆವರೆಗೂ ತುಂಬಾ ಚೆನ್ನಾಗಿ ಮೇಯಿಸಿಕೊಂಡು ಬರುತ್ತಿದ್ದೆ. ನಾಲ್ಕಾರು ದಿನಗಳಿಂದ ನಮ್ಮ ಹಸಗಳು ಹಾಲು ಕೊಡದೇ ಸತಾಯಿಸ್ತಿವೆ.. ತನಗೂ ಹಾಗೂ ತನ್ನ ಪತ್ನಿ ರತ್ನಮ್ಮಗೂ ಹಿಗ್ಗಾಮುಗ್ಗ ಝಾಡಿಸುತ್ತಿವೆ. ಆ ಹಸಗಳನ್ನ ಠಾಣೆಗೆ ಕರೆಸಿ ಬುದ್ಧಿ ಹೇಳ್ರೀ.. ನನಗೆ ನ್ಯಾಯ ಕೊಡುಸ್ರೀ’ ಅಂತ ಹೇಳಿ ಮುಗ್ಧತೆ ಮೆರೆದಿದ್ದಾನೆ. ಪೊಲೀಸರು ಕ್ಷಣ ಆವಾಕ್ಕಾಗಿರಲೇಬೇಕು.

ಚಾಲಾಕಿ ಜನಗಳೇ ಪೊಲೀಸರ ಲಾಠಿ, ಬೂಟಿನ ಒದೆ ತಿಂದು, ಮಾತು ಕೇಳದೇ ಇರುವಾಗ ಇನ್ನು ಬಡಪಾಯಿ ಹಸುಗಳಿಗೆ ಹೊಡೆಯೋಕೆ ಮನಸು ಬರ್ತದಾ ಅಂತ ಯೋಚಿಸಿರಬೇಕು. ಗೋ ಮಾತೆಗೆ ಹೊಡೆದರೋ ನರಕಕ್ಕೇ ಹೋಗೋದು ಅಂತಾನೂ ಅವರಿಗೆ ಅನಿಸಿರಬೇಕು. ಅದಕ್ಕೇ ರೈತನಿಗೆ ಬುದ್ಧಿ ಹೇಳಿಕಳಿಸಿದ್ದಾರೆ.

‘‘ನೋಡಪ್ಪ ರೈತ ರಾಮಯ್ಯ, ಇದು ಪೊಲೀಸ್‌ ಸ್ಟೇಷನ್ನು. ಇಲ್ಲಿ ಜನಗಳಿಗೆ ಮಾತ್ರ ಎಂಟ್ರಿ, ದನಗಳಿಗೆ ಖಂಡಿತಾ ನೋ ಎಂಟ್ರಿ. ಅವುಗಳಿಗೆ ಮಾತಾಡ್ಸೋದು ಅಂದ್ರೇನು, ಹಾಲು ಕರಿಯೋಕೆ ಅವಕಾಶ ಮಾಡಿಕೊಡಿ ಅಂತ ಬುದ್ಧಿ ಹೇಳೋದೇನು, ಇವೆಲ್ಲ ನಮ್ಮಂಥ ಮಾಮೂಲಿ ಪೋಲೀಸ್ರಿಗೆ ಆಗೋದಿಲ್ಲಪ್ಪ.. ನೀನು ಈಗ ಮನೆಗೆ ಹೋಗಪ್ಪ’’ ಎಂದ ಹೇಳಿಕಳಿಸಿದ್ದಾರೆ.

ಅಂದಹಾಗೆ, ಶನಿವಾರ ಬೆಳಗ್ಗೆ ಪೊಲೀಸ್‌ ಠಾಣೆಗೆ ಆಗಮಿಸಿದ್ದು ಸಿದ್ಲಿಪುರ ಗ್ರಾಮದ ರೈತ ರಾಮಯ್ಯ. ಆತ ಪೊಲೀಸ್‌ ಠಾಣೆಗೆ ಬಂದು ಪೊಲೀಸರಿಗೆ ತನ್ನ ಹಸುಗಳು ಹಾಲು ಕೊಡದೇ ಒದೆಯುವುದರ ವಿರುದ್ಧ ದೂರಿಕೊಂಡಿದ್ದಾನೆ. ಆ ಸ್ವಾರಸ್ಯಕರ ವಿಚಾರವನ್ನು ಇಲ್ಲಿ ಕೊಂಚ ಹಾಸ್ಯಮಯವಾಗಿ ವರ್ಣಿಸಲಾಗಿದೆ ಅಷ್ಟೇ.

karnataka Rain : ಚಿಕ್ಕಮಗಳೂರಿಂದ ಶಿವಮೊಗ್ಗ, ಯಶವಂತಪುರ ರೈಲು ಸಂಚಾರ ರದ್ದು

ನೊಣಗಳಿಂದ ರಕ್ಷಿಸಲು ಹಸುಗಳಿಗೆ ಸೀರೆ : ಕೋಳಿ ಫಾರಂ ತಂದ ಸಂಕಷ್ಟ

ಊಟ ಮಾಡಲು ಹೋದರೆ ಕೈಗೆ ಮುತ್ತಿಕ್ಕುವ ನೊಣ (Flies), ಬೆಳೆಗಳಿಗೂ ಈಗದ ಬಾಧೆ, ಹಸುಗಳಿಗೂ (Cow) ನೊಣಗಳು ಕಚ್ಚಿ ಗಾಯಗೊಳಿಸಿದ್ದು, ನೊಣಗಳಿಂದ ಪಾರು ಮಾಡಲು ಜಾನುವಾರುಗಳಿಗೆ ಇಲ್ಲಿನ ರೈತರು (farmers) ಸೀರೆ (Saree) ಸುತ್ತುತ್ತಿದ್ದಾರೆ.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು (Hanur) ತಾಲೂಕಿನ ಹುಲ್ಲೇಪುರ ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಕೋಳಿ ಸಾಕಾಣಿಕೆ ಕೇಂದ್ರದಲ್ಲಿನ ಅವೈಜ್ಞಾನಿಕ ನಿರ್ವಹಣೆಯಿಂದ ಇಲ್ಲಿನ ರೈತರು ನೊಣಗಳಿಂದ ಜಾನುವಾರು ಕಾಪಾಡಲು ಸೀರೆಗೆ ಮೊರೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
 

click me!