Ethanol Petrol: ಸಕ್ಕರೆಗಿಂತ ಎಥೆನಾಲ್‌ ಉತ್ಪಾದನೆಗೆ ಕಾರ್ಖಾನೆಗಳ ಒತ್ತು?

By Kannadaprabha NewsFirst Published Dec 22, 2021, 8:37 AM IST
Highlights

*  65 ಸಕ್ಕರೆ ಕಾರ್ಖಾನೆಗಳ ಪೈಕಿ 32ರಲ್ಲಿ ಎಥೆನಾಲ್‌ ಉತ್ಪಾದನೆ ಶುರು
*  ಉಳಿದ 33 ಕಾರ್ಖಾನೆಗಳಿಂದ ಉತ್ಪಾದನೆಗೆ ಅನುಮತಿ
*  ಎಥೆನಾಲ್‌ ಉತ್ಪಾದನೆಗೆಂದೇ ತಲೆಯೆತ್ತಲಿವೆ ಎರಡು ಕಾರ್ಖಾನೆಗಳು
 

ಶಿವಾನಂದ ಗೊಂಬಿ

ಬೆಳಗಾವಿ(ಡಿ.22):  ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ(Karnataka) ಸಕ್ಕರೆ ಕಾರ್ಖಾನೆಗಳು(Sugar Factories) ಸಕ್ಕರೆ ಉತ್ಪಾದನೆ ಸೀಮಿತಗೊಳಿಸಿ ಎಥೆನಾಲ್‌ ಉತ್ಪಾದನೆಗೆ ಹೆಚ್ಚು ಒತ್ತು ನೀಡಲು ಮುಂದಾಗಿವೆ. ಸಕ್ಕರೆಯ ಉಸಾಬರಿಗೆ ಹೋಗದೇ ಬರೀ ಎಥೆನಾಲ್‌(Ethanol) ಉತ್ಪಾದಿಸಲು ಹೊಸದಾಗಿ ಎರಡು ಕಾರ್ಖಾನೆ ಕೂಡ ಸ್ಥಾಪನೆಯಾಗಲಿವೆ. ಇದಕ್ಕೆ ಕೇಂದ್ರದಿಂದ ಅನುಮತಿಯೂ ದೊರೆತಿದೆ. ಈ ಹೊಸ ಕಾರ್ಖಾನೆಗಳು ಹಾವೇರಿ(Haveri) ಹಾಗೂ ಬೆಳಗಾವಿ(Belagavi) ಜಿಲ್ಲೆಯಲ್ಲಿ ಸ್ಥಾಪನೆಯಾಗಲಿವೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಒಟ್ಟು 89 ಸಕ್ಕರೆ ಕಾರ್ಖಾನೆಗಳಿದ್ದವು. ಇವುಗಳ ಪೈಕಿ ಇದೀಗ ಚಾಲ್ತಿಯಲ್ಲಿರುವುದು 65 ಕಾರ್ಖಾನೆಗಳು ಮಾತ್ರ. ಉಳಿದ 24 ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಆರ್ಥಿಕ ಸಂಕಷ್ಟದ ಕಾರಣದಿಂದ ಬಾಗಿಲು ಮುಚ್ಚಿವೆ ಎಂದು ಮೂಲಗಳು ತಿಳಿಸುತ್ತವೆ. ಈಗ ಚಾಲ್ತಿಯಲ್ಲಿರುವ 65 ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಇದೀಗ ಎಥೆನಾಲ್‌ ಉತ್ಪಾದನೆ ಮೂಲಕ ಹೊಸ ಮಾರ್ಗ ಕಂಡುಕೊಳ್ಳುತ್ತಿವೆ.

Ethanol Petrol:ತೈಲ ಬೆಲೆ ಏರಿಕೆ ಸಮಸ್ಯೆ ಪರಿಹರಿಸಲು ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಗೆ ಕೇಂದ್ರ ಅನುಮೋದನೆ!

65 ಕಾರ್ಖಾನೆಗಳ ಪೈಕಿ 32 ಕಾರ್ಖಾನೆಗಳು ಈಗಾಗಲೇ ಎಥೆನಾಲ್‌ ಉತ್ಪಾದನೆ ಮಾಡುತ್ತಿವೆ. ಇವುಗಳಿಂದ ಪ್ರತಿನಿತ್ಯ 3035 ಕೆಎಲ್‌ಪಿಡಿ ಎಥೆನಾಲ್‌ ಉತ್ಪಾದನೆಯಾಗುತ್ತಿದೆ. ಈ 32 ಕಾರ್ಖಾನೆಗಳು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯೋಚಿಸಿ ಕೇಂದ್ರ ಸರ್ಕಾರದಿಂದ(Central Government) ಅನುಮತಿ ಪಡೆದಿವೆ. ಇನ್ನುಳಿದ 33 ಕಾರ್ಖಾನೆಗಳೂ ಎಥೆನಾಲ್‌ ಘಟಕ ತೆರೆಯಲು ಅನುಮತಿ ಪಡೆದುಕೊಂಡಿವೆ. ಇದರಿಂದಾಗಿ ಶೀಘ್ರದಲ್ಲೇ ರಾಜ್ಯದ ಎಲ್ಲ ಅಂದರೆ 65 ಕಾರ್ಖಾನೆಗಳಲ್ಲೂ ಎಥೆನಾಲ್‌ ಉತ್ಪಾದನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಏಕೆ ಬೇಕು ಎಥೆನಾಲ್‌:

ಕಾರ್ಖಾನೆಗಳು ಬರೀ ಸಕ್ಕರೆಯನ್ನಷ್ಟೇ ಉತ್ಪಾದಿಸುವುದರಿಂದ ಅಷ್ಟೊಂದು ಲಾಭ ಬರುವುದಿಲ್ಲ. ಸಕ್ಕರೆ ಉತ್ಪಾದಿಸಿದ ಬಳಿಕ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೆ ಅದನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು. ಹೀಗೆ ದಾಸ್ತಾನಾಗಿದ್ದ ಸಕ್ಕರೆ ಮಳೆ, ಗಾಳಿಗೆ ಹಾಳಾದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ರೈತರಿಗೂ(Farmers) ಸಕಾಲಕ್ಕೆ ದುಡ್ಡು ಕೊಡಲು ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಎಥೆನಾಲ್‌ ಉತ್ಪಾದಿಸಿದರೆ ಕೇಂದ್ರ ಸರ್ಕಾರದಿಂದ ಸಾಲ ಸೇರಿದಂತೆ ವಿವಿಧ ಸೌಲಭ್ಯವೂ ಸಿಗುತ್ತದೆ. ಎಥೆನಾಲ್‌ಗೆ ಮಾರುಕಟ್ಟೆಯ ಸಮಸ್ಯೆಯಾಗುವುದಿಲ್ಲ ಎನ್ನುವುದು ಕಾರ್ಖಾನೆಗಳ ಅಭಿಪ್ರಾಯ.

ಕೇಂದ್ರ ಸರ್ಕಾರವೇ 2022ರಲ್ಲಿ ಪೆಟ್ರೋಲ್‌ನಲ್ಲಿ(Petrol) ಶೇ.10ರಷ್ಟು ಹಾಗೂ 2025ರಲ್ಲಿ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡಲು ಯೋಜಿಸಿದೆ. ಇದರಿಂದಾಗಿ ಎಥೆನಾಲ್‌ ಪರ್ಯಾಯ ಇಂಧನವಾಗಿ ಬಳಕೆಯಾಗುವುದರಿಂದ ನಷ್ಟವಾಗುವುದಿಲ್ಲ. ರೈತರಿಗೂ ಸಕಾಲದಲ್ಲಿ ಹಣ ಪಾವತಿ ಮಾಡಬಹುದಾಗಿದೆ. ಹೀಗಾಗಿ ಎಥೆನಾಲ್‌ ಉತ್ಪಾದನೆಯತ್ತ ಕಾರ್ಖಾನೆಗಳು ಚಿತ್ತ ಹರಿಸಿವೆ.

ರಾಜ್ಯದ ಸಕ್ಕರೆ ಕಾರ್ಖಾನೆಗಳು ಎಥೆನಾಲ್‌ ಉತ್ಪಾದನೆಗೆ ಒತ್ತು ನೀಡುತ್ತಿವೆ. ಇದಕ್ಕೆ ಪೂರಕವೆಂಬಂತೆ ರಾಜ್ಯ ಸರ್ಕಾರ ಎಥೆನಾಲ್‌ ನೀತಿ ರೂಪಿಸಲು ನಿರ್ಧರಿಸಿ ಕಾರ್ಯಪ್ರವೃತ್ತವಾಗಿದೆ ಅಂತ ಕಬ್ಬು, ಸಕ್ಕರೆ ಹಾಗೂ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankar Patil Munenkoppa) ತಿಳಿಸಿದ್ದಾರೆ. 

ರಾಜ್ಯದ 32 ಕಾರ್ಖಾನೆಗಳು ಈಗಾಗಲೇ ಎಥೆನಾಲ್‌ ಉತ್ಪಾದಿಸುತ್ತಿವೆ. ಇವು ತಮ್ಮ ಸಾಮರ್ಥ್ಯ ಹೆಚ್ಚಿಸಲು ಹಾಗೂ ಉಳಿದ 33 ಕಾರ್ಖಾನೆಗಳು ಹೊಸ ಘಟಕ ಸ್ಥಾಪನೆಗೆ ಕೇಂದ್ರದಿಂದ ಅನುಮತಿ ಪಡೆದಿವೆ ಅಂತ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತ ಶಿವಾನಂದ ಕಲಗೇರಿ ಹೇಳಿದ್ದಾರೆ.  

2024ರಲ್ಲಿ ಹರಿಹರದಲ್ಲಿ 2ಜಿ ಎಥೆನಾಲ್‌ ಸ್ಥಾವರ

ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗೆ ಸರ್ಕಾರದ ಸಿಹಿಸುದ್ದಿ

ಬೆಳಗಾವಿ: ಕಬ್ಬು (Cane) ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳ (Sugar Cane)  ಮಾಲಿಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಎಥೆನಾಲ್‌ ಉತ್ಪಾದನೆ ಪ್ರೋತ್ಸಾಹಿಸಲು ಪ್ರತ್ಯೇಕ ನೀತಿ ಜಾರಿಗೊಳಿಸಲು ನಿರ್ಧರಿಸಿದೆ. 

ಎಥೆನಾಲ್‌ ಉತ್ಪಾದನೆ ಇಂದು ಅಗತ್ಯ ಹಾಗೂ ಅನಿವಾರ್ಯ. ಪೆಟ್ರೋಲ್‌ (Petrol) ಹಾಗೂ ಡೀಸೆಲ್‌ (Diesel) ಬಳಕೆ ಕಡಿಮೆ ಮಾಡಬೇಕಿದೆ. ಪೆಟ್ರೋಲ್‌ (Petrol), ಡೀಸೆಲ್‌ ಸೇರಿದಂತೆ ಇತರೆ ತೈಲೋತ್ಪನ್ನಗಳಿಗೆ ಪರ್ಯಾಯವಾಗಿ ಎಥೆನಾಲ್‌ ಬಳಸಬಹುದಾಗಿದೆ. ಇದರಿಂದ ಇಂಧನ ಸಮಸ್ಯೆ ಉತ್ತರ ದೊರೆಯಲಿದ್ದು. ಹೆಚ್ಚಿನ ಉದ್ಯೋಗ (Employment) ಸೃಷ್ಟಿಯಾಗಲಿದೆ ಅಂತ ಕಬ್ಬು, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದರು.  
 

click me!